Kundapra.com ಕುಂದಾಪ್ರ ಡಾಟ್ ಕಾಂ

ಡಾ. ರಂಜಿತ್ ಕುಮಾರ್ ಶೆಟ್ಟಿ ಅನುಭವದ ಬರವಣಿಗೆ ಹೃದಯಕ್ಕೆ ತಟ್ಟುತ್ತದೆ: ಡಾ. ಗಿರಿಜಾ ರಾವ್

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಜೀವನದಲ್ಲಿ ಪಡೆದ ಅನುಭವವನ್ನೇ ಸ್ವಾರಸ್ಯಕರ ಶೈಲಿಯಲ್ಲಿ ಬರೆಯುವುದರಿಂದ ಡಾ. ರಂಜಿತ್ ಕುಮಾರ್ ಶೆಟ್ಟಿ ಅವರ ಬರವಣಿಗೆ ಇಷ್ಟವಾಗುತ್ತದೆ . ಹಾಗಾಗಿ ಅವರ ನೆನಪಿನಾಳದಲ್ಲಿ, 20 ಕಥೆಗಳು, ಜಯಂತಣ್ಣನಿಗಾಗಿ ಕಾದಂಬರಿ ಓದುಗರನ್ನು ತಲುಪಿತು. ಹೊಸತನದ ಕಥೆಯೊಂದಿಗೆ ಹೀಗೂ ಕಾದಂಬರಿ ಬರೆಯಬಹುದು ಎಂದು ಜಾಲಿ ಮತ್ತು ಅಪ್ಪು ಕೃತಿಯಿಂದ ತೋರಿಸಿ ಕೊಟ್ಟಿದ್ದಾರೆ ಎಂದು ಖ್ಯಾತ ಪ್ರಸೂತಿ ತಜ್ಞ ಮಣಿಪಾಲದ ಸೋನಿಯಾ ಆಸ್ಪತ್ರೆಯ ಡಾ. ಗಿರಿಜಾ ರಾವ್ ಹೇಳಿದರು.

ಅವರು ಭಂಡಾರ್‌ಕಾರ್ಸ್‌ ಕಾಲೇಜಿನ ಆರ್. ಎನ್. ಶೆಟ್ಟಿ ಸಭಾಂಗಣದಲ್ಲಿ ನಡೆದ ಡಾ. ರಂಜಿತ್ ಕುಮಾರ್ ಶೆಟ್ಟಿ ಅವರ ಮೂರು ಕೃತಿಗಳ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸಂವಹನದ ಕೊರತೆ ಮತ್ತು ಪರಸ್ಪರ ಅಪನಂಬಿಕೆ ಡಾಕ್ಟರು ಮತ್ತು ರೋಗಿಗಳ ಸಂಬಂಧ ಕೆಡಲು ಕಾರಣ. ಜನರು ವೈದ್ಯರ ಮೇಲೆ ವಿಶ್ವಾಸವಿಡಬೇಕು. ಗೌರವದ ನಡವಳಿಕೆ ಇರಬೇಕು. ವೈದ್ಯರ ಸೇವೆಯ ವಿಷಯದಲ್ಲಿ ಎಂದೂ ಅಪ್ರಾಮಾಣಿಕರಾಗಿರಬಾರದು. ವೈದ್ಯಕೀಯ ಸೇವೆಯ ಒತ್ತಡದಲ್ಲಿ ರೋಗಿಗಳ ಪೋಷಕರಿಂದ ಬೆಂಬಲವನ್ನು ಪ್ರಾಮಾಣಿಕ ವೈದ್ಯರು ನಿರೀಕ್ಷಿಸುತ್ತಾರೆ. ಎಂದು ಅವರು ಹೇಳಿ ಡಾ. ರಂಜಿತರ ಕೃತಿಗಳು ವೈದ್ಯಲೋಕದ ಚಿತ್ರಣ ತೆರೆದಿಟ್ಟಿದೆ ಎಂದರು.

ಡಾ| ರಂಜಿತ್ ಕುಮಾರ್ ಅವರ ಜನಪ್ರಿಯ ಕಥೆಗಳ ಗುಚ್ಚ 10+10=20 ಕಥೆಗಳು ಕೃತಿಯನ್ನು ಓಕವುಡ್ ಶಿಕ್ಷಣ ಸಂಸ್ಥೆಯ ಆಡಳಿತ ನಿರ್ದೇಶಕರಾದ ನೀತಾ ಎ. ಶೆಟ್ಟಿ ಬಿಡುಗಡೆಗೊಳಿಸಿ ಮಾತನಾಡಿ, “ಡಾ. ರಂಜಿತ್ ಕುಮಾರ್ ಅವರ ಪ್ರತಿಯೊಂದು ಕಥೆಗಳು ಬೇರೆ ವಿದ್ಯಮಾನಗಳನ್ನು ವಿವರಿಸುವುದರಿಂದ ಅವರ ಎಲ್ಲ ಬರಹಗಳು ಇಷ್ಟವಾಗುತ್ತವೆ. ಅವರ ಜೀವನದ ಅನುಭವಗಳ ವಿಷಯವೇ ಓದುವುದರಿಂದ ನಮಗೆ ಸಮಾಜದ ಎಲ್ಲಾ ಮುಖಗಳ ಪರಿಚಯವಾಗುತ್ತದೆ. ಒಂದು ಶಿಕ್ಷಣ ಸಂಸ್ಥೆಯನ್ನು ನಡೆಸುವ ನಾವು ಪೋಷಕರಿಗೆ ಮಕ್ಕಳ ವ್ಯಕ್ತಿತ್ವ ವಿಕಸನವಾಗುವಂತಹ ಆಸಕ್ತಿಯನ್ನು ಮಕ್ಕಳಲ್ಲಿ ಬೆಳೆಸಿ ಎನ್ನುತ್ತೇವೆ” ಎಂದು ಅವರು ಡಾ. ರಂಜಿತ್ ಕುಮಾರ್ ಶೆಟ್ಟಿ ಅವರನ್ನು ಅಭಿನಂದಿಸಿದರು.

