Kundapra.com ಕುಂದಾಪ್ರ ಡಾಟ್ ಕಾಂ

ರಾಜ್ಯಮಟ್ಟದ ಆಳ್ವಾಸ್ ಕಲಾಮೇಳ: ನುಡಿಸಿರಿಯ ಸೊಬಗಿಗೆ ಕುಂಚಗಳ ಬೆರಗು

ಅಪರ ಉಜಿರೆ

ಪ್ರತಿ ವರ್ಷವೂ ನುಡಿಸಿರಿಯು ಒಂದಲ್ಲಾ ಒಂದು ಕಾರಣಕ್ಕೆ ತನ್ನ ವಿಶೇಷತೆಯನ್ನು ಮೆರೆಯುತ್ತಾ ಬಂದಿದೆ. ಎಲ್ಲಾ ನುಡಿಸಿರಿಗಳಲ್ಲೂ ನಾಡಿನ ವಿವಿಧ ಭಾಗಗಳಿಂದ ಚಿತ್ರ ಕಲಾವಿದರನ್ನು ಕರೆಸಿ ಅವರಿಂದ ವಿವಿಧ ಕಲಾಕೃತಿಗಳನ್ನು ಹೊರತರುವ ಕಾರ್ಯ ಎಲ್ಲರಿಗೂ ತಿಳಿದ ವಿಚಾರ. ಆದರೆ ಈ ಬಾರಿ ೧೨ನೇ ಆಳ್ವಾಸ್ ನುಡಿಸಿರಿಯಲ್ಲಿ ಕೊಂಚ ವಿಶೇಷವೆಂಬಂತೆ ರಾಜ್ಯಮಟ್ಟದ ಆಳ್ವಾಸ್ ಕಲಾಮೇಳವನ್ನು ಆಯೋಜಿಸಿರುವ ಡಾ. ಆಳ್ವರು ನಾಡಿನ ಕಲಾವಿದರು ರಚಿಸಿರುವ ಕಲಾಕೃತಿಗಳನ್ನು ಪ್ರದರ್ಶನ ಏರ್ಪಡಿಸಿರುವುದಲ್ಲದೇ ಕಲಾವಿದರಿಗೂ ಅನುಕೂಲವಾಗುವಂತೆ ಮಾರಾಟಕ್ಕೂ ಅವಕಾಶ ನಿಡದ್ದಾರೆ.

ಆಳ್ವಾಸ್ ಪದವಿ ಕಾಲೇಜಿನ ಆವರಣದಲ್ಲಿ ರಾರಾಜಿಸುತ್ತಿರುವ ಕಲಾಮೇಳದಲ್ಲಿ ಕನ್ನಡ ವಿಶ್ವವಿದ್ಯಾಲಯ, ಹಂಪಿ, ಸ್ವರೂಪ ಅಧ್ಯಯನ ಕೇಂದ್ರ, ಮಂಗಳೂರು, ಕರಾವಳಿ ಕಲಾವಿದರ ಚಾವಡಿ, ಚಿತ್ರಕಲಾ ಮಂದಿರ ಉಡುಪಿ ಮತ್ತು ವಿಜಯಾ ದೃಶ್ಯಕಲಾ ಮಹಾವಿದ್ಯಾಲಯ ಮೊದಲಾದ ಸಂಸ್ಥೆಗಳನ್ನು ಒಳಗೊಂಡಂತೆ ೬೪ ಕಲಾವಿದರು ಪಾಲ್ಗೊಂಡಿದ್ದಾರೆ.

ಯಾವುದೇ ಮಧ್ಯವರ್ತಿಗಳ ತೊಂದರೆಯಿಲ್ಲದೆ ನೇರವಾಗಿ ಗ್ರಾಹಕ ಮತ್ತು ಕಲಾವಿದರ ನಡುವೆ ಸಂಪರ್ಕವನ್ನು ಸಾಧಿಸುವ ಮೂಲಕ ಕಲಾವಿದರ ಕಲಾಕೃತಿಗಳಿಗೆ ನ್ಯಾಯಯುವ ಮೌಲ್ಯ ಸಿಗುವಂತೆ ಮಾಡಲಾಗಿದೆ. ‘ವರ್ಷವರ್ಷವೂ ಬೆಂಗಳೂರಿನಲ್ಲಿ ನಡೆಯುವ ಚಿತ್ರಸಚಿತೆಯ ಮಾದರಿಯನ್ನಿಟ್ಟುಕೊಂಡು ಈ ಕಲಾಮೇಳವನ್ನು ಆಯೋಜಿಸಿದ್ದೇವೆ. ಕಲಾವಿದರಿಗೆ ಇಲ್ಲಿ ಎಲ್ಲಾ ರೀತಿಯ ಸೌಲಭ್ಯಗಳೊಂದಿಗೆ ತಮ್ಮ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಉಚಿತ ಅವಕಾಶವನ್ನು ಮಾಡಿಕೊಡಲಾಗಿದೆ. ಇಲ್ಲಿ ಸುಮಾರು ಎಂಟು ಮಂದಿ ಸ್ಥಳದಲ್ಲಿಯೇ ವ್ಯಕ್ತಿಚಿತ್ರಗಳನ್ನು ರಚಿಸುವ ಕಲಾವಿದರಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.’ ಎನ್ನುತ್ತಾರೆ ಕಲಾಮೇಳದ ಉಸ್ತುವಾರಿಯನ್ನು ವಹಿಸಿಕೊಂಡಿರುವ ಆಳ್ವಾಸ್ ವಿದ್ಯಾಸಂಸ್ಥೆಯ ಶಿಕ್ಷಕ ಶ್ರೀ ಭಾಸ್ಕರ್ ನೆಲ್ಯಾಡಿ.

‘ನಾನು ದೂರದ ಹಂಪಿಯಿಂದ ಬಂದಿದ್ದು, ಚಿತ್ರಕಲಾವಿದರನ್ನು ಇಷ್ಟು ಗೌರವದಿಂದ ಕಾಣುವ ಹಾಗೂ ಈ ತರ ಎಲ್ಲಾ ಸೌಲಭ್ಯಗಳನ್ನು ಅಚ್ಚುಕಟ್ಟಾಗಿ ಮಾಡಿಕೊಟ್ಟಿರುವುದನ್ನು ಈ ಹಿಂದೆ ಎಲ್ಲಿಯೂ ನೋಡಿಲ್ಲ. ರಾಷ್ಟ್ರಮಟ್ಟದ ಈ ಉತ್ಸವದಲ್ಲಿ ಪಾಲ್ಗೊಳ್ಳಲು ನನಗೆ ತುಂಬಾ ಹೆಮ್ಮೆ ಮತ್ತು ಖುಷಿಯಾಗುತ್ತಿದೆ. ವಿದ್ಯಾರ್ಥಿ ಜೀವನದಲ್ಲಿಯೇ ನನಗೆ ಈ ಅವಕಾಶ ದೊರೆತಿದೆ. ನಿಜಕ್ಕೂ ನಾನು ಧನ್ಯ ಎಂದೆನಿಸುತ್ತದೆ’ ಎಂದು ಸಚಿತಸದಿಂದ ಅಮತರಾಳದ ಮಾತುಗಳನ್ನು ಬಿಚ್ಚಿಡುತ್ತಾರೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ದೃಶ್ಯಕಲಾ ವಿದ್ಯಾರ್ಥಿ .

Exit mobile version