Site icon Kundapra.com ಕುಂದಾಪ್ರ ಡಾಟ್ ಕಾಂ

ಬಾಯಿಯ ಆರೋಗ್ಯದಿಂದ ದೇಹದ ಆರೋಗ್ಯ ಸುಧೃಡ : ದಿನಕರ ಪಟೇಲ್

ಗಂಗೊಳ್ಳಿ: ಬಾಯಿಯ ಆರೋಗ್ಯ ಸ್ವಸ್ಥವಾಗಿದ್ದರೆ ದೇಹದ ಆರೋಗ್ಯವು ಸುಧೃಡವಾಗಿರುತ್ತದೆ. ಆದುದರಿಂದ ಹಲ್ಲು ವಸಡುಗಳ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಬೇಕಿದೆ. ಆರೋಗ್ಯದ ಬಗ್ಗೆ ಮುತುವರ್ಜಿವಹಿಸುವ ಪ್ರತಿಯೊಬ್ಬರು ಬಾಯಿ, ದಂತ, ವಸಡುಗಳ ಬಗ್ಗೆ ಹೆಚ್ಚಿನ ಗಮನ ಕೊಟ್ಟಾಗ ಬಾಯಿಯಿಂದ ಹರಡುವ ರೋಗರುಜಿನಗಳಿಂದ ಮುಕ್ತಿ ಪಡೆದುಕೊಳ್ಳ ಬಹುದು ಇಂತಹ ದಂತ ಚಿಕಿತ್ಸೆ ಶಿಬಿರದ ಸದುಪಯೋಗವನ್ನು ಪಡಿಸಿಕೊಂಡು ಉತ್ತಮ ಆರೋಗ್ಯಪೂರ್ಣ ಜೀವನವನ್ನು ಹೊಂದಿರಿ ಎಂದು ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಅಧ್ಯಕ್ಷ ದಿನಕರ ಪಟೇಲ್ ಹೇಳಿದರು.

ಅವರು  ಗಂಗೊಳ್ಳಿಯ ಶ್ರೀ ಜಟ್ಟಿಗೇಶ್ವರ ಯೂತ್ ಕ್ಲಬ್, ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ದಂತ ವಿಜ್ಞಾನ ವಿಶ್ವವಿದ್ಯಾನಿಲಯ ಮಣಿಪಾಲದ ಸಹಯೋಗದೊಂದಿಗೆ ನುರಿತ ವೈದ್ಯರಿಂದ ಗಂಗೊಳ್ಳಿಯ ಶ್ರೀ ವಿಜಯ ವಿಠಲ ಮಂಟಪದಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಮಾತನಾಡಿ ರೋಟರಿ ಕ್ಲಬ್ ಹತ್ತು ಹಲವು ಸಾಮಾಜಿಕ ಚಟುವಟಿಕೆಗಳನ್ನು ಆಯೋಜಿಸಿಕೊಂಡು ಬರುತ್ತಿದ್ದು ಸಾರ್ವಜನಿಕ ಸಹಕಾರ ಭಾಗವಹಿಸುವಿಕೆಯಿಂದ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯವಾಗಿದೆ ಎಂದರು.

ಮಣಿಪಾಲ ದಂತ ವಿಜ್ಞಾನ ವಿಶ್ವವಿದ್ಯಾನಿಲಯದ ಡಾ. ಕಲ್ಯಾಣ್, ಗಂಗೊಳ್ಳಿಯ ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್‌ನ ಕಾರ್ಯದರ್ಶಿ ನಾಗರಾಜ ಖಾರ್ವಿ, ರೋಟರಿ ಕ್ಲಬ್ ಕುಂದಾಪುರದ ಕಾರ್ಯದರ್ಶಿ ಸಂತೋಷ ಕೋಣಿ ಉಪಸ್ಥಿತರಿದ್ದರು. ಶ್ರೀ ಜಟ್ಟಿಗೇಶ್ವರ ಯೂತ್ ಕ್ಲಬ್‌ನ ಅಧ್ಯಕ್ಷ ನಾಗರಾಜ ಖಾರ್ವಿ ಸ್ವಾಗತಿಸಿದರು. ಸುಂದರ ಕಾರ್ಯಕ್ರಮ ನಿರ್ವಹಿಸಿ, ಕೇಶವ ಖಾರ್ವಿ ವಂದಿಸಿದರು.

Exit mobile version