Kundapra.com ಕುಂದಾಪ್ರ ಡಾಟ್ ಕಾಂ

ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮಹಾಸಭೆ, ಶೇ.13 ಡೆವಿಡೆಂಡ್ ಘೋಷಣೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
 ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಕಳೆದ ಸಾಲಿನಲ್ಲಿ ಸುಮಾರು 225 ಕೋಟಿ ರೂ. ಅಧಿಕ ವ್ಯವಹಾರ ನಡೆಸಿ, 79.17 ಲಕ್ಷ ರೂ. ನಿವ್ವಳ ಲಾಭಗಳಿಸಿದ್ದು, ಸಂಘದ ಸದಸ್ಯರಿಗೆ ಶೇ.13 ಡೆವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು.

ಅವರು ಸಂಘದ ಪ್ರಧಾನ ಕಚೇರಿ ಆವರಣದಲ್ಲಿ ಭಾನುವಾರ ನಡೆದ 2024-25ನೇ ಸಾಲಿನ ಸಂಘದ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾನ ಮನಸ್ಕರು ಸೇರಿ ಸ್ಥಾಪಿಸಿದ ಈ ಸಂಸ್ಥೆ ಜಿಲ್ಲೆಯಲ್ಲಿ ಜನಸಾಮಾನ್ಯರ ಸಂಸ್ಥೆಯಾಗಿ ಹೆಸರು ಗಳಿಸಿದೆ. ಗ್ರಾಹಕರು ಸಂಘದ ಆಸ್ತಿ. ಅವರಿಗೆ ಉತ್ತಮ ಸೇವೆ ನೀಡುವುದು ನಮ್ಮ ಕರ್ತವ್ಯ. ಆ ನಿಟ್ಟಿನಲ್ಲಿ ನಮ್ಮ ಸಂಘವು ಕಾರ್ಯನಿರ್ವಹಿಸುತ್ತಿದೆ. ಸದಸ್ಯರ ಸಹಕಾರದಿಂದಲೇ ನಮ್ಮ ಸಂಘ ಮುನ್ನೆಡೆದಿದೆ ಸಮಾಜದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ದಿ ಹಾಗೂ ಮಹಿಳಾ ಸಬಲೀಕರಣಕ್ಕೆ ಸಹಕಾರಿಯಾಗಿದೆ.

ಬೈಂದೂರಿನಲ್ಲಿ ಕಳೆದ 16 ವರ್ಷದ ಹಿಂದೆ ಹುಟ್ಟಿಕೊಂಡ ನಮ್ಮ ಸಂಘವು ಬೈಂದೂರಿನ ಕೇಂದ್ರ ಸ್ಥಾನದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು, ನಾಗೂರು, ಗೋಳಿಹೊಳೆ, ನಾವುಂದ, ಕಂಬದಕೋಣೆಗಳಲ್ಲಿ ಶಾಖೆಯನ್ನು ತೆರೆಯಲಾಗಿದೆ. ವರ್ಷಾಂತ್ಯಕ್ಕೆ ಸುಮಾರು 43 ಕೋಟಿ ರೂಪಾಯಿ ಠೇವಣೆ ಹೊಂದಿದ್ದು, ಒಟ್ಟು 225 ಕೋಟಿಗೂ ಅಧಿಕ ವಾರ್ಷಿಕ ವ್ಯವಹಾರ ಹೊಂದಿದೆ ಎಂದರು.

ಶೇ.100 ಸಾಲ ವಸೂಲಾತಿ ಮಾಡಿದ ಶಾಖಾ ವ್ಯವಸ್ಥಾಪಕರನ್ನು ಗೌರವಿಸಲಾಯಿತು. ಸಂಘದ ಉಪಾಧ್ಯಕ್ಷ ಎಂ. ವಿನಾಯಕ ರಾವ್, ನಿರ್ದೇಶಕರಾದ ಸೀತಾರಾಮ ಮಡಿವಾಳ, ಅಣ್ಣಪ್ಪ ಪೂಜಾರಿ, ರಾಮಕೃಷ್ಣ ಖಾರ್ವಿ, ಮಂಜು ಪೂಜಾರಿ, ಮಂಜುನಾಥ ಪೂಜಾರಿ, ಪ್ರಶಾಂತ,, ಉದ್ಯಾವರ ಎಸ್‌ಡಿಎಂ ಆಯುರ್ವೇದ ಮಹಾವಿದ್ಯಾಲಯದ ಅಧೀಕ್ಷಕ ಡಾ. ನಾಗರಾಜ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಸಂಘದ ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿ ಕಿಟ್ಟಣ್ಣ ರೈ ವಾರ್ಷಿಕ ವರದಿ ಮಂಡಿಸಿ, ಕಾರ್ಯಕ್ರಮ ನಿರೂಪಿಸಿದರು. ನಾವುಂದ ಶಾಖಾ ಪ್ರಬಂಧಕ ಶ್ರೀನಿವಾಸ ಸ್ವಾಗತಿಸಿ, ಕಂಬದಕೋಣೆ ಶಾಖಾ ವ್ಯವಸ್ಥಾಪಕ ರಾಜೇಂದ್ರ ವಂದಿಸಿದರು. ಸಂತೋಷ್ ಸಹಕರಿಸಿದರು.

Exit mobile version