Kundapra.com ಕುಂದಾಪ್ರ ಡಾಟ್ ಕಾಂ

ಮದರ್ ತೆರೆಸಾ ಮೆಮೋರಿಯಲ್ ಶಿಕ್ಷಣ ಸಂಸ್ಥೆಯಲ್ಲಿ ಚೆಸ್ ಚಾಂಪಿಯನ್‌ಶಿಪ್ ಸ್ಪರ್ಧೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ವಿಶ್ವ ಚೆಸ್ ದಿನದ ಪ್ರಯುಕ್ತ ಮದರ್ ತೆರೆಸಾ ಮೆಮೋರಿಯಲ್ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ಚೆಸ್ ಚಾಂಪಿಯನ್‌ಶಿಪ್ ಸ್ಪರ್ಧೆ ನಡೆಯಿತು.

6ರಿಂದ ಹನ್ನೆರಡನೇ ತರಗತಿಯ ವಿದ್ಯಾರ್ಥಿಗಳಿಗೆ ಶ್ರೀ ನಾರಾಯಣಗುರು ಸ್ಕೂಲ್ ಆಫ್ ಚೆಸ್ ಕಾಪು ಸಹಯೋಗದೊಂದಿಗೆ  ಅದ್ದೂರಿಯಾಗಿ ನಡೆಸಲಾಯಿತು.

ಕಾರ್ಯಕ್ರಮವನ್ನು ಶಾಲೆಯ ಆಡಳಿತ ಮಂಡಳಿಯವರು, ಅತಿಥಿಗಳು ಹಾಗೂ ಚೆಸ್ ಚಾಂಪಿಯನ್‌ಶಿಪ್ ಉಸ್ತುವಾರಿ ಹೊತ್ತ ಸತೀಶ್ ದೈಹಿಕ ಶಿಕ್ಷಣ ಶಿಕ್ಷಕರು ಚದುರಂಗದ ಕಾಯಿಗಳನ್ನ ನಡೆಸುವ ಮೂಲಕ ಉದ್ಘಾಟಿಸಿದರು. ಈ ವಿಶಿಷ್ಟ ಉದ್ಘಾಟನೆಯು ಕಾರ್ಯಕ್ರಮಕ್ಕೆ ವಿಶಿಷ್ಟ ಮೆರುಗು ನೀಡಿತು. ಕಾರ್ಯಕ್ರಮವನ್ನು ನಡೆಸಿಕೊಡಲು ನಾರಾಯಣ ಗುರು ಚೆಸ್ ಸ್ಕೂಲ್‌ನ ಸಾಕ್ಷಾತ್ ಮತ್ತು ರಾಹುಲ್  ಆಗಮಿಸಿದ್ದರು‌.

ಶ್ರೀ ನಾರಾಯಣ ಗುರು ಸ್ಕೂಲ್ ನ ತರಬೇತುದಾರರಾಗಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಮೂಲಕ ಸ್ಪರ್ಧಿಗಳನ್ನು ರಾಜ್ಯ   ಅಂತರ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಟೂರ್ನಮೆಂಟ್ ಗಳಲ್ಲಿ  ವಿಜೇತರನ್ನಾಗಿಸಿದ  ಉತ್ತಮ ಚೆಸ್ ತರಬೇತುದಾರರಾದ ಶ್ರೀಯುತ ಸಾಕ್ಷಾತ್ ಇವರು ಸ್ಪರ್ಧೆಯ ನಿಯಮಗಳನ್ನು ವಿವರಿಸಿದರು. ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ತೀವ್ರ ಚಿಂತನೆ ತಾಳ್ಮೆ ಮತ್ತು ಕೌಶಲ್ಯದ ಮೂಲಕ ವಿಜೇತರಾಗಬಹುದು ಎಂಬ ಕಿವಿ ಮಾತನ್ನು ಹೇಳುತ್ತಾ ವಿದ್ಯಾರ್ಥಿಗಳಲ್ಲಿ ಉತ್ಸಾಹ ತುಂಬಿದರು.

