ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರೋಟರಿ ಕ್ಲಬ್ ಒಂದು ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯಾಗಿದ್ದು, ವಿಶ್ವದಾದ್ಯಂತ ಸೇವೆ ಸಲ್ಲಿಸುತ್ತಿವೆ ಮತ್ತು ಸಮಾಜಕ್ಕೆ ಅಮೂಲ್ಯವಾದ ಕೊಡುಗೆಗಳನ್ನು ನೀಡುತ್ತಿವೆ. ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುವುದು ಹಾಗೂ ಸ್ಥಳೀಯ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುವುದು ಮತ್ತು ಜೀವನವನ್ನು ಸುಧಾರಿಸುವುದು ರೋಟರಿ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದು ರೋಟರಿ ಜಿಲ್ಲೆ 3182 ವಲಯ-9ರ ಮಾಜಿ ಅಸಿಸ್ಟೆಂಟ್ ಗವರ್ನರ್ ನವೀನ್ ಅಮೀನ್ ಶಂಕರಪುರ ಹೇಳಿದರು.
ಅವರು ಬಸ್ರೂರು ಆನಗಳ್ಳಿಯ ಆದಿತ್ಯ ಶೋರ್ ರೆಸಾರ್ಟ್ನಲ್ಲಿ ರೋಟರಿ ಕ್ಲಬ್ ಗಂಗೊಳ್ಳಿಯ 2025-26ನೇ ಸಾಲಿನ ಪದಾಧಿಕಾರಿಗಳ ಪದ ಪ್ರದಾನ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.

ರೋಟರಿ ಜಿಲ್ಲೆ 3182 ವಲಯ-1ರ ಅಸಿಸ್ಟೆಂಟ್ ಗವರ್ನರ್ ಐ. ನಾರಾಯಣ ಶುಭ ಹಾರೈಸಿದರು.
ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷೆ ಚಂದ್ರಕಲಾ ತಾಂಡೇಲ ಅವರು ನೂತನ ಅಧ್ಯಕ್ಷ ಕೃಷ್ಣ ಪೂಜಾರಿ ಅವರಿಗೆ ಹಾಗೂ ಕಾರ್ಯದರ್ಶಿ ಮಾಲಾಶ್ರೀ ಖಾರ್ವಿ ಅವರು ನೂತನ ಕಾರ್ಯದರ್ಶಿ ರಾಮನಾಥ ಚಿತ್ತಾಲ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ನೂತನ ಅಧ್ಯಕ್ಷ ಕೃಷ್ಣ ಪೂಜಾರಿ ಅವರು ಗಂಗೊಳ್ಳಿ ರೋಟರಿಯ 2025-26ನೇ ಸಾಲಿನ ಪದಾಧಿಕಾರಿಗಳನ್ನು ಪರಿಚಯಿಸಿದರು.
ಇದೇ ಸಂದರ್ಭ ಎಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸ.ವಿ. ಪದವಿಪೂರ್ವ ಕಾಲೇಜಿನ ಮಧ್ಯಾಹ್ನದೂಟ ಯೋಜನೆಗೆ ಹಾಗೂ ರಥಬೀದಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಾಹನ ವ್ಯವಸ್ಥೆಗೆ ಸಹಾಯಧನ ನೀಡಲಾಯಿತು.
ಅಧ್ಯಕ್ಷೆ ಚಂದ್ರಕಲಾ ಎಸ್.ತಾಂಡೇಲ್ ಸ್ವಾಗತಿಸಿದರು. ಕಾರ್ಯದರ್ಶಿ ಮಾಲಾಶ್ರೀ ಖಾರ್ವಿ ವರದಿ ವಾಚಿಸಿದರು. ಸದಸ್ಯರಾದ ಉಮೇಶ ಮೇಸ್ತ ಮತ್ತು ಸುಗುಣ ಆರ್.ಕೆ. ಅತಿಥಿಗಳನ್ನು ಪರಿಚಯಿಸಿದರು. ಕೆ.ರಾಮನಾಥ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ರಾಮನಾಥ ಚಿತ್ತಾಲ್ ವಂದಿಸಿದರು.