ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಗುರುಕುಲ ಸಂಸ್ಥೆಯಲ್ಲಿ ಅಜ್ಜ ಅಜ್ಜಿಯಂದಿರ ದಿನಾಚರಣೆಯು ಶುಕ್ರವಾರದಂದು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಕುಂದಾಪುರದ ನಿವೃತ್ತ ಉಪನ್ಯಾಸಕಿ, ಲೇಖಕಿ ಡಾ. ರೇಖಾ ವಿ. ಬನ್ನಾಡಿ ಅವರು ಸ್ವಸ್ಥ ಸಮಾಜದ ನಿರ್ಮಾಣವಾಗಬೇಕಾದರೆ ಅಲ್ಲಿ ಮುಖ್ಯವಾಗಿ ಕಂಡು ಬರುವುದು ಕುಟುಂಬ ವ್ಯವಸ್ಥೆ, ಆದರೆ ಇಂದು ಕುಟುಂಬ ತನ್ನ ಹೃದಯವಂತಿಕೆಯನ್ನು ಕಳೆದುಕೊಂಡು ಮಕ್ಕಳಿಗೆ ಸಿಗಬೇಕಾದ ಮೌಲ್ಯಗಳು, ನೀತಿ ಕಥೆಗಳು, ಜೀವನ ಪಾಠಗಳು ಸಿಗುತ್ತಿಲ್ಲ. ಎಲ್ಲರೂ ಸ್ವತಂತ್ರ ಬದುಕಿನ ಮೋಹದಿಂದ ಹಿರಿಯರಿಂದ ದೂರವಾದರೆ, ಮಕ್ಕಳನ್ನು ಕೂಡ ಅವರ ಪ್ರೀತಿಯಿಂದ ದೂರವಾಗುವಂತೆ ಮಾಡುತ್ತಿದ್ದಾರೆ. ಶಾಲಾ ಪರೀಕ್ಷೆಯಲ್ಲಿ ಹೇಗೆ ಹೊಂದಿಸಿ ಬರೆ, ಸರಿ/ತಪ್ಪು ಗುರುತಿಸಿ, ಬಿಟ್ಟ ಪದ ತುಂಬಿಸಿ ಎಂಬ ಹಂತಗಳು ಇರುತ್ತದೆಯೋ, ಬದುಕಿನ ಪರೀಕ್ಷೆಯನ್ನು ಬರೆಯುವಾಗ ಕೂಡ ಇದೆಲ್ಲಾ ಸಾಮಾನ್ಯ, ಆಗ ಅಲ್ಲಿ ಹೊಂದಾಣಿಕೆ ತುಂಬಾ ಮುಖ್ಯ ಎನ್ನುವುದನ್ನು ವಿವಿಧ ನಿದರ್ಶನಗಳ ಮೂಲಕ ಅರ್ಥಪೂರ್ಣವಾಗಿ ತಿಳಿಸುವುದರ ಜೊತೆಗೆ ಪೋಷಕರು ತಮ್ಮ ಮಕ್ಕಳ ಜೊತೆ ಹೆಚ್ಚಿನ ಸಮಯವನ್ನು ಕಳೆಯಬೇಕು, ಅದರಲ್ಲೂ ಸಣ್ಣ ವಯಸ್ಸಿನಲ್ಲೇ ಹೆಚ್ಚಿನ ಕಥೆಗಳನ್ನು ಹೇಳಿ ಅವರನ್ನು ಸರಿಯಾದ ಮಾರ್ಗದಲ್ಲಿ ನಡೆಯುವಂತೆ ಮಾಡಿದಾಗ ಮುಂದೆ ಎಂದು ಅವರು ತಮ್ಮ ಬದುಕಿನಲ್ಲಿ ಎಡುವುದಿಲ್ಲ ಎಂದರು.
