ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರೌಢ ಶಿಕ್ಷಣ ವಿದ್ಯಾರ್ಥಿಗಳ ಜೀವನದ ಬಹು ಮುಖ್ಯ ಘಟ್ಟ ಸರಕಾರಿ ಅಥವಾ ಖಾಸಗಿ ವ್ಯವಸ್ಥೆಯಲ್ಲಿರುವ ಶಿಕ್ಷಣ ಸಂಸ್ಥೆಗಳು. ಪ್ರತಿಯೊಂದು ವಿದ್ಯಾರ್ಥಿಗಳ ಕಾಳಜಿ ವಹಿಸುವುದರ ಜೊತೆಗೆ ಆಯಾ ಸಂಸ್ಥೆಗಳಲ್ಲಿ ಶಿಕ್ಷಣದ ಪ್ರಾರಂಭದಿಂದ ಹಿಡಿದು ಅಂತ್ಯದವರೆಗೂ ವಿದ್ಯಾರ್ಥಿಗಳಿಗೆ ಭೌದ್ದಿಕ ಸಾಮರ್ಥ್ಯ ತುಂಬಿ ಅವರುಗಳ ಶೈಕ್ಷಣಿಕ ಗುರಿಯ ದಡ ತಲುಪಿಸುವ ನೈತಿಕತೆಯನ್ನು ಪ್ರದರ್ಶಿಸಲಿ ಎಂದು ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಕರೆ ನೀಡಿದರು.
ಅವರು ತಾಲೂಕಿನ ಪಂಚಾಯತ್ ಸಭಾಂಗಣದಲ್ಲಿ ನಡೆದ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರು ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯರೊಂದಿಗೆ ನಡೆದ ಪ್ರೌಢ ಶಾಲೆಗಳ ಶಾಲಾ ದಾಖಲಾತಿ ಬಗೆಗಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕ್ಷೇತ್ರದ ಕೆಲವೊಂದು ಶಿಕ್ಷಣ ಸಂಸ್ಥೆಗಳು ಪ್ರೌಢ ಶಾಲೆಗೆ ದಾಖಲು ಮಾಡಿಕೊಂಡ ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ಹಿಂದುಳಿದಿರುವ ಕಾರಣ ಮುಂದಿಟ್ಟು ಹಾಗೂ ಎಸ್ಎಸ್ಎಲ್ಸಿ ಯಲ್ಲಿ ಶೇಕಡಾ ನೂರು ಫಲಿತಾಂಶ ದಾಖಲಿಸುವ ದೂರಾಲೋಚನೆಯನ್ನಿಟ್ಟುಕೊಂಡು ಅಂತಹ ವಿದ್ಯಾರ್ಥಿಗಳನ್ನು ಹತ್ತನೇ ತರಗತಿಗೆ ಬೇರೆ ಖಾಸಗಿ ಶಾಲೆಗಳಿಗೆ ಅಥವಾ ಸರಕಾರಿ ಶಾಲೆಗಳಿಗೆ ದಾಖಲಾಗುವಂತೆ ಮಾಡುವ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ. ಇದು ಒಳ್ಳೆಯ ಸಂಪ್ರದಾಯವಲ್ಲ. ಹಾಗಾಗಿ ಇಂತಹ ಸಂದರ್ಭಗಳಲ್ಲಿ ಯಾವುದೇ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯರು ಎಸ್ಎಸ್ಎಲ್ಸಿ ಗೆ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವ ಸಮಯದಲ್ಲಿ ಬೇರೆ ಶಾಲೆಗಳಿಂದ 9 ನೇ ತರಗತಿಯಿಂದ ಬೇರ್ಪಡೆ ಹಾಗೂ 10 ತರಗತಿಗೆ ಸೇರ್ಪಡೆಗೆ ಸಕಾರಣವನ್ನು ತಿಳಿಸಿ, ಎಲ್ಲಾ ಆಯಾಮದಿಂದಲೂ ಪರಿಶೀಲಿಸಿ ನ್ಯಾಯಯುತ, ನೈತಿಕ ಹಾಗೂ ನೈಜ ಕಾರಣವಿದ್ದಲ್ಲಿ ಅದರಂತೆ ಕ್ರಮ ವಹಿಸಬೇಕು.

ಇದನ್ನು ಹೊರತು ಪಡಿಸಿ ಬೇರೆ ಯಾವುದೇ ದುರುದ್ದೇಶದ ದಾಖಲಾತಿ ಆಗದಂತೆ ಎಚ್ಚರ ವಹಿಸುವುದು ಇದರಿಂದ ಸರಕಾರಿ ಶಾಲೆಗಳಿಗೆ ಕೆಟ್ಟ ಹೆಸರು ಬರುತ್ತದೆ. ಈ ಬಗ್ಗೆ ಅಗತ್ಯ ಕ್ರಮ ವಹಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಮುಖ್ಯೋಪಾಧ್ಯಾಯರುಗಳಿಗೆ ಸೂಚಿಸಿದರು.
ಶಾಲಾಭಿವೃದ್ಧಿ ಸಮಿತಿಗಳು ಈ ವಿಚಾರಗಳ ಬಗ್ಗೆ ಎಚ್ಚರದಿಂದ ಇದ್ದು ಇಂತಹ ವಿದ್ಯಮಾನಗಳನ್ನು ಗಮನಿಸಬೇಕು. ಶಿಕ್ಷಣ ಕೇವಲ ಫಲಿತಾಂಶವನ್ನು ಮಾತ್ರ ಅವಲಂಬಿಸಿಲ್ಲ ಅದರ ಜೊತೆಗೆ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆಯೂ ಕಾಳಜಿ ವಹಿಸುವ ಆಯಾಮವನ್ನು ಕೂಡ ಹೊಂದಿರುತ್ತದೆ. ಇದರ ಬಗ್ಗೆ ಎಲ್ಲಾ ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಬೈಂದೂರು ಹಾಗೂ ಕುಂದಾಪುರ ವ್ಯಾಪ್ತಿಯ ಆಸಕ್ತ ಪ್ರೌಢ ಶಾಲಾ ಮಕ್ಕಳಿಗೆ ಯಕ್ಷ ಶಿಕ್ಷಣ ನೀಡುವ ಬಗ್ಗೆಯೂ ಚರ್ಚೆ ನಡೆಯಿತು. ಸಭೆಯಲ್ಲಿ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಕುಂದಾಪುರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಬೈಂದೂರು, ಕುಂದಾಪುರ, ಹಾಗೂ ಬ್ರಹ್ಮಾವರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.