Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರಕ್ಕೆ ಪ್ರಾಗೈತಿಹಾಸಿಕ ಹಿನ್ನೆಲೆ ಇದೆ: ಡಾ. ಜಗದೀಶ್ ಶೆಟ್ಟಿ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ: 
ಸಂಪದ್ಭರಿತ ಐತಿಹಾಸಿಕ ಹಿನ್ನೆಲೆಯ ಕುಂದಾಪುರ ತಾಲೂಕು ಎನ್ನುವಂತಹದ್ದು ಇತಿಹಾಸ ಪೂರ್ವದಿಂದಲೂ ಜನವಸತಿ ಹೊಂದಿರುವಂತಹದ್ದಾಗಿದೆ ಎಂದು ಮಾಹೆ, ಮಣಿಪಾಲ ಇದರ ಸಾಂಸ್ಕೃತಿಕ ಕೇಂದ್ರಗಳು ಇದರ ಆಡಳಿತಾಧಿಕಾರಿ  ಡಾ. ಜಗದೀಶ್ ಶೆಟ್ಟಿ ಹೇಳಿದರು .

ಅವರು  ಫೆಬ್ರವರಿ 21, 22, ಮತ್ತು 23, 2025ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಬೆಂಗಳೂರು ಮತ್ತು ಧಾರವಾಡ ವಲಯ, ಮಂಗಳೂರು ವಿಶ್ವವಿದ್ಯಾಲಯ ಇತಿಹಾಸ ಅಧ್ಯಾಪಕರ ಸಂಘ ಮತ್ತು ಕಾಲೇಜಿನ ಐಕ್ಯೂಎಸಿ. ಇವರು ಸಹಯೋಗದಲ್ಲಿ ಆಯೋಜಿಸಿದ ” ಕರ್ನಾಟಕ ಇತಿಹಾಸ ಪರಿಷತ್ತು 35ನೇ  ವಾರ್ಷಿಕ ಮಹಾ ಅಧಿವೇಶನದಲ್ಲಿ ಫೆಬ್ರವರಿ 23 ರಂದು ನಡೆದ ” ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಮತ್ತು ಸಂಸ್ಕೃತಿ” ಎಂಬ ವಿಷಯದ ಕುರಿತ ಸಿಂಪೋಜಿಯಂ ಕಾರ್ಯಕ್ರಮದ  ಅಧ್ಯಕ್ಷತೆಯನ್ನು  ವಹಿಸಿ ಮಾತನಾಡಿದರು.