ನೆನಪಿನಾಳದಿಂದ ಕೃತಿಯನ್ನು ಹಿರಿಯ ಜ್ಯೋತಿಷಿ, ಸಾಮಾಜಿಕ ಧುರೀಣ, ಖ್ಯಾತ ಚಿತ್ರ ನಿರ್ದೇಶಕ ರಿಷಬ್ ಶೆಟ್ಟಿ ಅವರ ತಂದೆ ಭಾಸ್ಕರ ಶೆಟ್ಟಿ ಬಿಡುಗಡೆಗೊಳಿಸಿದರು.

ಮೂರು ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ರೂಪಕಲಾ ಮೂರು ಮುತ್ತು ಕಲಾವಿದರಾದ ಸತೀಶ ಪೈ ಮತ್ತು ಸಂತೋಷ ಪೈ ಅವರ ಪ್ರಹಸನ ಬಹಳ ಖುಷಿ ನೀಡಿತು.

ಲೇಖಕಿ ಕಾತ್ಯಾಯಿನಿ ಕುಂಜಿಬೆಟ್ಟು ಮೂರು ಕೃತಿಗಳ ಬಗ್ಗೆ ಮಾತನಾಡಿ, ಮೂರು ಕೃತಿಗಳು ಸಾಹಿತ್ಯ ಲೋಕಕ್ಕೆ ಅಮೂಲ್ಯ ಕೊಡುಗೆ ಎಂದರು.

ʼಕುಂದಪ್ರಭ’ ಸಂಸ್ಥೆಯ ಅಧ್ಯಕ್ಷ ಯು. ಎಸ್. ಶೆಣೈ ಸ್ವಾಗತಿಸಿದರು. ಡಾ. ರಂಜಿತ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ, ’ಬದುಕಿನಲ್ಲಿ ಅವರಿಗೆ ದೊರೆತ ಜೀವನಾನುಭವದ ಪಾಠʼ ವಿವರಿಸಿದರು. ಡಾ. ರಂಜಿತ್ ಕುಮಾರ್ ಶೆಟ್ಟಿ ಅವರ ಐದು ದಶಕಗಳ ಹಿಂದಿನ ವೈದ್ಯ ಸಹಪಾಠಿಗಳು ಅವರನ್ನು ಸನ್ಮಾನಿಸಿ ಗೌರವಿಸಿದರು. ಡಾ. ಗಣೇಶ ಪೈ ಮಣಿಪಾಲ ಶುಭ ಹಾರೈಸಿದರು.

ಭಂಡಾರ್‌ಕಾ‍ರ್ಸ್‌ ಕಾಲೇಜಿನ ವಿಶ್ವಸ್ಥರು, ಪ್ರಾಂಶುಪಾಲರು, ಕಾಲೇಜಿನ ಆಡಳಿತ ಮಂಡಳಿ ಸದಸ್ಯರೂ ಆಗಿರುವ ಡಾ. ರಂಜಿತ್ ಕುಮಾರ್ ಶೆಟ್ಟಿ ಅವರನ್ನು ಗೌರವಿಸಿದರು. ಕೆ. ಶಾಂತಾರಾಮ ಪ್ರಭು, ಪ್ರಕಾಶ ಸೋನ್ಸ್ ಕಾಲೇಜಿನ ಪರವಾಗಿ ಶುಭ ಹಾರೈಸಿದರು. ವೈದ್ಯರಾದ ಡಾ. ಪ್ರಕಾಶ ಕಾಮತ್, ಡಾ. ಸಂಧ್ಯಾ ಅಡಿಗ, ಡಾ. ವಿವೇಕ ಶೆಟ್ಟಿ, ಡಾ. ರಮೇಶ ಶೆಟ್ಟಿ ಹಾಗೂ ಅನಿಕಾ, ಶಿಪ್ರ ಚಾತ್ರ, ಪಾರ್ವತಿ ಶುಶ್ರಾವ್ಯವಾದ ಗೀತೆಗಳನ್ನು ಹಾಡಿದರು. ಜ್ಯೋತಿ ಸಾಲಿಗ್ರಾಮ ಹಾಗೂ ರೋಹಿಣಿ ಶರಣ್ ಸಂವಹನ ಕಾರ್ಯಕ್ರಮ ನಡೆಸಿಕೊಟ್ಟರು.

ತೆಂಕ ನಿಡಿಯೂರು ಪ. ಪೂ. ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಕರಬ ಕಾರ್ಯಕ್ರಮ ನಿರೂಪಿಸಿದರು. ಬೀನಾ ರಂಜಿತ್ ಕುಮಾರ್ ಶೆಟ್ಟಿ ಧನ್ಯವಾದ ಅರ್ಪಿಸಿದರು. ಸಭಾಂಗಣದಲ್ಲಿ ತುಂಬಿದ ಗಣ್ಯರು ವೈಶಿಷ್ಟ್ಯಪೂರ್ಣವಾದ ಪುಸ್ತಕ ಬಿಡುಗಡೆ ಸಮಾರಂಭವನ್ನು ಶ್ಲಾಘಿಸಿದರು.

Exit mobile version