ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಬೇರೆ ಬೇರೆ ಭಾಷೆಗಳಲ್ಲಿರುವ ಸಾಹಿತ್ಯಗಳ ನಡುವೆ ವಿನಿಮಯಗಳು ನಡೆಯುವ ಮೂಲಕವಷ್ಟೇ ಯಾವುದೇ ಸಾಹಿತ್ಯ ಬೆಳವಣಿಗೆ ಸಾಧಿಸಲು ಸಾಧ್ಯ. ಎರಡು ಭಾಷೆಗಳ ಮೇಲೆ ಪ್ರಭುತ್ವ ಸಾಧಿಸಿದ ಭಾಷಾಂತರಕಾರರಿಲ್ಲದೆ ಆ ರೀತಿಯ ವಿನಿಮಯ ಸಾಧ್ಯವಿಲ್ಲ ಎಂದು ಕನ್ನಡದ ಹಿರಿಯ ಲೇಖಕಿ ವೈದೇಹಿ ಹೇಳಿದರು.
ಅವರು ಮಣಿಪಾಲದ ಅವರ ಮನೆ ‘ಇರುವಂತಿಗೆ’ಯಲ್ಲಿ ನಡೆದ ಪುಸ್ತಕ ಬಿಡುಗಡೆಯ ಸರಳ ಸಮಾರಂಭದಲ್ಲಿ ಪಾರ್ವತಿ ಜಿ. ಐತಾಳರ ‘ಮಲೆಯಾಳ ಸಾಹಿತ್ಯದಲ್ಲಿ ಮಹಿಳಾ ಧ್ವನಿಗಳು’ ಎಂಬ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಮಾಹೆ ವಿಶ್ವವಿದ್ಯಾನಿಲಯದ ಗಾಂಧಿ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ.ವರದೇಶ್ ಹಿರೇಗಂಗೆ, ಕೃತಿಕಾರ್ತಿ ಪಾರ್ವತಿ ಐತಾಳ್, ಸಾಂಸ್ಕೃತಿಕ ಸಂಘಟಕರಾದ ಶ್ರೀನಿವಾಸ ಮೂರ್ತಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಸ್ರೂರು ಶಾರದಾ ಕಾಲೇಜಿನ ಕನ್ನಡ ಉಪನ್ಯಾಸಕ ಕುಮಾರ್ ಸ್ವಾಗತಿಸಿದರು. ಗಾಂಧಿ ಅಧ್ಯಯನ ಕೇಂದ್ರದ ಸಂಶೋಧಕಿ ಕೌಸ್ತುಭ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

