ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿದ್ಯಾರ್ಥಿಗಳು ಪ್ರಪಂಚದ ಜ್ಞಾನವನ್ನು ಪಡೆಯಬೇಕು ಆದರೆ ಅದಕ್ಕಿಂತ ಮೊದಲು ತಂದೆ ತಾಯಿ, ಅಜ್ಜ-ಅಜ್ಜಿ ಹಾಗೂ ನಮ್ಮ ಸುತ್ತ ಮುತ್ತಲಿನ ಚರಿತ್ರೆಗಳ ಬಗ್ಗೆ, ಆಚಾರ-ವಿಚಾರಗಳ ಬಗ್ಗೆ ಅರಿವನ್ನು ಪಡೆಯಬೇಕು ಎಂದು ಕೊಲ್ಲೂರು ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ರಘುರಾಮ ದೇವಾಡಿಗ ಹೇಳಿದರು.
ಅವರು ಇಲ್ಲಿನ ಸುಜ್ಞಾನ್ ಎಜುಕೇಷನಲ್ ಟ್ರಸ್ಟ್ ನ ವತಿಯಿಂದ ಯಡಾಡಿ-ಮತ್ಯಾಡಿಯ ವಿದ್ಯಾರಣ್ಯ ಆಂಗ್ಲ ಮಾದ್ಯಮ ಶಾಲೆ ಮತ್ತು ಸುಜ್ಞಾನ್ ಪಿ.ಯು. ಕಾಲೇಜಿನ ವಿದ್ಯಾರಣ್ಯ ಕ್ಯಾಂಪಸ್ ನಲ್ಲಿ ನಡೆಯುತ್ತಿರುವ ಮಂಥನ ಬೇಸಿಗೆ ಶಿಬಿರ ಎರಡನೇ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಾಲ್ಯದಲ್ಲಿಯೇ ಹೆಚ್ಚು ಕ್ರೀಯಾಶೀಲರಾಗಲು ಮತ್ತು ಖುಷಿ- ಖುಷಿಯಿಂದ ಬಾಲ್ಯವನ್ನು ಕಳೆಯಲು ಬೇಸಿಗೆ ಶಿಬಿರಗಳು ಉತ್ತಮ ಸಹಕಾರಿಯಾಗುತ್ತದೆ. ಈ ಬೇಸಿಗೆ ಶಿಬಿರ ಮಂಥನ ಕಾರ್ಯಕ್ರಮದಲ್ಲಿ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸುತ್ತಿದ್ದು, ಮಕ್ಕಳಿಗೆ ತುಂಬಾ ಜ್ಙಾನವನ್ನು ಪಡೆಯಲು ಸಾದ್ಯವಾಗುತ್ತದೆ. ಮಕ್ಕಳು ಉತ್ತಮ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರವನ್ನು ಪಡೆದು ಭವ್ಯ ಭಾರತದ ಪ್ರಜೆಗಳಾಗಬೇಕು ಎಂದರು.

ಪ್ರಥಮ ದರ್ಜೆ ಗುತ್ತಿಗೆದಾರರು ಅರುಣ ಕುಮಾರ ಹೆಗ್ಡೆ ಮಾತನಾಡಿ, “ಮಕ್ಕಳ ಸರ್ವತೋಮುಖ ಪ್ರಗತಿಯ ಗುರಿ ಉದ್ದೇಶದಿಂದ ಶಾಲಾ ಆಡಳಿತ ಮಂಡಳಿಯು ಸಾಕಷ್ಟು ಶ್ರಮವಹಿಸಿ ಖರ್ಚು ವೆಚ್ಚಗಳನ್ನು ನಿಭಾಯಿಸಿಕೊಂಡು ಬೇಸಿಗೆ ಶಿಬಿರಗಳನ್ನು ಆಯೋಜಿಸುತ್ತವೆ. ಇಂತಹ ಶಿಬಿರಗಳು ಮಕ್ಕಳ ವ್ಯಕ್ತಿತ್ವ ಬೆಳವಣಿಗೆಗೆ ಸಾಕಷ್ಟು ಸಹಕಾರಿಯಾಗಲಿದ್ದು ಮಕ್ಕಳೆಲ್ಲರೂ ಅದರ ಪ್ರಯೋಜನವನ್ನು ಪಡೆಯಬೇಕು”ಎಂದರು.
ಕಾರ್ಯಕ್ರಮದಲ್ಲಿ ಸುಜ್ಞಾನ್ ಎಜುಕೇಷನಲ್ ಟ್ರಸ್ಟ್ನ ಅಧ್ಯಕ್ಷರಾಗಿರುವ ಡಾ. ರಮೇಶ ಶೆಟ್ಟಿ, ಕಾರ್ಯದರ್ಶಿ ಪ್ರತಾಪಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ, ಮುಖ್ಯೋಪಾದ್ಯಾಯರಾದ ಪ್ರದೀಪ ಕೆ. ಉಪಸ್ಥಿತರಿದ್ದರು.
ಈ ದಿನದ ವಿಶೇಷತೆ:
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ, ರಾಜ್ಯ ಮಟ್ಟದ ಸಂಪನ್ಮೂಲ ಶಿಕ್ಷಕಿ ವಂದನ ರೈ ಅವರಿಂದ ಅಭಿನಯ ಗೀತೆ ತರಬೇತಿ, ಡಾ.ಜಿ.ಪಿ. ಗೌತಮ ರಾಷ್ಟ್ರ ಪ್ರಶಸ್ತಿ ವಿಜೇತ ಹಾಗೂ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ, ಶಿಕ್ಷಕ ಆಜಾದ್ ಮಹಮ್ಮದ್ ಅವರಿಂದ ಏರೋಬಿಕ್ ನೃತ್ಯ ತರಬೇತಿ, ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ, ಶಿಕ್ಷಕ ರಾಜಶೇಖರ ತಾಳಿಕೋಟೆ ಅವರಿಂದ ಚಿತ್ರಕಲಾ ತರಬೇತಿ, ಸತೀಶ ಉಡುಪಿ ಇವರಿಂದ ಸುಲಭ ಗಣಿತ ತರಬೇತಿ, ರಾಜ್ಯ ಮಟ್ಟದ ತರಬೇತಿದಾರ ಮತ್ತು ನೃತ್ಯಗಾರ ಹರೀಶ ಕಾಪು ಅವರಿಂದ ನೃತ್ಯ ತರಬೇತಿ, ಸಂಪನ್ಮೂಲ ವ್ಯಕ್ತಿಗಳಾದ ಸೂರ್ಯ, ಸುಜನ ಹೀಗೆ 18 ಜನ ಸಂಪನ್ಮೂಲ ವ್ಯಕ್ತಿಗಳಿಂದ ಸುಮಾರು 1೦೦೦ ಕ್ಕೂ ಮಿಕ್ಕಿ ವಿದ್ಯಾರ್ಥಿಗಳನ್ನು 3 ವಿಭಾಗಗಳಾಗಿ ವಿಂಗಡಿಸಿ ಎರಡನೇ ದಿನದ ಶಿಬಿರ ಆಯೋಜಿಸಲಾಗಿತ್ತು.