ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಕಾಳಾವರ ಗ್ರಾಮದ ಸಳ್ವಾಡಿಯ ನಿವಾಸಿ ಶೀನ (54) ಅವರು ತೆಂಗಿನ ಮರ ಹತ್ತುವಾಗ ಆಕಸ್ಮಿಕವಾಗಿ ಕೈ ಕಾಲು ಜಾರಿ ಬಾವಿಗೆ ಬಿದ್ದು ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಶೀನ ಅವರು ಶುಕ್ರವಾರ ಬೆಳಿಗ್ಗೆ ಸಳ್ವಾಡಿಯ ಉದಯ ಅವರ ಮನೆಯ ತೋಟದ ಕೆಲಸಕ್ಕೆಂದು ಸಂಬಂಧಿ ರಾಜು, ಗೋಪಾಲ ಹಾಗೂ ಸುರೇಶ ಅವರೊಂದಿಗೆ ತೆರಳಿದ್ದರು. ತೆಂಗಿನ ಕಾಯಿ ಕೊಯ್ಯಲು ಮರ ಹತ್ತುತ್ತಿರುವಾಗ ಆಕಸ್ಮಿಕವಾಗಿ ಜಾರಿ ಅಲ್ಲಿಯೇ ಇದ್ದ ಬಾವಿಗೆ ಬಿದ್ದು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಕೂಡಲೇ ಅಗ್ನಿಶಾಮಕ ದಳದವರ ಸಹಾಯದಿಂದ ಮೃತದೇಹವನ್ನು ಮೇಲಕ್ಕೆತ್ತಲಾಯಿತು. ಸಂಬಂಧಿ ಚಂದ್ರ ಅವರು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

