Kundapra.com ಕುಂದಾಪ್ರ ಡಾಟ್ ಕಾಂ

ಗಮ್ಮತ್ತ್‌ ಕಾರ್ಯಕ್ರಮದ ಪೋಸ್ಟರ್‌ ಅನಾವರಣ. ಅಗಸ್ಟ್‌ 03ಕ್ಕೆ ಬೈಂದೂರಿಲ್ಲಿ ಗಮ್ಮತ್ತ್

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಕುಂದಾಪ್ರ ಕನ್ನಡವೆಂಬುದು ಕನ್ನಡದ ವಿಶಿಷ್ಟ ಭಾಷಾ ಪ್ರಕಾರವಾಗಿದೆ. ಭಾಷೆಯ ಅಭಿಮಾನ ಎಲ್ಲಾ ಭಾವನೆಗಳನ್ನು ಮೀರಿ ಒಂದುಗೂಡಿಸುವಂತಿದ್ದರೆ ಅದು ವಿಶಿಷ್ಟವಾದ ಅನುಭೂತಿಯೇ ಸರಿ. ಕುಂದಾಪ್ರ ಕನ್ನಡ ಭಾಷೆ ಆಡುಭಾಷೆಯಾಗಿರುವುದರ ಜೊತೆಗೆ ದಾಖಲಿಕರಣ ಕಾರ್ಯವೂ ಹೆಚ್ಚೆಚ್ಚು ನಡೆಯಲಿ ಎಂದು ಹಿರಿಯ ಸಾಹಿತಿ ಉಪ್ಪುಂದ ಚಂದ್ರಶೇಖರ ಹೊಳ್ಳ ಹೇಳಿದರು.  

ಅವರು ಉಪ್ಪುಂದ ಶಂಕರ ಕಲಾಮಂದಿರದಲ್ಲಿ ಶನಿವಾರ ಜರುಗಿದ ಕಾರ್ಯಕ್ರಮದಲ್ಲಿ ಗಮ್ಮತ್ತ್‌ ಕಾರ್ಯಕ್ರಮದ ಪೋಸ್ಟರ್ ಅನಾವರಣಗೊಳಿಸಿ ಮಾತನಾಡಿದರು. ಕರಾವಳಿಯ ಜನರಿಗೆ ವಿಶ್ವದಾದ್ಯಂತ ಮಾನ್ಯತೆ ಇದೆ. ಎಲ್ಲರೊಂದಿಗೂ ಹೊಂದಿಕೊಂಡು ಬದುಕುವ ಹಾಗೂ ವಿಶೇಷವಾದುದನ್ನು ಸಾಧಿಸುವ ಗುಣ ಕರಾವಳಿಗರಿಗೆ ಮೈಗೂಡಿದೆ ಎಂದರು.

ಬೈಂದೂರಿನ ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಶರತ್‌ ಶೆಟ್ಟಿ ಉಪ್ಪುಂದ ಪ್ರಾಸ್ತಾವಿಕ ಮಾತನಾಡಿ, ಕಳೆದ ಭಾರಿಯಂತೆ ಈ ಭಾರಿಯೂ ಕುಂದಾಪ್ರ ಕನ್ನಡ ದಿನದ ಅಂಗವಾಗಿ ಗಮ್ಮತ್ತ್‌ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅಗಸ್ಟ್‌ 03ರ ಭಾನುವಾರ ಬೆಳಿಗ್ಗೆಯಿಂದ ಸಂಜೆಯ ತನಕ ಯಡ್ತರೆ ನೆಲ್ಯಾಡಿ ಬೈಲ್‌ ಹಾಗೂ ಜೆ.ಎನ್.ಆರ್‌ ಹಾಲ್‌ನಲ್ಲಿ ದಿನವಿಡಿ ಕಾರ್ಯಕ್ರಮಗಳು ಜರುಗಲಿದೆ. ಈ ಭಾರಿ ಇನ್ನಷ್ಟು ಕ್ರೀಡೆ, ಸಾಹಿತ್ತಿಕ ಕಾರ್ಯಕ್ರಮಗಳನ್ನು ಒಳಗೊಳ್ಳಲಾಗಿದೆ. ಕಾರ್ಯಕ್ರಮದ ಯಶಸ್ಸಿಗೆ ಎಲ್ಲರ ಸಹಕಾರ ಬೇಕಿದೆ ಎಂದರು.

ಈ ವೇಳೆ ಸಾಹಿತಿ ಉಪ್ಪುಂದ ಚಂದ್ರಶೇಖರ ಹೊಳ್ಳ ಅವರನ್ನು ಸಮಿತಿ ವತಿಯಿಂದ ಗೌರವಿಸಲಾಯಿತು. ಈ ವೇಳೆ ಉದ್ಯಮಿ ಎನ್.‌ ದಿವಾಕರ ಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್‌ ಬೈಂದೂರು ತಾಲೂಕು ಘಟಕ ಅಧ್ಯಕ್ಷ ಅರುಣ್‌ ಕುಮಾರ್‌ ಶಿರೂರು, ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನದ ಕಾರ್ಯದರ್ಶಿ ಸುನಿಲ್‌ ಬೈಂದೂರು ಉಪಸ್ಥಿತರಿದ್ದರು.

ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನದ ಸಂಚಾಲಕ ಸುಬ್ರಹ್ಮಣ್ಯ ಜಿ. ಉಪ್ಪುಂದ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Exit mobile version