Site icon Kundapra.com ಕುಂದಾಪ್ರ ಡಾಟ್ ಕಾಂ

ಆಪರೇಷನ್ ಸಿಂದೂರ್ ಯಶಸ್ವಿ: ಕೊಲ್ಲೂರು, ಕೋಟ ಮೊದಲಾದ ದೇಗುಲಗಳಲ್ಲಿ ವಿಶೇಷ ಪ್ರಾರ್ಥನೆ  

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಭಾರತವು ಪಾಕ್ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಶಿಬಿರಗಳ ಮೇಲೆ “ಆಪರೇಷನ್ ಸಿಂದೂರ್”  ಹೆಸರಿನಲ್ಲಿ ನಡೆಸಿದ  ಸೇವಾ ಕಾರ್ಯಾಚರಣೆಯನ್ನು ಯಶಸ್ವಿಯಾದ ಹಿನ್ನೆಲೆಯಲ್ಲಿ ರಾಜ್ಯ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಅವರ ಸೂಚನೆಯಂತೆ ದೇವಸ್ಥಾನಗಳಲ್ಲಿ ವಿಶೇಷ ಪ್ರಾರ್ಥನೆ, ಪೂಜೆ ಸಲ್ಲಿಸಲಾಯಿತು.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಪೂಜೆ:
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಬುಧವಾರ ಸಂಜೆ ವಿಶೇಷ ಪ್ರಾರ್ಥನೆ ಸಲ್ಲಿಸಿ, ತುಪ್ಪದ ದೀಪ ಬೆಳಗಿಸಲಾಯಿತು. ಅರ್ಚಕ ವಿಘ್ನೇಶ್ ಅಡಿಗ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಧಾರ್ಮಿಕ ವಿಧಿ ನಡೆಸಲಾಯಿತು. ದೇಗುಲದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ ಸೈನಿಕರ ಶ್ರೇಯಸ್ಸಿಗಾಗಿ ಶ್ರೀದೇವಿಗೆ ತುಪ್ಪದ ಆರತಿ ಬೆಳಗಿದರು. ಗುರುವಾರ ಬೆಳಗ್ಗೆಯೂ ಸೈನಿಕರಿಗಾಗಿ ಶ್ರೀ ಮೂಕಾಂಬಿಕಾ ದೇವಿಗೆ ಶತರುದ್ರಾ ಭಿಷೇಕ ನಡೆಸುವುದಾಗಿ ದೇವಸ್ಥಾನದ ಮೂಲಗಳು ತಿಳಿಸಿವೆ.

ಕೋಟ ಹಲವು ಮಕ್ಕಳು ತಾಯಿ ದೇವಳದಲ್ಲಿ ಪೂಜೆ:
ಕೋಟ ಹಲವು ಮಕ್ಕಳು ತಾಯಿ ದೇವಳದಲ್ಲಿ “ಆಪರೇಷನ್ ಸಿಂದೂರ್ ” ಯಶಸ್ವಿ ಕಾರ್ಯಾಚಣೆಯ ಪ್ರಯುಕ್ತ ವಿಶೇಷ ಪೂಜೆ ಮಾಡಲಾಯಿತು. ಈ ಸಂದರ್ಭದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಭಾರತದ ಯಾವೊಬ್ಬ ಸೈನಿಕನ ಒಂದು ತೊಟ್ಟು ರಕ್ತ ಕೂಡ ಚೆಲ್ಲದಿರಲಿ ನಮ್ಮ ಸೈನಿಕರೆಲ್ಲಾ ಕ್ಷೇಮವಾಗಿರಲಿ ಎಂದು ಹಲವು ಮಕ್ಕಳು ತಾಯಿ ಕೋಟ ಅಮೃತೇಶ್ವರಿ ಅಮ್ಮ ನಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಆನಂದ ಸಿ ಕುಂದರ್, ಸದಸ್ಯರಾದ ಸುಬ್ರಾಯ ಜೋಗಿ (ಅರ್ಚಕ ಪ್ರತಿನಿಧಿ), ಚಂದ್ರ ಆಚಾರ್ ಕೋಟ, ಶಿವ ಪೂಜಾರಿ ಮಣ್ಣೂರು, ಗಣೇಶ್ ಕೆ ನೆಲ್ಲಿಬೆಟ್ಟು, ಸುಭಾಸ್ ಶೆಟ್ಟಿ ಗಿಳಿಯಾರ್, ಸುಧಾ ಎ ಪೂಜಾರಿ, ಜ್ಯೋತಿ ದೇವದಾಸ್ ಕಾಂಚನ್, ರತನ್ ಐತಾಳ್ ಕೋಟ ಹಾಗೂ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಸಿಬ್ಬಂದಿವರ್ಗ ಹಾಗೂ ಅರ್ಚಕ ವೃಂದದವರು ಉಪಸ್ಥಿತರಿದ್ದರು.

Exit mobile version