ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದಿಂದ ಸಿಎ ದಿನಾಚರಣೆಯ ಸಂದರ್ಭ ಒತ್ತಡ ನಿರ್ವಹಣೆಯ ಕುರಿತಾಗಿ ವಿಭಿನ್ನ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.
ಉಡುಪಿಯ ಆರ್ಟ್ ಆಫ್ ಲಿವಿಂಗ್ನ ಯೋಗ ಮತ್ತು ಪ್ರಾಣಾಯಾಮ ತರಬೇತುದಾರರಾದ ಶೈಲಜಾ ಕೃಷ್ಣಾನಂದ, ಒತ್ತಡ ನಿರ್ವಹಣೆ ಹಾಗೂ ಏಕಾಗೃತೆಯ ಸಾಧನೆಯನ್ನು ಆಸನ ಹಾಗೂ ಪ್ರಾಣಾಯಾಮದ ಮೂಲಕ ಹೇಗೆ ಸಿದ್ಧಿಸಿಕೊಳ್ಳುವುದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಉಡುಪಿಯ ವೀ-ರೀಚ್ ಅಕಾಡೆಮಿಯ ಸ್ಥಾಪಕರಾದ ಸಿಎಸ್ ಸಂತೋಷ್ ಪ್ರಭು ಅವರು ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿ, ಸಿಎ ದಿನಾಚರಣೆಯ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ಇದೇ ಸಂದರ್ಭ ಸಿಎ/ಸಿಎಸ್ ಮತ್ತು ಸಿಎಮ್ಎ ಕೋರ್ಸ್ಗಳನ್ನು ಆಯ್ಕೆ ಮಾಡಿರುವ ವಿದ್ಯಾರ್ಥಿಗಳಿಗೆ ಅಧ್ಯಯನ ಕುರಿತು ಪ್ರೇರಣೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರೊಫೆಷನಲ್ ವಿದ್ಯಾರ್ಥಿಗಳ ಪೋಷಕರು ಸಹ ಭಾಗವಹಿಸಿದ್ದು ಕಾಲೇಜಿನ ಪ್ರಾಂಶುಪಾಲರಾದ ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ಪ್ರೊಫೆಷನಲ್ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾದ ಜೀವನ ಪದ್ಧತಿ ಇರಬೇಕು. ವಿದ್ಯಾರ್ಥಿಗಳ ಕುರಿತು ಪ್ರಾಣಾಯಾಮ, ಆಸನ ಮತ್ತು ಮುದ್ರೆಗಳ ಬಳಕೆ ಬಹಳ ಪರಿಣಾಮಕಾರಿ ಎಂದರು.
ಇದೇ ಸಂದರ್ಭದಲ್ಲಿ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಯೋಜಕತ್ವದಲ್ಲಿ ಡೈಲಿ ಕರೆಂಟ್ ಅಫೇರ್ಸ್ ಬುಲೆಟಿನ್ ಎನ್ನುವ ಪ್ರಚಲಿತ ವಿದ್ಯಾಮಾನಗಳ ಪತ್ರಿಕೆಯನ್ನು ಅನಾವರಣಗೊಳಿಸಲಾಯಿತು.
ಕಾಲೇಜಿನ ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ವೀಣಾ ಭಟ್, ಕಾರ್ಯಕ್ರಮ ಸಂಯೋಜಕರಾದ ಸುಹಾಸ್ ಜೆಟ್ಟಿಮನೆ, ಶ್ವೇತ ಭಂಡಾರಿ ಉಪಸ್ಥಿತರಿದ್ದರು.
ಕಾಲೇಜಿನ ದ್ವಿತೀಯ ಬಿ.ಕಾಂ. ವಿಭಾಗದ ವಿದ್ಯಾರ್ಥಿ ಕೌಶಲ್ ಆಚಾರ್ಯ ನಿರೂಪಿಸಿದರು.

