Kundapra.com ಕುಂದಾಪ್ರ ಡಾಟ್ ಕಾಂ

ಲೇಖಕರು ಸೃಜನಶೀಲತೆಯನ್ನು ಒತ್ತೆ ಇಡದಿರಿ: ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ

ಮೂಡುಬಿದಿರೆ: ‘ಸೃಜನಶೀಲತೆಯನ್ನು ಕಳೆದುಕೊಂಡಾಗ ಅಸಹಿಷ್ಣುತೆ ಹೆಚ್ಚಾಗುತ್ತದೆ. ಸೃಜನಶೀಲತೆ ಜೀವಂತವಾಗಿದ್ದರೆ ಅಸಹಿಷ್ಣುತೆಯ ಮಾತು ಹುಟ್ಟುವುದೇ ಇಲ್ಲ’ ಎಂದು ಸಾಹಿತಿ ಹೇಳಿದರು.
ಆಳ್ವಾಸ್ ನುಡಿಸಿರಿಯಲ್ಲಿ ಕೆ.ಎಸ್. ನರಸಿಂಹ ಸ್ವಾಮಿ ನೆನಪು ಸಂಸ್ಮರಣೆಯಲ್ಲಿ ಮಾತನಾಡಿದ ಅವರು, ‘ಒತ್ತಾಯವನ್ನು ಹೇರುವ ಕಾಲವಿದು. ಎಷ್ಟೇ ಒತ್ತಡ ಬಂದರೂ ಸೃಜನಶೀಲ ಲೇಖಕ ತನ್ನ ಅಂತರಂಗದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಬೇಕು. ಇಂದಿನ ದಿನಗಳಲ್ಲಿ ಲೇಖಕರು ತಮ್ಮ ಸೃಜನಶೀಲತೆಯನ್ನು ಒತ್ತೆ ಇಡುತ್ತಿದ್ದಾರೆ. ಸಮಾಜದಲ್ಲಿ ಕೇಳುವವರಿದ್ದಾರೆ ಆದರೆ, ಲೇಖಕರು ಹೇಳುವ ಶಕ್ತಿಯನ್ನು ಕಳೆದುಕೊಂಡಿದ್ದಾರೆ. ಸೃಜನಶೀಲ ಶಕ್ತಿಯನ್ನು ಉಳಿಸಿಕೊಳ್ಳಬೇಕು’ ಎಂದು ಪ್ರತಿಪಾದಿಸಿದರು.
ಕೆಎಸ್ಎನ್ ಅವರು ಕೇವಲ ಪ್ರೇಮಕವಿಯಲ್ಲ. ಬದಲಿಗೆ ಅವರು ಎಲ್ಲ ವಿಚಾರಗಳನ್ನು ಸೂಚ್ಯವಾಗಿ ಹೇಳಿದ ಕವಿ. ಆದ್ದರಿಂದ ರೈತರ ಆತ್ಮಹತ್ಯೆ, ಭಯೋತ್ಪಾದನೆ ಹೆಚ್ಚುತ್ತಿರುವ ಇಂದಿನ ಕಾಲದಲ್ಲಿ ನಾವೆಲ್ಲ ಕೆಎಸ್ಎನ್ ಅವರತ್ತ ವಾಲಬೇಕಿದೆ’ ಎಂದು ಹೇಳಿದರು.
ಅಧಿಕಾರ ಮತ್ತು ಭೋಗ ಜನರನ್ನು ಗಾಢವಾಗಿ ಪ್ರಭಾವ ಬೀರುವ ಅಂಶಗಳು. ಅಧಿಕಾರದ ಬಗ್ಗೆ ಬೇಕಾದಷ್ಟು ಕಾವ್ಯಗಳಿವೆ. ಆದರೆ, ಭೋಗದ ಬಗ್ಗೆ ಇರುವ ಕಾವ್ಯಗಳ ಸಂಖ್ಯೆ ತುಂಬಾ ಕಡಿವೆ. ಶೃಂಗಾರ ಕಾವ್ಯವನ್ನು ಎಚ್ಚರಿಕೆಯಿಂದ ಬರೆಯಬೇಕು. ಹೆಚ್ಚು ಒತ್ತು ಕೊಟ್ಟರೆ, ಅಶ್ಲೀಲವಾಗುತ್ತದೆ. ಕಡಿಮೆ ಹೇಳಿದರೆ ಸಪ್ಪೆಯಾಗುತ್ತದೆ. ಆದರೆ, ಕೆಎಸ್ಎನ್ ಅವರು ಈ ವಿಚಾರವನ್ನು ಸೂಚ್ಯವಾಗಿ ಹೇಳಿದರು. ಅಲ್ಲದೆ, ಗಂಡು-ಹೆಣ್ಣಿನ ಸಂಬಂಧಗಳಿಗೆ ಕೆಎಸ್ಎನ್ ಅವರು ತಾತ್ವಿಕ ಚೌಕಟ್ಟನ್ನು ತಂದುಕೊಟ್ಟರು ಎಂದು ವಿಶ್ಲೇಷಿಸಿದರು.
Exit mobile version