ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಭಾರತವು ಅಭಿವೃದ್ಧಿಯ ಕನಸನ್ನು ಸಾಕಾರಗೊಳಿಸುವತ್ತ ಸಾಗುತ್ತಿದೆ. ಈ ದಿಸೆಯಲ್ಲಿ ನಮ್ಮ ಪ್ರಯತ್ನವಿದೆ. ಈಗ ಉದ್ಯೋಗ ಪಡೆಯಲು 21ನೇ ಶತಮಾನ ಬಯಸುವ ಶಿಕ್ಷಣ ಅಂದರೆ ಕೌಶಲ್ಯ ಆಧಾರಿತ ಶಿಕ್ಷಣದ ಅಗತ್ಯವಿದೆ ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಎಮ್.ಎಸ್. ಜಯಕರ್ ಶೆಟ್ಟಿ ಹೇಳಿದರು.
ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ದಿನಗಳ ಕಾಲ ನಡೆಯುತ್ತಿರುವ ಕಾಲೇಜು ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ನಮ್ಮ ದೇಶದಲ್ಲಿ ಕೌಶಲ್ಯ ಆಧಾರಿತ ಶಿಕ್ಷಣದ ಬೆಳವಣಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಕಷ್ಟು ಸಹಾಯ ನೀಡುತ್ತಿದೆ. ಉದ್ಯೋಗ ಮತ್ತು ಬದುಕಲ್ಲಿ ಯಶಸ್ಸು ಪಡೆಯಬೇಕಾದರೆ ಉತ್ತಮ ಸಂವಹನ ಕಲೆ , ವಿವಿಧ ಭಾಷಾ ಜ್ಞಾನ, ಕಂಪ್ಯೂಟರ್ ಜ್ಞಾನ, ಸಮಸ್ಯೆ ಪರಿಹಾರ, ಸಹಯೋಗದ ಭಾಗವಹಿಸುವಿಕೆ ಮುಖ್ಯವಾಗಿದೆ. ಭಾರತೀಯ ಶಿಕ್ಷಣ ವ್ಯವಸ್ಥೆಯ ಉನ್ನತ ಶಿಕ್ಷಣವನ್ನು ವಿಶ್ವದ ವಿವಿಧ ದೇಶಗಳು ಅಳವಡಿಸಿಕೊಳ್ಳುತ್ತಿದ್ದು ಮಾದರಿ ವ್ಯವಸ್ಥೆಯಾಗಿ ರೂಪುಗೊಂಡಿದೆ. ಮಣಿಪಾಲ ಶಿಕ್ಷಣ ಸಂಸ್ಥೆಗಳು ವಿಶ್ವದ ಎಲ್ಲಾ ರಾಷ್ಟ್ರಗಳ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ ಎಂದರೆ ಸಂಸ್ಥೆಯ ಸಂಸ್ಥಾಪಕ ಟಿ.ಎಮ್.ಎ.ಪೈ ಅವರು ದೂರದೃಷ್ಟಿಯೇ ಅದಕ್ಕೆ ಕಾರಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಡಳಿಯ ಹಿರಿಯ ಸದಸ್ಯರಾದ ಕೆ. ಶಾಂತಾರಾಮ್ ಪ್ರಭು ವಹಿಸಿದ್ದರು. ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು.
ವೇದಿಕೆಯಲ್ಲಿ ವಿಶ್ವಸ್ಥ ಮಂಡಳಿಯ ಸದಸ್ಯರಾದ ಕೆ. ದೇವದಾಸ್ ಕಾಮತ್, ರಾಜೇಂದ್ರ ತೋಳಾರ್, ಸದಾನಂದ ಛಾತ್ರ ಆಡಳಿತ ಮಂಡಳಿ ಸದಸ್ಯರಾದ ಯು.ಎಸ್.ಶೆಣೈ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ. ಎಂ. ಗೊಂಡ ಉಪಸ್ಥಿತರಿದ್ದರು.
ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಬೋಧಕೇತರ ಸಿಬ್ಬಂದಿ ಮಂಜುನಾಥರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಂಗಳೂರು ವಿಶ್ವವಿದ್ಯಾನಿಲಯದ ನಡೆಸಿದ ಪದವಿ ಪರೀಕ್ಷೆಯಲ್ಲಿ ರ್ಯಾಂಕ್ ವಿಜೇತ ವಿದ್ಯಾರ್ಥಿಗಳಾದ ಬಿ.ಎ. ಯಲ್ಲಿ ಮಿಥುನ ಪ್ರಭು, (ಪ್ರಥಮ ರ್ಯಾಂಕ್ ) ಸುಶ್ಮಿತಾ ಶೆಟ್ಟಿ (ಆರನೇ ರ್ಯಾಂಕ್) ವಿಜ್ಞಾನ ವಿಭಾಗದಲ್ಲಿ ಶ್ರೀ ಕೃಷ್ಣ ಕೆದಿಲಾಯ ಸದಾನಂದ (ಪ್ರಥಮ ರ್ಯಾಂಕ್), ಸುಶ್ಮಿತಾ ಜಿ. ಎಸ್(ಆರನೇ ರ್ಯಾಂಕ್) ಬಿ.ಬಿ.ಎ ವಿಭಾಗದಲ್ಲಿ ಅರ್ಪಿತಾ (ಏಳನೇ ರ್ಯಾಂಕ್), ಬಿ.ಸಿ.ಎ ವಿಭಾಗದಲ್ಲಿ ರಕ್ಷಿತಾ (ಪ್ರಥಮ ರ್ಯಾಂಕ್), ಮಾನಸ (ದ್ವಿತೀಯ ರ್ಯಾಂಕ್), ಪಾವನಾ (ಎಂಟನೇ ರ್ಯಾಂಕ್) ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಕಾಲೇಜಿನ ಅತ್ಯುತ್ತಮ ವಿದ್ಯಾರ್ಥಿನಿಗೆ ಕೊಡಮಾಡುವ ಸುನಿಧಿ ಹೆಬ್ಬಾರ್ (ತೃತೀಯ ಬಿ.ಎಸ್.ಸಿ ) ನೀಡಿ ಗೌರವಿಸಲಾಯಿತು.
ಕಾಲೇಜಿನ ಐಕ್ಯೂಎಸಿ ಸಂಯೋಜಕರಾದ ಸತ್ಯನಾರಾಯಣ ಹತ್ವಾರ್ ಸ್ವಾಗತಿಸಿದರು. ಇಂಗ್ಲಿಷ್ ವಿಭಾಗದ ಉಪನ್ಯಾಸಕಿ ಶೈಲಾ ಆರ್, ವಾಣಿಜ್ಯ ವಿಭಾಗದ ಓಂ ಶೆಟ್ಟಿ, ದಿವ್ಯ ಮರಿಟಾ ಫೆರ್ನಾಂಡಿಸ್ ಸಾಧಕ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಕಂಪ್ಯೂಟರ್ ವಿಭಾಗದ ಪ್ರಾಧ್ಯಾಪಕರಾದ ವಿಜಯಲಕ್ಷ್ಮಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

