Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರಿನಲ್ಲಿ ಹಲಸು ಹಾಗೂ ಕೃಷಿ ಮೇಳಕ್ಕೆ ಚಾಲನೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಆಧುನಿಕ ಕೃಷಿ ಪದ್ದತಿಯ ಅಳವಡಿಕೆಯಿಂದ ಕೃಷಿಯನ್ನು ಲಾಭದಾಯಕವಾಗಿ ಬೆಳೆಸಬಹುವುದಾಗಿದೆ. ಕಾಲದ ಬದಲಾವಣೆಗೆ ಒಗ್ಗಿಕೊಂಡಂತೆ ಕೃಷಿ ಕ್ಷೇತ್ರದಲ್ಲಾಗುವ ಬದಲಾವಣೆಗಳು ರೈತರಿಗೆ ಲಾಭವನ್ನು ಹೆಚ್ಚಿಸುತ್ತದೆ ಎಂದು ಉದ್ಯಮಿ ಜಿ. ಗೋಕುಲ್‌ ಶೆಟ್ಟಿ ಉಪ್ಪುಂದ ಹೇಳಿದರು.

ಅವರು ಯಡ್ತರೆ ಬಂಟರಯಾನೆ ನಾಡವರ ಸಂಕೀರ್ಣದಲ್ಲಿ ಉತ್ಸವ ಸಮಿತಿ ಬೈಂದೂರು, ಸಮಷ್ಠಿ ಪ್ರತಿಷ್ಠಾನ, ರೈತೋತ್ಧಾನ ಬಳಗ ಹಾಗೂ ರೋಟರಿ ಕ್ಲಬ್ ಬೈಂದೂರು ಇವರ ಸಹಯೋಗದಲ್ಲಿ ಶುಕ್ರವಾರ ಆರಂಭಗೊಂಡು ಮೂರು ದಿನಗಳ ಕಾಲ ನಡೆಯುವ ಹಲಸು ಹಾಗೂ ಕೃಷಿ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ರೈತರು ಬೆಳೆದ ಬೆಳೆಗಳು ನೇರವಾಗಿ ಗ್ರಾಹಕರಿಗೆ ದೊರೆತಾಗ ಕೃಷಿ ಕ್ಷೇತ್ರ ಇನ್ನಷ್ಟು ಯಶಸ್ವಿಯಾಗಿ ಮುನ್ನೆಡೆಯುತ್ತದೆ. ಇಂತಹ ಮೇಳಗಳ ಮುಖಾಂತರ ಗ್ರಾಮೀಣ ಭಾಗದ ರೈತರಿಗೆ ಹೊಸ ವಿಧಾನಗಳ ಪರಿಚಯವಾಗುತ್ತದೆ. ಈ ಮೇಳವು ಮೂರು ದಿನಗಳ ವರೆಗೆ ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಸಮೃದ್ದ ಜನಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಿ. ಎಸ್. ಸುರೇಶ ಶೆಟ್ಟಿ, ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಉದ್ಯಮಿ ಜಯಾನಂದ ಹೋಬಳಿದಾರ್, ಶಾಸಕರ ಧರ್ಮಪತ್ನಿ ಅನುರಾಧಾ ಗಂಟಿಹೊಳೆ, ಹಿರಿಯ ಕೃಷಿಕ ಹೊಸ್ಕೋಟೆ ವೆಂಕಟೇಶ ಹೆಬ್ಬಾರ್, ಜಿಪಂ ಮಾಜಿ ಸದಸ್ಯೆ ಗೌರಿ ದೇವಾಡಿಗ, ಬೈಂದೂರು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ ಸಾಲ್ಗದ್ದೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಭಜನಾ ಪರಿಷತ್ ಅಧ್ಯಕ್ಷ ರಘುರಾಮ ಕೆ. ಪೂಜಾರಿ, ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷೆ ಅನಿತಾ ಆರ್. ಕೆ., ಉತ್ಸವ ಸಮಿತಿ ಸಹಸಂಚಾಲಕ ಶ್ರೀಗಣೇಶ ಉಪ್ಪುಂದ, ಸಂದೇಶ ಭಟ್ ಉಪ್ಪುಂದ ಇದ್ದರು. ಹಲಸು ಮೇಳದ ಸಂಯೋಜಕ ಪ್ರದೀಪ ಕುಮಾರ್ ಶೆಟ್ಟಿ ಕಾರಿಕಟ್ಟೆ ಸ್ವಾಗತಿಸಿದರು. ಸಂಯೋಜಕ ಶ್ರೀಧರ ಖಾರ್ವಿ ಮರವಂತೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ದೇಶದಲ್ಲಿ ಜನಸಂಖ್ಯೆ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಹಾರ ಭದ್ರತೆ ನೀಡಲು ಸಾಗುವಳಿ ಜಮೀನಿನಲ್ಲಿ ಗರಿಷ್ಟ ಕೃಷಿ ಆಹಾರ ಉತ್ಪಾದನೆಯ ಅಗತ್ಯವಿದೆ. ರೈತರು ಕೇವಲ ಒಂದೇ ಬೆಳೆಯನ್ನು ನಂಬಿಕೊಳ್ಳದೇ ಸಮಗ್ರ ಕೃಷಿಗೆ ಪೂರಕವಾದ ಉಪಕಸಬುಗಳನ್ನು ಅಳವಡಿಸಿಕೊಳ್ಳುವ ಅನಿವಾರ್ಯತೆಯಿದೆ. ರೈತರಿಗೆ ಉತ್ತಮ ಮಾರುಕಟ್ಟೆ, ದರ, ಶೀತಲೀಕರಣ ಸಹಿತವಾದ ಪೂರಕ ವ್ಯವಸ್ಥೆ ಕೃಷಿ ಉತ್ಪಾದನೆಗೆ ದೊರೆಯಬೇಕು.- ಹಿರಿಯ ಕೃಷಿಕರಾದ ಹೊಸ್ಕೋಟೆ ವೆಂಕಟೇಶ ಹೆಬ್ಬಾರ್

Exit mobile version