Site icon Kundapra.com ಕುಂದಾಪ್ರ ಡಾಟ್ ಕಾಂ

ಕಾಲ್ತೋಡು: ಸರಕಾರಿ ಆಯುರ್ವೇದ ಚಿಕಿತ್ಸಾಲಯದಲ್ಲಿ ಉಚಿತ ನೇತ್ರ ತಪಾಸಣೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಗ್ರಾಮೀಣ ಭಾಗದ ಜನರಿಗೆ ಆಸ್ಪತ್ರೆಗೆ ಹೋಗಲು ಕಷ್ಟ ಆಗುತ್ತದೆ ಹಾಗಾಗಿ ಸಾರ್ವಜನಿಕರಿಗೆ ಅನುಕೂಲವಾಗಲು ಸರ್ಕಾರವು ಉಚಿತ ಕ್ಯಾಂಪ್ ಗಳನ್ನು ನಡೆಸುತ್ತವೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಇಂದು ತಪ್ಪಾದ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಿಂದ ಅನೇಕ ಕಾಯಿಲೆಗಳು ಬರುತ್ತವೆ ಅದಕ್ಕಾಗಿ ನಮ್ಮ ಸುತ್ತಮುತ್ತಲ ಬೆಳೆದ ತರಕಾರಿ, ಹಣ್ಣು, ಹಂಪಲುಗಳನ್ನು ಉಪಯೋಗಿಸಬೇಕು. ಅಲ್ಲದೆ ದೀರ್ಘಕಾಲಿನ ಕೆಲವು ಕಾಯಿಲೆಗಳಿಗೆ ಆಯುರ್ವೇದದಲ್ಲಿ ಉತ್ತಮ ಪರಿಹಾರಗಳವೆ ಈ ನಿಟ್ಟಿನಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಿರುವ ಕಾಲ್ತೋಡು ಆಯುರ್ವೇದ ಆಸ್ಪತ್ರೆಯ ಪ್ರಯೋಜನ ಪಡೆದುಕೊಳ್ಳಿ ಎಂದು ಕುಂದಾಪುರ ತಾಲೂಕಿನ ಆರೋಗ್ಯ ಅಧಿಕಾರಿಗಳಾದ ಡಾ. ಪ್ರೇಮಾನಂದ್‌ ಹೇಳಿದರು.

ಅವರು ಉಡುಪಿಯ ಆಯುಷ್ ಇಲಾಖೆ, ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಕಾಲ್ತೋಡು ಗ್ರಾಮ ಪಂಚಾಯತ್ , ಕಾಲ್ತೋಡು ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ, ಕಾಲ್ತೋಡು ಆಯುಷ್ಮಾನ್ ಆರೋಗ್ಯ ಮಂದಿರ (ಆಯುಷ್), ಪ್ರಾಥಮಿಕ ಆರೋಗ್ಯ ಕೇಂದ್ರ ಕಿರಿಮಂಜೇಶ್ವರ, ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಶಿರೂರು ಮುದ್ದುಮನೆ ಇವರ ಸಂಯುಕ್ತ ಆಶ್ರಯದಲ್ಲಿ ಕಾಲ್ತೋಡು ಸರಕಾರಿ ಆಯುರ್ವೇದ ಚಿಕಿತ್ಸಾಲಯ ಇಲ್ಲಿ ಹಮ್ಮಿಕೊಂಡಿರುವ, ದೃಷ್ಟಿ ಪ್ರದಾನ ಯೋಜನೆ 2025-26, ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ಮತ್ತು ರಕ್ತದೊತ್ತಡ, ಮಧುಮೇಹ ಪರೀಕ್ಷೆ, ಉಚಿತ ಆಯುಷ್ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. 

