Kundapra.com ಕುಂದಾಪ್ರ ಡಾಟ್ ಕಾಂ

ತಿಂಗಳೊಳಗೆ ನೋಂದಣಿಗೆ ತಪ್ಪಿದರೆ ಹೋಮ್‌ಸ್ಟೇ ವಿರುದ್ಧ ಕ್ರಮ: ಜಿಲ್ಲಾಧಿಕಾರಿ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಉಡುಪಿ:
ಜಿಲ್ಲೆಯಲ್ಲಿ ಒಂದೂವರೆ ವರ್ಷದ ಅವಕಾಶವಿತ್ತರೂ ಕೇವಲ 188 ಹೋಮ್‌ಸ್ಟೇಗಳು ಮಾತ್ರ ನೋಂದಣಿಯಾಗಿದ್ದು, ಇನ್ನೊಂದು ತಿಂಗಳೊಳಗೆ ನೋಂದಣಿಯಾಗದ, ಸರಕಾರಿ ಜಾಗ/ಸಿಆರ್ ಝಡ್ ವ್ಯಾಪ್ತಿಯಲ್ಲಿರುವ ಹೋಂ ಸ್ಟೇ /ರೆಸಾರ್ಟ್‌ಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ತಿಳಿಸಿದ್ದಾರೆ.

ಅವರು ಅಂದು ಮಣಿಪಾಲ ರಜತಾದ್ರಿಯ ಜಿಲ್ಲಾ ಇಲಾಖೆಗಳ ಸಂಕೀರ್ಣದಲ್ಲಿರುವ ಆಟಲ್‌ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಪ್ರವಾಸಿಗರ ಭದ್ರತೆ ನಿಟ್ಟಿನಲ್ಲಿ ನಡೆದ ಹೋಮ್‌ಸ್ಟೇ ಹಾಗೂ ರೆಸಾರ್ಟ್‌ಗಳ ಮಾಲೀಕರ ಸಭೆಯಲ್ಲಿ ಮಾತನಾಡಿ, ಈಗಾಗಲೇ ನೋಂದಣಿಯಾದವರು ಮುನ್ನೆಚ್ಚರಿಕೆ ಕ್ರಮದ ಕುರಿತು 10 ದಿನಗಳೊಳಗೆ ಮುಚ್ಚಳಿಕೆ ಬರೆದು ಆನ್‌ಲೈನ್ ಮೂಲಕ ಸಲ್ಲಿಸಬೇಕು ಎಂದರು.

ನಿರ್ಜನ ಪ್ರದೇಶಕ್ಕೆ ಪ್ರವಾಸಿಗರನ್ನು ಕರೆದೊಯ್ಯುವ ಮೊದಲು ಪೊಲೀಸರಿಗೆ ಮಾಹಿತಿ ನೀಡಬೇಕು. ಪ್ರವಾಸಿಗರು ಈಜುವ ಸಂದರ್ಭ ತಜ್ಞ ಈಜುಗಾರರು ರಕ್ಷಣೆಗಿರಬೇಕು. 24×7 ಹಾಗೂ ರಾತ್ರಿ ದೃಷ್ಟಿಯ ಸಿಸಿಟಿವಿ ಅಳವಡಿಸಬೇಕು ಎಂದರು.

ಎಸ್ಪಿ ಡಾ.ಅರುಣ್ ಕೆ. ಮಾತನಾಡಿ, ನೋಂದಾಯಿತ ಹೋಮ್‌ಸ್ಟೇಗಳಿಗೆ ಬರುವವರಲ್ಲಿ ಪಾನ್, ಆಧಾರ್‌ ಅಥವಾ ಚಾಲನಾ ಪರವಾನಗಿಯ ದಾಖಲೆ ಪ್ರತಿ ಪಡೆದುಕೊಳ್ಳಲು ತಪ್ಪಿದಲ್ಲಿ ಪ್ರವಾಸಿಗರು ಯಾವುದೇ ಅಪರಾಧ ಕೃತ್ಯದಲ್ಲಿ ಭಾಗಿಯಾದರೆ ಹೋಮ್‌ಸ್ಟೇ ಮಾಲೀಕರ ಸಹಿತ ಸಂಬಂಧಿತರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಸೂಚನೆಗಳ ಫಲಕ ಅಳವಡಿಕೆ, ಪ್ರವಾಸಿಗರು ಮಾತು ಕೇಳದಿದ್ದರೆ ಅಥವಾ ಕೆಟ್ಟದಾಗಿ ನಡೆದು ಕೊಂಡರೆ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಕೊಡಿ. ಅನಧಿಕೃತ ಹೋಮ್‌ಸ್ಟೇ ರೆಸಾರ್ಟ್ ಗಳ ಪಟ್ಟಿ ಮಾಡಲಾಗುವುದು. ನಿಯಮ ಯಾವುದೇ ಹೋಮ್‌ಸ್ಟೇ ಉಲ್ಲಂಘಿಸಿ ಮಾಡಲು, ಮುಂದುವರಿಸಲು ಅವಕಾಶವಿಲ್ಲ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಹೊರರಾಜ್ಯದ ಕಾರ್ಮಿಕರನ್ನು ಪೊಲೀಸ್ ವೆರಿಫಿಕೇಶನ್ ಬಳಿಕ ನಿಯೋಜಿಸಬೇಕು. ರೆಸಾರ್ಟ್‌ಗೆ ಬಂದವರಿಗೆ ಸಾಹಸ ಕ್ರೀಡೆಗಳ ಸಹಿತ ನಾನಾ ಚಟುವಟಿಕೆಗಳ ಅಪಾಯದ ಮಾಹಿತಿಯನ್ನೂ ನೀಡಬೇಕು. ಪ್ರವಾಸೋದ್ಯಮಕ್ಕೆ ಉತ್ತೇಜನದ ಜತೆಗೆ ಪ್ರವಾಸಿಗರ ರಕ್ಷಣೆಯೂ ಅತಿ ಮುಖ್ಯ ಎಂದು ಹೇಳಿದರು.

ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೆಶಕ ಕುಮಾರ್‌ ನಿರೂಪಿಸಿ, ವಂದಿಸಿದರು.

Exit mobile version