ಕುಂದಾಪುರಕ್ಕೆ ಪ್ರಾಗೈತಿಹಾಸಿಕ ಹಿನ್ನೆಲೆ ಇದೆ. ನೂತನ ಶಿಲಾಯುಗದ ಕೊಡಲಿ ಎನ್ನುವುದು ಕುಂದಾಪುರದ ಗಡಿ ಪ್ರದೇಶವಾದ ಕೋಟತಟ್ಟು ಎಂಬಲ್ಲಿ ದೊರಕಿರುವಂತದ್ದು ಇದಕ್ಕೆ ಉತ್ತಮ ಉದಾಹರಣೆ. ಇನ್ನೂ ಆ ಕಾಲದಿಂದಲೂ ಕೋಟಿಲಿಂಗೇಶ್ವರ ದೇವಸ್ಥಾನ  ಪ್ರಮುಖ ದೇವಸ್ಥಾನವಾಗಿತ್ತು. ಅಲ್ಲದೆ  ಕುಂದಾಪುರ ಗಾವಳಿ, ಬೇಳೂರು, ಬಸ್ರೂರು , ಹಟ್ಟಿಯಂಗಡಿ, ಗುದ್ದನಜಡ್ಡು,ಬಸ್ಸೂರು, ಮತ್ತು ಹಟ್ಟಿಯಂಗಡಿ ಅರಸು ಕಾಲದ ವ್ಯಾಪಾರ ಆಡಳಿತ ವ್ಯವಸ್ಥೆಗಳ ಬಗ್ಗೆ ದಾಖಲೆಗಳಿವೆ. ವರಾಂಗ, ಬಾರಕ್ಕೂರು, ಬಸ್ರೂರು ಶಾಸನಗಳು ಕುಂದಾಪುರ ಪ್ರಾಗೈತಿಹಾಸಿಕ  ದಾಖಲೆಗಳಲ್ಲಿ ದೊರಕುತ್ತದೆ. ಇಲ್ಲಿನ ಬಸ್ರೂರು ಆಡಳಿತ ಕೇಂದ್ರವಾಗಿದ್ದು ಸುವ್ಯವಸ್ಥಿತ ಆಡಳಿತವು ವಿಜಯನಗರದಿಂದಲೂ  ಸಾಮ್ರಾಜ್ಯದ ಕಾಲದಿಂದಲೂ ಪ್ರಸಿದ್ಧಿ ಪಡೆದಿದೆ. ಎಂಬುದರ ಕುರಿತು ದಾಖಲೆಗಳು ನಿಮಗೆ ದೊರಕುತ್ತದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಸಿಂಗಾರ ಕೊನೆ ಬಿಡಿಸುವುದರ ಮೂಲಕ ಕರ್ನಾಟಕ ಇತಿಹಾಸ ಪರಿಷತ್ತು ಇದರ ಜಂಟಿ ಕಾರ್ಯದರ್ಶಿ ಡಾ.ವಾಸುದೇವ ಬಡಿಗೇರ, ಹಂಪಿ ಅವರು ಕಾರ್ಯಕ್ರಮ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ “ಕೊರಗರು – ಸಮಕಾಲೀನ ಸ್ಪಂದನ” ಎಂಬ ವಿಷಯದ ಕುರಿತು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ.ಗಂಗಾಧರ ದೈವಜ್ಞ ಮಾತನಾಡಿ ಕೊರಗು ಸಮುದಾಯದ ಸ್ಥಿತ್ಯಂತರಗಳನ್ನು ತಿಳಿಸಿದರು.

“ಇತಿಹಾಸ ಕ್ಷೇತ್ರದ ಬಹುಮುಖಿ ಸಾಧಕ – ಡಾ.ಪಾದೂರು ಗುರುರಾಜ್ ಭಟ್ಟ” ಎಂಬ ವಿಷಯದ ಕುರಿತು ಡಾ.ಪುಂಡಿಕಾಯ್ ಗಣಪಯ್ಯ ಭಟ್ ಅವರು ಮಾತನಾಡಿದರು.

“ಪ್ರಾಚೀನ ಹಾಗೂ ಮಧ್ಯಯುಗದ ತುಳುನಾಡಿನ ಪ್ರಭುತ್ವ ಮತ್ತು ಧರ್ಮ”ಎಂಬ ವಿಷಯದ ಕುರಿತು ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಅಜ್ಜರಕಾಡು, ಉಡುಪಿ ಇಲ್ಲಿನ ಸಹ ಪ್ರಾಧ್ಯಾಪಕ ಡಾ.ರಾಮದಾಸ ಪ್ರಭು ಅವರು ಮಾತನಾಡಿದರು.

“ಕುಂದಗನ್ನಡ ಭಾಷೆಯ ಸಾಮಾಜಿಕ ಮತ್ತು  ಚಾರಿತ್ರಿಕ ಆಯಾಮ” ಎಂಬ ವಿಷಯದ ಕುರಿತು ಪ್ರದೀಪ್ ಕೆಂಚನೂರು ಮಾತನಾಡಿದರು.

ಇಂಗ್ಲಿಷ್ ವಿಭಾಗದ ಉಪನ್ಯಾಸಕಿ ಶೃತಿ ಕಾಶಿ ಕಾರ್ಯಕ್ರಮ ನಿರೂಪಿಸಿದರು.

Exit mobile version