ಕಾರ್ಯಕ್ರಮದ ಅಧ್ಯಕ್ಷತೆ  ವಹಿಸಿದ್ದ ಕಾಲ್ತೋಡು  ಗ್ರಾಮ ಪಂಚಾಯತ್ ಹಾಲಿ ಸದಸ್ಯ ಅಣ್ಣಪ್ಪ ಶೆಟ್ಟಿ ಮಾತನಾಡಿ, ಕ್ಯಾಂಪ್ ಗಳಲ್ಲಿ ಶಿಬಿರ ವೈದ್ಯರು ಹೇಳಿರುವ ಸಲಹೆ ಸೂಚನೆಗಳನ್ನು ಸರಿಯಾಗಿ ಪಾಲಿಸಬೇಕು. ಸಾರ್ವಜನಿಕರಿಗೆ ಉತ್ತಮ ಆರೋಗ್ಯ ನೀಡುವುದೇ ಪಂಚಾಯತ್‌ನ ಉದ್ದೇಶವಾಗಿದೆ ಎನ್ನುತ್ತಾ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು.

ಮುದ್ದು ಮನೆ ಶಿರೂರು ಕಣ್ಣಿನ ಆಸ್ಪತ್ರೆಯ  ನೇತ್ರತಜ್ಞರಾದ ಡಾ. ರಶ್ಮಿ ಅವರು ಕಣ್ಣಿನ ಸಾಮಾನ್ಯ ಕಾಯಿಲೆಗಳ ಬಗ್ಗೆ ವಿವರಿಸಿದರು. ಕಾಲ್ತೋಡು ಗ್ರಾಮ ಪಂಚಾಯತ್ ಸದಸ್ಯ ಚಿಕ್ಕಯ್ಯ ಶೆಟ್ಟಿ, ಶಂಕರ್ ಶೆಟ್ಟಿ ಶಿರೂರು ಮುದ್ದು ಮನೆ, ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ನಾವುಂದ ವೈದ್ಯಾಧಿಕಾರಿಗಳಾದ ಡಾ. ವಿನಯ ಅವರು ಉಪಸ್ಥಿತರಿದ್ದರು.  ನಂತರ ಆಯ್ದ ಕುಟುಂಬಗಳಿಗೆ ಔಷಧಿ ಸಸ್ಯಗಳನ್ನು ವಿತರಿಸಲಾಯಿತು. 

ಕಾಲ್ತೋಡು ಸ.ಆ.ಚಿ ಡಾ. ವೈದ್ಯಾಧಿಕಾರಿಯಾದ ವೀಣಾ ಕಾರಂತ್ ಪ್ರಸ್ತಾವಿಕ ನುಡಿಗಳನ್ನಾಡಿ ನಿರೂಪಿಸಿ, ಸ್ವಾಗತಿಸಿದರು.

ಶಿರೂರು ಮುದ್ದುಮನೆ ಇಲ್ಲಿಯ ನೇತ್ರ ತಪಾಸಣಾ ತಂಡದಿಂದ ಉಚಿತ ನೇತ್ರ ತಪಾಸಣೆ ಹಾಗೂ ಡಾ. ವೀಣಾ ,ಡಾ. ವಿನಯ ಉಚಿತ ಆಯುಷ್ ಆರೋಗ್ಯ ತಪಾಸಣೆ ನಡೆಸಿ ಸಾರ್ವಜನಿಕರಿಗೆ ಔಷಧಿ ವಿತರಿಸಲಾಯಿತು.

ಪ್ರಾಥಮಿಕ ಆರೋಗ್ಯ ಕೇಂದ್ರ ಕಿರಿಮಂಜೇಶ್ವರ ಸಿಎಚ್‌ಒ ರಕ್ಷಿತಾ, ಪಿಎಚ್‌ಸಿಒ ಪ್ರತಿಮಾ, ಆಶಾ ಕಾರ್ಯಕರ್ತೆಯರು, ಗ್ರಾ.ಪಂ ಕಾಲ್ತೋಡು ಮಣಿಕಂಠ, ಆಯುಷ್ಮಾನ್ ಆರೋಗ್ಯ ಮಂದಿರದ ಸಿಬ್ಬಂದಿಗಳಾದ ಸರಸ್ವತಿ, ನಾಗದೀಪ, ವಿಶಾಲ ಸಹಕರಿಸಿದರು.

Exit mobile version