ಸ್ಪರ್ಧೆಯು ವಿದ್ಯಾರ್ಥಿಗಳಲ್ಲಿ ತೀಕ್ಷ್ಣ ಮನೋವಿಕಾಸ, ತಾರ್ಕಿಕ ಚಿಂತನೆ ಹಾಗೂ ಕೌಶಲ್ಯಗಳನ್ನು ಹೆಚ್ಚಿಸುವ ಉದ್ದೇಶದಿಂದ ರೂಪಗೊಂಡಿದ್ದು ವಿವಿಧ ವಯೋಮಾನದ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಉತ್ಸುಕತೆಯಿಂದ ಭಾಗವಹಿಸಿದರು. 

ಆಡಳಿತ ನಿರ್ದೇಶಕರಾದ ಶಮಿತಾ ರಾವ್  ಅವರು ಮಾತನಾಎಇ, “ಕ್ರೀಡಾ ಸ್ಪೂರ್ತಿಯಿಂದ ಆಡಬೇಕು ಮತ್ತು ಆಟದಲ್ಲಿ ಯಾವುದೇ ನಕಾರಾತ್ಮಕತೆ ಇರಬಾರದು” ಎಂದು ಶುಭ ಹಾರೈಸಿದರು.

ತರಗತಿವಾರು ಚೆಸ್ ಚಾಂಪಿಯನ್ ಶಿಪ್ ನಲ್ಲಿ  6ನೇ ತರಗತಿಯ ಸಾನ್ವಿತ.ಎಸ್. ಶೆಟ್ಟಿ ಪ್ರಥಮ , ಪವನ್ ಉಡುಪ ದ್ವಿತೀಯ, ಸುಕ್ರಿ ಮೊಹಮ್ಮದ್ ಮೆಹರನ್ ತೃತೀಯ. ಏಳನೇ ತರಗತಿಯ ಸಾಕ್ಷಿತ್ ಶೆಟ್ಟಿ ಪ್ರಥಮ, ಸಿಂಧೂ ಮಧ್ಯಸ್ಥ ದ್ವಿತೀಯ,ವೈಷ್ಣವಿ ತೃತೀಯ, ಎಂಟನೇ ತರಗತಿಯ ಕಿಶನ್ ಶೆಟ್ಟಿ ಪ್ರಥಮ ಹೃತಿಕ್ ದ್ವಿತೀಯ,ಸುಶಾಂತ್ ಶೆಟ್ಟಿ ತೃತೀಯ. 9ನೇ ತರಗತಿಯ ಚರಿಷ್ಮಾ ಪ್ರಥಮ ವರ್ಷ. ಎ. ದ್ವಿತೀಯ ನಿಕಿತ್. ಪಿ. ತೃತೀಯ. ಹತ್ತನೇ ತರಗತಿಯ ಪ್ರೀತಮ್ ಪ್ರಥಮ, ನಿವೇದನ್ ದ್ವಿತೀಯ, ನಂದಶ್ರೀ ತೃತೀಯ ಸ್ಥಾನವನ್ನು ಪಡೆದುಕೊಂಡರು. ಪದವಿಪೂರ್ವ ವಿಭಾಗದಿಂದ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಗಗನ್ ಪ್ರಥಮ ಸ್ಥಾನ, ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಗಗನ ದ್ವಿತೀಯ ಸ್ಥಾನ ಪಡೆದರು.

ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯವರು ಮತ್ತು ದೈಹಿಕ ಶಿಕ್ಷಣ ಶಿಕ್ಷಕರು ಉಪಸ್ಥಿತರಿದ್ದರು. ಚೆಸ್ ಚಾಂಪಿನ ಕುರಿತು’ ಚೆಸ್ ಕ್ರೀಡೆ ಮಕ್ಕಳಲ್ಲಿ ಏಕಾಗ್ರತೆ ತಾಳ್ಮೆ ಮತ್ತು ತೀರ್ಮಾನ ಶಕ್ತಿಗಳನ್ನು ಬೆಳೆಸುತ್ತದೆ ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳ ಚಿಂತನ ಶಕ್ತಿಗೆ ಉತ್ತೇಜನ ನೀಡುತ್ತವೆ ‘ ಎಂದು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದ ಭಾಷಾ ಹಾಗೂ ಸಾಂಸ್ಕೃತಿ ನಿರ್ದೇಶಕಿಯಾದ ಅಲಿಟಾ ಡೇಸಾ  ಇವರ ಉತ್ತಮ ನಿರೂಪಣೆಯೊಂದಿಗೆ ಕಾರ್ಯಕ್ರಮವು ಯಶಸ್ವಿಯಾಯಿತು.

Exit mobile version