ಇತ್ತೀಚೆಗೆ ವಿದ್ಯಾಗಿರಿಯ ಆಳ್ವಾಸ್ ಸಭಾಂಗಣದಲ್ಲಿ ನಡೆದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ವಿವಿಧ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಲಿಖಿತ ಪರೀಕ್ಷೆ, ಆಶು ಭಾಷಣ ಸ್ಪರ್ಧೆ ಮತ್ತು ಸಂದರ್ಶನದ ಮೂಲಕ ಈ ಆಯ್ಕೆಗಳನ್ನು ನಡೆಸಲಾಯಿತು. ಇದೇ ಸಂದರ್ಭದಲ್ಲಿ ಕವಿಗೋಷ್ಠಿಯಲ್ಲಿ ಭಾಗವಹಿಸುವ ಕವಿಗಳನ್ನು ಮತ್ತು ಇತರ ಗೋಷ್ಠಿಗಳಿಗಿರುವ ಭಾಷಣಕಾರರನ್ನು ಆಯ್ಕೆ ಮಾಡಲಾಯಿತು. ಆಯ್ಕೆ ಪ್ರಕ್ರಿಯೆಯಲ್ಲಿ ಮೌಲ್ಯ ಮಾಪಕರಾಗಿ ಅಂಡಾರು ಗುಣಪಾಲ ಹೆಗ್ಡೆ, ಶ್ರೀಧರ ಜೈನ್ , ಡಾ. ಧನಂಜಯ ಕುಂಬ್ಳೆ ಭಾಗವಹಿಸಿದ್ದರು.
ಅದ್ಯಕ್ಷೆಯಾಗಿ ಆಯ್ಕೆಯಾದ ಶಾಲಿಕಾ ಎಕ್ಕಾರು ರಂಗಭೂಮಿ, ಯಕ್ಷಗಾನ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ. ಹಲವು ಶ್ರೇಷ್ಠ ನಿರ್ದೇಶಕರು ನಿರ್ದೇಶಿಸಿದ ನಾಟಕಗಳಲ್ಲಿ ಮುಖ್ಯ ಪಾತ್ರಗಳಲ್ಲಿ ನಟನೆ. ನೀಲಿಕುದುರೆ, ನಿದ್ರಾನಗರಿ, ಪಂಜರ ಶಾಲೆ, ಪುಷ್ಪರಾಣಿ, ಅಗ್ನಿಪಥ, ಮಕ್ಕಳ ರಾಮಾಯಣ, ಗೆಲಿಲಿಯೋ, ಮೇರಿಕ್ಯೂರಿ, ಮಹಿಳಾ ಭಾರತ ಅವರು ನಟಿಸಿದ ಮುಖ್ಯ ನಾಟಕಗಳು. ಖ್ಯಾತ ಯಕ್ಷಗಾನ ಭಾಗವತ ಶ್ರೀ ಸದಾನಂದ ಐತಾಳರ ನಿರ್ದೇಶನದಲ್ಲಿ ಬಬ್ರುವಾಹನ ಕಾಳಗ, ಸುಧನ್ವ ಕಾಳಗ, ಗದಾಯುದ್ಧ ಮುಂತಾದ ಮಕ್ಕಳ ಯಕ್ಷಗಾನದಲ್ಲ್ಲಿ ಮುಖ್ಯ ಪಾತ್ರ. ಕವಿಗೋಷ್ಠಿಗಳಲ್ಲಿ ಕವನವಾಚನ, ಕನ್ನಡ ಸಾಹಿತ್ಯದ ಅಧ್ಯಯನ ಆಸಕ್ತಿಯ ಕ್ಷೇತ್ರ.
ಕವಿಗೋಷ್ಠಿಯ ಅಧ್ಯಕ್ಷೆಯಾಗಿ ಆಯ್ಕೆಗೊಂಡ ಸುಶ್ಮಿತಾ ಎಸ್ ರೈ ಮುಳ್ಳೇರಿಯಾ ಇವರು ಭರತನಾಟ್ಯ, ಕೂಚುಪುಡಿ, ಜಾನಪದ ನೃತ್ಯ ಮತ್ತು ಯಕ್ಷಗಾನ ಕಲಾವಿದೆ. ಕವಿತಾ ರಚನೆ, ಪ್ರಬಂಧ ರಚನೆ ಭಾಷಣ ಕಂಠಪಾಠ ಸ್ಪರ್ಧೆಗಳಲ್ಲಿ ಹಲವು ಬಹುಮಾನಗಳನ್ನು ಪಡೆದಾಕೆ. ಕೇರಳ ಜನಪದ ಜಾತ್ರೆ ಸನ್ಮಾನ, ಯಕ್ಷಪ್ರಭಾ ಪ್ರಶಸ್ತಿ, ಗಡಿನಾಡಧ್ವನಿ ರಾಜ್ಯ ಪ್ರಶಸ್ತಿ, ಯಕ್ಷಭಾವೈಕ್ಯ ಪ್ರಶಸ್ತಿ ಮೊದಲಾದ ಹಲವು ಗೌರವಗಳು ಇವರಿಗೆ ಸಂದಿವೆ. ಈಕೆ ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾದ ಸುಧೀರ್ ಕುಮಾರ್ ರೈ ಮತ್ತು ಕುಶಿತ ಕುಮಾರಿ ಇವರ ಪುತ್ರಿ.