Kundapra.com ಕುಂದಾಪ್ರ ಡಾಟ್ ಕಾಂ

ಯುವ ಬಂಟರ ಸಂಘದ ಕಾರ್ಯ ಶ್ಲಾಘನೀಯ: ಬೆಳ್ಳಾಡಿ ಅಶೋಕ್ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕಳೆದ ಹತ್ತು ವರ್ಷಗಳಿಂದ ಯುವ ಬಂಟರ ಸಂಘ ನಡೆದು ಬಂದ ಹಾದಿ ಅತ್ಯಂತ ಸ್ಮರಣೀಯವಾದದ್ದು. ಕಳೆದ ಎರಡು ವರ್ಷದ ದಶಮ ಸಂಭ್ರಮದ ಕಾಲಘಟ್ಟದಲ್ಲಿ ತನ್ನ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಕರ್ನಾಟಕದ ಎಲ್ಲಾ ಸಂಘಗಳಿಗೆ ಮಾದರಿಯಾಗಿ ತೋರಿಸಿ ಕೊಟ್ಟಿದ್ದಲ್ಲದೆ, ಜಾಗತಿಕ ಮಟ್ಟದಲ್ಲೂ ಸಹ ಮನ್ನಣೆಯನ್ನು ಪಡೆದುಕೊಂಡಿದೆ ಎಂದು ಮುಂಬೈನ ಯುವ ಉದ್ಯಮಿ, ಯುವ ಬಂಟರ ಸಂಘದ ನಿರ್ದೇಶಕರು ಆದ ಬೆಳ್ಳಾಡಿ ಅಶೋಕ್ ಶೆಟ್ಟಿ ಹೇಳಿದರು.

ಕುಂದಾಪುರ ತಾಲೂಕು ಯುವ ಬಂಟರ ಸಂಘದ 2024 – 26ನೇ ಸಾಲಿನ ನೂತನ ಅಧ್ಯಕ್ಷರ ಆಡಳಿತಾವಧಿಯ ಕಾರ್ಯಕ್ರಮಗಳ ರೂಪುರೇಷೆಗಳ ಕೈಪಿಡಿಯನ್ನು ಬೆಳ್ಳಾಡಿಯಲ್ಲಿ ಅನಾವರಣಗೊಳಿಸಿ ಅವರು ಮಾತನಾಡಿದರು.

ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ನಿತೀಶ್ ಶೆಟ್ಟಿ ಬಸ್ರೂರು ವಹಿಸಿದ್ದರು. ಸ್ಥಾಪಕಾಧ್ಯಕ್ಷ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಶುಭ ಹಾರೈಸಿ ಈ ಹಿಂದೆ ಸಂಘಕ್ಕೆ ಉದಾರ ಮನಸ್ಸಿನಿಂದ ದೇಣಿಗೆಗಳನ್ನು ನೀಡಿದ ದಾನಿಗಳನ್ನು ಸ್ಮರಿಸಿಕೊಂಡರು.

ನಿಕಟ ಪೂರ್ವ ಅಧ್ಯಕ್ಷರಾದ ಸುನಿಲ್ ಶೆಟ್ಟಿ ಹೇರಿಕುದ್ರು, ನಿಕಟ ಪೂರ್ವ ಕಾರ್ಯದರ್ಶಿ ಉದಯ್ ಕುಮಾರ್ ಶೆಟ್ಟಿ ಮಚ್ಚಟ್ಟು,  ರಜತ್ ಹೆಗ್ಡೆ ಯಡಾಡಿ ಮತ್ಯಾಡಿ, ಸುಕುಮಾರ್ ಶೆಟ್ಟಿ ಹೇರಿಕುದ್ರು, ರಾಜೀವ ಶೆಟ್ಟಿ ಹೆಂಗವಳ್ಳಿ, ಸುರೇಂದ್ರ ಶೆಟ್ಟಿ ಗುಲ್ವಾಡಿ, ಸುಕುಮಾರ ಶೆಟ್ಟಿ ಆಲೂರು, ರಾಜೇಶ್ ಶೆಟ್ಟಿ ವಕ್ವಾಡಿ ಉಪಸ್ಥಿತರಿದ್ದರು.

ಡಾ. ಚೇತನ್ ಕುಮಾರ್ ಶೆಟ್ಟಿ ಕೋವಾಡಿ ನಿರೂಪಿಸಿ, ವಂದಿಸಿದರು.

Exit mobile version