Kundapra.com ಕುಂದಾಪ್ರ ಡಾಟ್ ಕಾಂ

ಪತ್ರಿಕೋದ್ಯಮ ಪ್ರವೇಶಕ್ಕೆ ಪದವಿಯೊಂದೇ ಮಾನದಂಡವಲ್ಲ: ಪತ್ರಕರ್ತ ಜಾನ್ ಡಿಸೋಜಾ

ಕುಂದಾಪುರ: ಸಂವಿಧಾನದ ಮೂರು ಅಂಗಗಳು ಇಂದು ಪರಿಸ್ಥಿತಿಗೆ ಅನುಗುಣವಾಗಿ ರಾಜಿಯಾಗಿ ತನ್ನ ಮೌಲ್ಯ ಕಳೆದುಕೊಳ್ಳುತ್ತಿರುವ ದಿನಗಳಲ್ಲಿ ನಾಲ್ಕನೇ ಅಂಗವಾದ ಪತ್ರಿಕಾರಂಗ ತತ್ವಗಳಿಗೆ ಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕುಂದಾಪುರದ ಹಿರಿಯ ಪತ್ರಕರ್ತ ಜಾನ್ ಡಿಸೋಜಾ ಹೇಳಿದರು.

ಅವರು ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಮಹಾತ್ಮಾ ಗಾಂಧಿ ಸಭಾಭವನದಲ್ಲಿ ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಸಮಾಜ ವಿಜ್ಞಾನ ಸಂಘ ಮತ್ತು ಬ್ರಹ್ಮಾವರ ವಲಯ ಕಾರ್ಯನಿರತ ಪತ್ರಕರ್ತರ ಸಂಘ ಸಹಯೋಗದಲ್ಲಿ ಆಯೋಜಿಸಲಾದ ಪತ್ರಿಕೋದ್ಯಮ ಪ್ರವೇಶ ಏಕೆ ಮತ್ತು ಹೇಗೆ ಎನ್ನುವ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪತ್ರಿಕೆಗಳು ಇಂದು ಸೇವೆಯ ಚೌಕಟ್ಟನ್ನು ಮೀರಿ ಉದ್ಯಮವಾಗಿ ಬೆಳೆದು ನಿಂತಿದೆ. ಒಂದು ಪತ್ರಿಕೆ ಅಥವಾ ದೃಶ್ಯ ಮಾಧ್ಯಮ ಪ್ರಾರಂಭವಾದರೆ ಅಲ್ಲಿ ಸಾಕಷ್ಟು ಉದ್ಯೋಗವಕಾಶಗಳ ತೆರೆದುಕೊಳ್ಳತ್ತದೆ, ಪತ್ರಿಕೋದ್ಯಮ ಪ್ರವೇಶಕ್ಕೆ ಪತ್ರಿಕೋದ್ಯಮ ಕೋರ್ಸ್ ಮಾಡಬೇಕೆಂಬ ನಿಯಮವಿಲ್ಲ. ಆದರೆ ಇಂದು ಪತ್ರಿಕೋದ್ಯಮ ಪದವಿ ಅಥವಾ ಕೋರ್ಸ್‌ಗಳ ಮಾಡಿಯೂ ಅಲ್ಲಿ ಉದ್ಯೋಗವನ್ನು ಸುಲಭವಾಗಿ ಗಿಟ್ಟಿಸಬಹುದು. ಬರೆಯುವ, ಪ್ರಶ್ನಿಸುವ ಮನೋಭಾವ ಮತ್ತು ಸಾಮಾಜಿಕ ಕಳಕಳಿ ಇದ್ದಲ್ಲಿ ಇಲ್ಲಿ ಸದಾ ಅವಕಾಶವಿದೆ. ಪತ್ರಿಕೋದ್ಯಮ ಎಂದರೆ ಖಾಲಿ ವರದಿ ಮಾಡುವುದು ಮಾತ್ರವಲ್ಲ. ನಾವು ಮಾಡುವ ಯಾವುದೇ ಕೆಲಸವಾದರು ಅದರಲ್ಲಿ ಶ್ರದ್ಧೆ ಮತ್ತು ನಿಷ್ಠೆಯಿಂದ ತೊಡಗಿಸಿಕೊಂಡಲ್ಲಿ ಅಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.

ಬ್ರಹ್ಮಾವರ ವಲಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಭಾಕರ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಕಾರ್ಯಕ್ರಮದಲ್ಲಿ ಬ್ರಹ್ಮಾವರ ವಲಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಅಶ್ವಥ್ ಆಚಾರ್ಯ ಯಡಬೆಟ್ಟು ಮತ್ತು ವಿವೇಕ ಪದವಿ ಪೂರ್ವ ಕಾಲೇಜಿನ ಸಮಾಜ ವಿಜ್ಞಾನ ಸಂಘದ ಅಧ್ಯಕ್ಷ ಶಮಂತ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವೇಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನಾಗೇಶ್ ಶ್ಯಾನುಭಾಗ್ ಸ್ವಾಗತಿಸಿದರು. ನಾಗೇಂದ್ರ ಹೇರ್ಳೆ ಕಾರ್ಯಕ್ರಮ ನಿರೂಪಿಸಿ, ದಿನಕರ ಸಹಕರಿಸಿದರು. ವಿವೇಕ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ವೆಂಕಟೇಶ್ ಉಡುಪ ವಂದಿಸಿದರು.

Exit mobile version