Site icon Kundapra.com ಕುಂದಾಪ್ರ ಡಾಟ್ ಕಾಂ

ಗುರುಕುಲ ಶಾಲೆಯ ಸಿಎಸ್‌ಎಮ್‌ ನಿರ್ಭಯ್ ಯು. ಶೆಟ್ಟಿ ಅವರಿಗೆ ಸನ್ಮಾನ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಗುರುವಿಲ್ಲದ ವಿದ್ಯೆ, ಗುರಿ ಇಲ್ಲದ ಜೀವನ, ಅದು ನಿರರ್ಥಕ ಎಂಬ ಮಾತಿದೆ. ಶಿಕ್ಷಣ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ತುಂಬಾ ಮುಖ್ಯ ಘಟ್ಟ ಹಾಗೆ ಪ್ರತಿಯೊಬ್ಬರೂ ತಮ್ಮ ಜೀವನದಲ್ಲೊಂದು ಗುರಿಯನ್ನು ಇಟ್ಟುಕೊಳ್ಳಬೇಕು ಹಾಗೂ ಆ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು. ಗುರಿ ಸಾಧನೆ ಹೇಗಿರಬೇಕು ಎಂಬುದನ್ನು ಒಂದು ಜೇಡರ ಹುಳುವಿನ ಕಥೆಯ ಮೂಲಕ ಮಕ್ಕಳಿಗೆ ಮನದಟ್ಟು ಮಾಡಿಸಿದರು. ನಿಮ್ಮೆಲ್ಲರಿಗೂ ಇಂದು ಉತ್ತಮ ರೀತಿಯ ಸಂಸ್ಕಾರಯುತ ಶಿಕ್ಷಣ ಈ ಸಂಸ್ಥೆಯಿಂದ ಸಿಗುತ್ತಿದೆ. ಅದರ ಸದುಪಯೋಗ ಪಡೆದುಕೊಂಡು ಛಲವಂತರಾದಾಗ ಮಾತ್ರ ನೀವು ನಿಮ್ಮ ಗುರಿಯನ್ನು, ಯಶಸ್ಸನ್ನು ಕಂಡುಕೊಳ್ಳಲು ಸಾಧ್ಯ ಹಾಗಾಗಿ ಇವತ್ತಿನಿಂದಲೇ ನೀವೆಲ್ಲರೂ ನಿಮ್ಮ ಗುರಿಯತ್ತ ಹೆಜ್ಜೆ ಹಾಕಲು ಪ್ರಯತ್ನಿಸಿ ಎಂದು ಲೆಫ್ಟಿನೆಂಟ್ ಕರ್ನಲ್ ಎಂ. ಕೃಷ್ಣ ಶೆಟ್ಟಿ ಅವರು ಹೇಳಿದರು.

