Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಅಪಘಾತದಲ್ಲಿ ವ್ಯಕ್ತಿಯ ಮೆದುಳು ನಿಷ್ಕ್ರಿಯ – ಅಂಗಾಂಗ ದಾನದ ಮೂಲಕ ಸಾರ್ಥಕತೆ ಮೆರೆದ ಕುಟುಂಬ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರೀಯಗೊಂಡ ಅನಂತರ ಅಂಗಾಂಗದಾನದ ಮೂಲಕ ಇತರರಿಗೆ ಜೀವ ನೀಡಿ ಸಾರ್ಥಕತೆ ಮೆರೆದ ಘಟನೆ ನಡೆದಿದೆ.

ಕುಂದಾಪುರದ ನಿವಾಸಿ ರಾಘವೇಂದ್ರ (35) ಅವರು ಫೆ.17ರಂದು ಮಧ್ಯರಾತ್ರಿ 12.20 ವೇಳೆಗೆ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರು. ತೀವ್ರ ಗಾಯಗಳ ಅನಂತರ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಸಂಪೂರ್ಣ ವೈದ್ಯಕೀಯ ಚಿಕಿತ್ಸೆಯ ಹೊರತಾಗಿಯೂ ರಾಘವೇಂದ್ರ ಅವರು ಚೇತರಿಸಿಕೊಳ್ಳುವ ಯಾವುದೇ ಲಕ್ಷಣ ಕಂಡುಬರಲಿಲ್ಲ. ಮಾನವ ಅಂಗಾಂಗ ಕಸಿ ಕಾಯಿದೆ 1994 ರ ಪ್ರಕಾರ ಪರಿಣಿತ ವೈದ್ಯರ ಸಮಿತಿಯು ಎರಡು ಬಾರಿ ಅಧಿಕೃತವಾಗಿ ಬ್ರೈನ್‌ ಡೆಡ್‌ ಎಂದು ಘೋಷಿಸಿತು. ರಾಘವೇಂದ್ರ ಅವರ ಕುಟುಂಬವು ಅವರ ಕಾರ್ಯಸಾಧ್ಯವಾದ ಅಂಗಾಂಗಳನ್ನು ದಾನ ಮಾಡುವ ನಿರ್ಧಾರವನ್ನು ತೆಗೆದುಕೊಂಡರು.

ಆ ಮೂಲಕ ಅಗತ್ಯವಿರುವ ಇತರರಿಗೆ ಅಂಗ ದಾನ ಮಾಡಲು ನಿರ್ಧರಿಸಲಾಯಿತು. ಅದರಂತೆ ರಾಘವೇಂದ್ರ ಅವರ ಒಂದು ಕಿಡ್ನಿ ಮತ್ತು ಯಕೃತ್ತನ್ನು ಮಂಗಳೂರಿನ ಎಜೆ ಆಸ್ಪತ್ರೆ, ಶ್ವಾಸಕೋಶವನ್ನು ಸಿಕಂದರಾಬಾದ್‌ನ ಕಿಮ್ಸ್‌ ಆಸ್ಪತ್ರೆಗೆ ಹಾಗೂ ಒಂದು ಕಿಡ್ನಿ ಎರಡು ಕಾರ್ನಿಯಾ ಮತ್ತು ಚರ್ಮವನ್ನು ಮಣಿಪಾಲದಲ್ಲಿನ ನೋಂದಾಯಿತ ರೋಗಿಗಳಿಗೆ ಬಳಸಲು ವರ್ಗಾಯಿಸಲಾಯಿತು. ಅಂಗಾಂಗ ದಾನದ ಕಾರ್ಯವು ಜೀವ ಉಳಿಸುವ ಉದಾತ್ತ ಪ್ರಯತ್ನವಾಗಿದೆ. ಇತರರು ಇಂತಹ ಪರಹಿತ ಚಿಂತನೆಯನ್ನು ಮೈಗೂಡಿಸಿಕೊಳ್ಳುವಂತೆ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್‌ ಶೆಟ್ಟಿ ತಿಳಿಸಿದ್ದಾರೆ.

Exit mobile version