Site icon Kundapra.com ಕುಂದಾಪ್ರ ಡಾಟ್ ಕಾಂ

ಮೇ ಅಂತ್ಯದೊಳಗೆ ಶಿರೂರಿನಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆ. ಕೇಂದ್ರ ತಜ್ಞರ ತಂಡದ ಭರವಸೆ.

ಬೈಂದೂರು: ಶಿರೂರು ಗ್ರಾಮದ ಮಹತ್ವಕಾಂಕ್ಷೆ ಯೋಜನೆಯಾದ ಸಮುದ್ರದ ಉಪ್ಪು ನೀರನ್ನು ಶುದ್ದೀಕರಿಸಿ ಸಿಹಿ ನೀರಾಗಿ ಮಾರ್ಪಡಿಸುವ ಶುದ್ದ ಕುಡಿಯುವ ನೀರಿನ ಘಟಕವನ್ನು ಎಪ್ರಿಲ್ ಅಥವಾ ಮೇ ಅಂತ್ಯದೊಳಗೆ ಸ್ಥಾಪಿಸಲಾಗುವುದು. ಶುದ್ದ ನೀರಿನ ಕುಡಿಯುವ ಘಟಕ ಜಿಲ್ಲೆಯಲ್ಲಿಯೇ ಪ್ರಥಮ ಎಂದು ತಜ್ನರಾದ ಹರಿಪ್ರಸಾದ ಹಾಗೂ ಅವಿನಾಶ್ ಸ್ಪಷ್ಠಪಡಿಸಿದ್ದಾರೆ. ಅವರು ಶಿರೂರಿನ ವಿವಿಧ ಕಡೆ ಸ್ಥಳ ಪರಿಶೀಲನೆ ಹಾಗೂ ಸಾರ್ವಜನಿಕರ ಜೊತೆ ಚರ್ಚೆ ನಡೆಸಿ ಮಾಹಿತಿ ನೀಡಿದರು.

ಶಿರೂರು ಉತ್ಸವದಲ್ಲಿ ನೀಡಿದ ಭರವಸೆ: ಕಳೆದ ಎಪ್ರಿಲ್‌ನಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ನಡೆದ ಶಿರೂರು ಉತ್ಸವದಲ್ಲಿ ಗ್ರಾಮೀಣಾಭಿವೃದ್ದಿ ಸಚಿವ ಎಚ್.ಕೆ.ಪಾಟೀಲ್ ಶಿರೂರಿನಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಹಾಗೂ ಪಶು ಆಸ್ಪತ್ರೆ ಸ್ಥಾಪಿಸುವ ಭರವಸೆ ನೀಡಿದ್ದರು. ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದರು. ಶಿರೂರು ವೆಲ್‌ಫೇರ್ ಟ್ರಸ್ಟ್ ಸಂಸ್ಥಾಪಕ ಸೈಯದ್ ಅಬ್ದುಲ್ ಖಾದರ್ ಬಾಶುರವರ ಪ್ರಯತ್ನದ ಬಳಿಕ ಸ್ಥಳ ಪರಿಶೀಲನೆಗೆ ಇಸ್ರೇಲ್ ಮೂಲದ ತಾಹನ್ ಕಂಪೆನಿಯ ಮುಖ್ಯಸ್ಥ ಹರಿಪ್ರಸಾದ್ ಬೆಂಗಳೂರು ಹಾಗೂ ಕ್ಯಾಲಿಪೊರ್ನಿಯಾದ ಆರ್‌ವೈಸ್ ಕಂಪೆನಿಯ ಅವಿನಾಶ್ ಶಿರೂರಿಗೆ ಆಗಮಿಸಿದ್ದರು. ನಂತರ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿ, ಉಪ್ಪು ನೀರಿನ ಪರೀಕ್ಷೆ ಸೇರಿದಂತೆ ವಿವಿಧ ಪ್ರಕ್ರಿಯೆಗಳು ನಡೆಯುತ್ತಿದೆ. ಸ್ಥಳೀಯ ಸಂಪನ್ಮೂಲ ಬಳಸಿಕೊಂಡು ನಡೆಸವ ಉದ್ಯಮ, ವಿದ್ಯುತ್ ಉತ್ಪಾದನೆ, ಈಲರ್ನಿಂಗ್ ಸೇರಿದಂತೆ ಹಲವು ಯೋಜನೆಗಳ ಅನುಷ್ಠಾನ ಗೊಳಿಸುವ ಚಿಂತನೆ ಇದೆ. ಈಗಾಗಲೇ ಪ್ರಕ್ರಿಯೆಗಳು ನಡೆಯುತ್ತಿದ್ದು ಏಳು ದಿವಸದ ಒಳಗೆ ಸಚಿವರಿಗೆ ವರದಿ ನೀಡಲಾಗುವುದು ಎಂದರು.

ಬಂದೂರು ಶಾಸಕ ಕೆ.ಗೋಪಾಲ ಪೂಜಾರಿ, ಕೆಪಿಸಿಸಿ ಸದಸ್ಯ ಎಮ್.ಎ.ಗಫೂರ್, ತಾಪಂ ಸದಸ್ಯರಾದ ಎಸ್. ರಾಜು ಪೂಜಾರಿ, ಕೆ. ರಮೇಶ ಗಾಣಿಗ, ಸಾವಿತ್ರಿ ಅಳ್ವೆಗದ್ದೆ, ಶಿರೂರು ಗ್ರಾಪಂ ಅಧ್ಯಕ್ಷೆ ದಿಲ್‌ಶಾದ್ ಬೇಗಂ, ಉಪಾಧ್ಯಕ್ಷ ನಾಗೇಶ ಮೊಗೇರ ಅಳ್ವೆಗದ್ದೆ, ಮಾಜಿ ಅಧ್ಯಕ್ಷ ರಾಮ ಮೇಸ್ತ, ಸದಸ್ಯರಾದ ರಘುರಾಮ ಪೂಜಾರಿ, ಸಿದ್ದಿಕ್ ಮುಂತಾದವರು ಹಾಜರಿದ್ದರು.

Exit mobile version