ಅವರು ಗಣರಾಜ್ಯೋತ್ಸವ ಶಿಬಿರದಲ್ಲಿ ಕರ್ನಾಟಕ ಮತ್ತು ಗೋವಾವನ್ನು ಪ್ರತಿನಿಧಿಸಿ ಸಾಧನೆ ಮಾಡಿದ ಸಿಎಸ್‌ಎಮ್‌ ನಿರ್ಭಯ್ ಯು. ಶೆಟ್ಟಿ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಇವರ ಸಾಧನೆ ನಿಜಕ್ಕೂ ಶ್ಲಾಘನೀಯ ಹಾಗೂ ಇತರ ವಿದ್ಯಾರ್ಥಿಗಳಿಗೆ ಮಾದರಿ. ನಿಜವಾಗಿಯೂ ಮುಂದಿನ ದಿನಗಳಲ್ಲಿ ಒಂದು ಉತ್ತಮ ಭವಿಷ್ಯವನ್ನು ನೀನು ಈ ಕ್ಷೇತ್ರದಲ್ಲಿ ಕಂಡುಕೊಳ್ಳುವೆ ಆ ನಿಟ್ಟಿನಲ್ಲಿ ನೀನು ನಿರಂತರ ಪರಿಶ್ರಮ ನಡೆಸು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಜಂಟಿ ಕಾರ್ಯನಿರ್ವಾಹಕರಾದ ಸುಭಾಶ್ಚಂದ್ರ ಶೆಟ್ಟಿ ಅವರು ಮಾತನಾಡಿ, ಈ ವಿಶೇಷ ಸಂದರ್ಭಕ್ಕೆ ಇಂದು ಲೆಫ್ಟಿನೆಂಟ್ ಕರ್ನಲ್ ಎಂ. ಕೃಷ್ಣ ಶೆಟ್ಟಿ ಅವರು ನಮ್ಮೊಂದಿಗೆ ಇರುವುದು ಒಂದು ದೊಡ್ಡ ಗೌರವವಾಗಿದೆ. ನಿಮ್ಮ ಉಪಸ್ಥಿತಿಯು ಈ ಕಾರ್ಯಕ್ರಮವನ್ನು ಇನ್ನಷ್ಟು ಅರ್ಥಪೂರ್ಣವಾಗಿಸಿದೆ ಮತ್ತು ನೀವು ಇಲ್ಲಿರುವುದಕ್ಕೆ ನಾವು ಕೃತಜ್ಞರಾಗಿರುತ್ತೇವೆ. ಇಂದು ಸಿಎಸ್‌ಎಮ್‌ ನಿರ್ಭಯ್ ಯು. ಶೆಟ್ಟಿ ಅವರ ಗಮನಾರ್ಹ ಸಾಧನೆಯನ್ನು ನಾವು ಗೌರವಿಸುತ್ತೀದ್ದೇವೆ. ಗಣರಾಜ್ಯೋತ್ಸವ ಶಿಬಿರದಲ್ಲಿ ಕರ್ನಾಟಕ ಮತ್ತು ಗೋವಾವನ್ನು ಪ್ರತಿನಿಧಿಸಿ, ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿಗಳ ಮುಂದೆ ಮೆರವಣಿಗೆ ಮಾಡಿ , ಅಖಿಲ ಭಾರತ ಪ್ರಧಾನ ಮಂತ್ರಿ ಬ್ಯಾನರ್ ಸ್ಪರ್ಧೆಯಲ್ಲಿ ಭಾಗವಹಿಸುವುದು ಸಣ್ಣ ಸಾಧನೆಯಲ್ಲ.

ಈತನ ಸಮರ್ಪಣೆ ಮತ್ತು ಕಠಿಣ ಪರಿಶ್ರಮ ನಮಗೆಲ್ಲರಿಗೂ ಹೆಮ್ಮೆ ತಂದಿದೆ. ಶಿಸ್ತು ಮತ್ತು ದೃಢಸಂಕಲ್ಪದಿಂದ ಯಶಸ್ಸು ಬರುತ್ತದೆ ಎಂಬುದನ್ನು ಸಾಬೀತುಪಡಿಸುವ ಮೂಲಕ ಉಳಿದ ಎಲ್ಲಾ ವಿದ್ಯಾರ್ಥಿಗಳಿಗೆ ಉದಾಹರಣೆಯಾಗಿದ್ದಾನೆ ಎನ್ನುತ್ತ ಶಾಲೆಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ ಅವನು ಇನ್ನೂ ಹೆಚ್ಚಿನ ಯಶಸನ್ನು ಸಾಧಿಸಲಿ ಮತ್ತು ನಾವೆಲ್ಲ ಇನ್ನಷ್ಟು ಹೆಮ್ಮೆಪಡುವಂತೆ ಮಾಡಲಿ ಎಂದು ಅವನ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಶಾಲಾ ಜಂಟಿ ಕಾರ್ಯ ನಿರ್ವಾಹಕರಾದ ಅನುಪಮಾ ಎಸ್. ಶೆಟ್ಟಿ, ಪ್ರಾಂಶುಪಾಲರಾದ ಸುನಿಲ್ ಪ್ಯಾಟ್ರಿಕ್, ಎನ್. ಸಿ. ಸಿ. ಅಧಿಕಾರಿ ವೆಂಕಟ್ ಕೃಷ್ಣ, ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸಹ ಶಿಕ್ಷಕಿ ಸುಜಾತ ಕಿರಣ್ ಶೆಟ್ಟಿ ನಿರೂಪಿಸಿ, ವಂದಿಸಿದರು. ಸಹ ಶಿಕ್ಷಕಿ ನಾಗರತ್ನ ಅತಿಥಿ ಪರಿಚಯ ಮಾಡಿ ಸ್ವಾಗತಿಸಿದರು.

Exit mobile version