Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಪತ್ರಕರ್ತರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪೊಲೀಸ್ ಅಧಿಕಾರಿ

ಕುಂದಾಪುರ: ಘಟನೆಯೊಂದರ ವರದಿಗೆ ತೆರಳಿದ್ದ ಪತ್ರಕರ್ತನನ್ನು ಕುಂದಾಪುರದ ಉಪ ನಿರೀಕ್ಷಕ ನಾಸೀರ್ ಹುಸೇನ್ ವಿನಾಕಾರಣ ತಡೆದು, ಎಳೆದಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಇಂದು ವರದಿಯಾಗಿದೆ.

ಘಟನೆಯ ವಿವರ:
ಹಿರಿಯ ಪತ್ರಕರ್ತ ಜಾನ್ ಡಿಸೋಜ ಎಂದಿನಂತೆ ಕುಂದಾಪುರ ಸಂಗಮ್ ಸೇತುವೆಯ ಬಳಿ ನಡೆದ ವ್ಯಕ್ತಿಯೋರ್ವರ ಆತ್ಮಹತ್ಯೆ ಪ್ರಕರಣದ ವರದಿಗಾಗಿ ಘಟನಾ ಸ್ಥಳಕ್ಕೆ ತೆರಳಿದ್ದರು. ಅದಾಗಲೇ ಅಲ್ಲಿ ನೂರಾರು ಹಲವಾರು ಜಮಾಯಿಸಿದ್ದರು. ಜಾನ್ ಸೇತುವೆಯ ಪಕ್ಕ ನಿಂತ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾಗ ಹಿಂಬದಿಯಿಂದ ಬಂದ ಕುಂದಾಪುರದ ಪಿಎಸ್‌ಐ ನಾಸೀರ್ ಹುಸೆನ್ ಜಾನ್ ಅವರ ಬೆನ್ನಿಗೆ ಬಲವಾಗಿ ಗುದ್ದಿದ್ದಾರೆನ್ನಲಾಗಿದೆ. ಅಚಾನಕ್ ಘಟನೆಯಿಂದ ವಿಚಲಿತರಾದ ಪತ್ರಕರ್ತರು ಎಸ್‌ಐ ಅವರ ಕೃತ್ಯವನ್ನು ಪ್ರಶ್ನಿಸಿದಾಗ ನೀವು ಪತ್ರಕರ್ತರೆಂಬದು ತನಗೆ ತಿಳಿಯಲಿಲ್ಲ ಎಂಬ ಉಡಾಫೆಯ ಉತ್ತರವನ್ನು ನೀಡಿದ್ದಾರೆ. ಪತ್ರಕರ್ತರಿಗೆ ವಿಶೇಷ ಸ್ಥಾನಮಾನವಿರುವುದಿಲ್ಲ. ಆದರೆ ಜನಸಾಮಾನ್ಯರಿಗಾದರೂ ಒಂದೇ ಸಮನೆ ಹೀಗೆ ಮಾಡುವುದು ಸರಿಯಲ್ಲ ಎಂದು ಹೇಳಿದಾಗ ಈರ್ವರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ನಡುವೆ ಸ್ಥಳದಲ್ಲಿ ಪೋಟೋ ತೆಗೆಯುತ್ತಿದ್ದ ವರದಿಗಾರ ಶ್ರೀಕಾಂತ ಹೆಮ್ಮಾಡಿಯನ್ನು ಕೂಡ ಹಿಡಿದು ಎಳೆದಿದ್ದಾರೆ ಎನ್ನಲಾಗಿದೆ. (ಕುಂದಾಪ್ರ ಡಾಟ್ ಕಾಂ ಸುದ್ದಿ)

ಕುಂದಾಪುರ ಕಾರ್ಯನಿರತ ಪತ್ರಕರ್ತರ ಸಂಘ ಖಂಡನೆ
ಪಿಎಸ್‌ಐ ನಾಸಿರ್ ಹುಸೇನ್ ಕಾರ್ಯನಿರತ ಪತ್ರಕರ್ತರೊಂದಿಗೆ ಅಸಂಬದ್ಧವಾಗಿ ನಡೆದುಕೊಂಡಿರುವುದನ್ನು ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಖಂಡಿಸಿದೆ. ಪಿಎಸ್‌ಐ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಂಘ ಆಗ್ರಹಿಸಿದೆ. ಇಂತಹ ಘಟನೆ ಮರುಕಳಿಸದಂತೆ ಕುಂದಾಪುರ ಡಿಎಸ್‌ಪಿಗೆ ದೂರು ಸಲ್ಲಿಸಲಾಗಿದೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಹಾಗೂ ಕಾರ್ಯದರ್ಶಿ ನಾಗರಾಜ ರಾಯಪ್ಪನ ಮಠ ತಿಳಿಸಿದ್ದಾರೆ.

Exit mobile version