ಮಕ್ಕಳನ್ನು ಬೆಳೆಸುವಲ್ಲಿ ಶಾಲೆಯ ಶಿಕ್ಷಕರ ಪಾತ್ರಕ್ಕಿಂತಲೂ ಪೋಷಕರ ಪಾತ್ರ ಹಿರಿದಾದ್ದದ್ದು ಅದನ್ನು ಅರಿತು ಮಕ್ಕಳನ್ನು ಬೆಳೆಸಿದ್ದಾದರೆ ಒಂದು ಉತ್ತಮ ಸಮಾಜ ನಿರ್ಮಾಣಕ್ಕೆ ಬೇರೆ ಏನು ಬೇಕಿಲ್ಲ, ನಿಮ್ಮ ಮಕ್ಕಳಿಗೆ ಸಾಧ್ಯವಾದಷ್ಟು ಹಿರಿಯರ ಪ್ರೀತಿ ಸಿಗುವಂತೆ ಮಾಡಿ ಎಂಬುದನ್ನು ಅರ್ಥಪೂರ್ಣವಾಗಿ ತಮ್ಮ ಅತಿಥಿ ಭಾಷಣದಲ್ಲಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಾಂಡ್ಯ ಎಜುಕೇಶನಲ್ ಟ್ರಸ್ಟನ ಜಂಟಿ ಕಾರ್ಯನಿರ್ವಾಹಕಿ ಅನುಪಮಾ .ಎಸ್.ಶೆಟ್ಟಿ ಮಾತನಾಡಿ. ನಮ್ಮ ಸನಾತನ ಧರ್ಮದ ಉಳಿವಿಗಾಗಿ ಇಂತಹ ಆಚರಣೆಗಳು ತುಂಬಾ ಮುಖ್ಯ, ನಾನು ನನ್ನ ಅಜ್ಜಿಯರ ಮಾರ್ಗದರ್ಶನದಂತೆ 200 ವರ್ಷಗಳ ಹಿಂದಿನ ರೀತಿ ರಿವಾಜುಗಳನ್ನು ಪಾಲಿಸಿಕೊಂಡು ಬರುತ್ತಿದ್ದೇನೆ, ಅದೆಲ್ಲದೂ ನಮಗೆ ತಲೆಮಾರಿನಿಂದ ಬಳುವಳಿಯಾಗಿ ಬಂದಿರುವುದು ಅಂತಹ ಮಹತ್ವವನ್ನು ಈ ಹಂತದಲ್ಲಿ ಮಕ್ಕಳಿಗೆ ತಿಳಿಸುವ ಕೆಲಸವನ್ನು ನಾವೆಲ್ಲರೂ ಜೊತೆ ಸೇರಿ ಮಾಡಬೇಕಿದೆ ಎಂದು ತಿಳಿಸಿದರು.
ಇದರೊಂದಿಗೆ ಒಂದಿಷ್ಟು ತಮ್ಮ ಅಜ್ಜ ಅಜ್ಜಿಯರ ಮನೋರಂಜನೆಗಾಗಿ ಪುಟಾಣಿಗಳು ನೃತ್ಯ, ಭಾಷಣ ಮಾಡಿದರು. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದ ಹಿರಿಯ ಪೋಷಕರ ಉಯ್ಯಾಲೆಯಲ್ಲಿ ಪುಟಾಣಿಗಳು ತಮ್ಮ ಪೋಷಕರು ಮತ್ತು ಅಜ್ಜ ಅಜ್ಜಿ ಜೊತೆ ಕುಳಿತು ಪೋಟೋಕ್ಲಿಕ್ಕಿಸಿ ತಾವು ಆನಂದಿಸಿದರು. ಕೊನೆಯಲ್ಲಿ ಭಾಗವಹಿಸದ ಎಲ್ಲಾ ಹಿರಿಯ ಪೋಷಕರಿಗೆ ಪ್ರಮಾಣ ಪತ್ರ ನೀಡಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಕಿಯರು, ಹಿರಿಯ ಪೋಷಕರು, ಪೋಷಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಾಲಾ ಪ್ರಾಂಶುಪಾಲರಾದ ಸುನಿಲ್ ಪ್ಯಾಟ್ರಿಕ್ ಪ್ರಾಸ್ತಾವಿಕ ನುಡಿಯೊಂದಿಗೆ ಎಲ್ಲರನ್ನು ಸ್ವಾಗತಿಸಿ, ಸಂಯೋಜಕಿ ವಿಶಾಲ ಶೆಟ್ಟಿ ನಿರೂಪಿಸಿ, ವಂದಿಸಿದರು.

