Kundapra.com ಕುಂದಾಪ್ರ ಡಾಟ್ ಕಾಂ

ಶಿಕ್ಷಕರು ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಿದರೆ ಸಧೃಡ ದೇಶ ನಿರ್ಮಾಣ ಸಾಧ್ಯ: ರಾಜು ಪೂಜಾರಿ

ಬೈಂದೂರು: ಸಮಾಜದಲ್ಲಿ ಇತ್ತೀಚಿಗೆ ಯುವಜನರು ಅದರಲ್ಲಿಯೂ ಪದವೀಧರರು ಸಂಗದೋಷದಿಂದ ತಪ್ಪುದಾರಿಯಲ್ಲಿ ಸಾಗಿ ಅಪರಾಧ ಕೃತ್ಯಗಳನ್ನು ಎಸಗುತ್ತಿರುವುದು ಆಘಾತಕಾರಿಯಾಗಿದೆ. ಭವಿಷ್ಯದ ಸಮಾಜಕ್ಕೆ ಆಸ್ತಿಯಾಗಿರುವ ಇಂದಿನ ವಿದ್ಯಾರ್ಥಿಗಳಿಗೆ ತಮ್ಮ ಕರ್ತವ್ಯ ಹಾಗೂ ಜವಾಬ್ದಾರಿಗಳ ಬಗ್ಗೆ ಸರಿಯಾದ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಶಿಕ್ಷಕರು ಶ್ರಮಿಸಬೇಕು ಎಂದು ತಾಪಂ ಸದಸ್ಯ, ಕಾಲೇಜಿನ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು.

ಬೈಂದೂರು ಪದವಿಪೂರ್ವ ಕಾಲೇಜಿನ ಪ್ರಸಕ್ತ ಸಾಲಿನ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಕೆಲವು ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳ ವ್ಯವಸ್ಥೆಗಳು ಎತ್ತಲೋ ಸಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದರಿಂದ ದೇಶಕ್ಕೆ ಅಭಿವೃದ್ದಿಗೆ ಪೂರಕವಾದ ಕೊಡುಗೆ ನೀಡಿದಂತಾಗುತ್ತದೆ. ಜ್ಞಾನ ಭಂಡಾರವಾಗಿರುವ ಶಿಕ್ಷಕರು ತಮ್ಮ ಜವಾಬ್ದಾರಿ ಅರಿತು ಕೆಲಸ ನಿರ್ವಹಿಸಿದರೆ ಸಧೃಡ ದೇಶ ನಿರ್ಮಾಣ ಹಾಗೂ ಸಮಾಜಕ್ಕೆ ಉತ್ತಮ ಸಾಧಕರನ್ನು ಕೊಡುಗೆಯಗಿ ನೀಡಬಹುದು. ಗ್ರಾಮೀಣ ಭಾಗದಲ್ಲಿರುವ ಮಕ್ಕಳು ಬೇರೆ ಬೇರೆ ತಂತ್ರಜ್ಞಾನದ ಮೂಲಕ ವೈಜ್ಞಾನಿಕವಾಗಿಯೂ ಮುಂದಿದ್ದು, ಅಂತಹ ವಿದ್ಯಾರ್ಥಿಗಳಲ್ಲಿ ಒಳ್ಳೆಯ ಚಿಂತನೆಗಳನ್ನು ತುಂಬಿ ಅವರನ್ನು ಮಾನಸಿಕವಾಗಿ ಗಟ್ಟಿಗೊಳಿಸಿ ತರಬೇತಿ ನೀಡಿ ಪ್ರೋತ್ಸಾಹಿಸಬೇಕು ಎಂದರು.

ಯಡ್ತರೆ ಗ್ರಾಪಂ ಅಧ್ಯಕ್ಷ ಎನ್. ನಾಗರಾಜ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಶೈಕ್ಷಣಿವಾಗಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನಗದು ಸಹಿತ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮುರ್ಡೇಶ್ವರ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನ ವಿಭಾಗ ಮುಖ್ಯಸ್ಥ ಪು. ನಾ. ಬೈಂದೂರು ’ಸ್ಪೂರ್ತಿ’ ಹಸ್ತಪತ್ರಿಕೆ ಬಿಡುಗಡೆಗೊಳಿಸಿದರು.

ಕಾಲೇಜು ಪ್ರಾಚಾರ್ಯ ಪಾಲಾಕ್ಷ ಟಿ ವರದಿ ವಾಚಿಸಿದರು. ಉಪಪ್ರಾಂಶುಪಾಲೆ ಜ್ಯೋತಿ ಶ್ರೀನಿವಾಸ್, ವಿದ್ಯಾರ್ಥಿ ನಾಯಕ ರಾಜೇಶ್ ಬಿ, ನಾಯಕಿ ರಮ್ಯಶ್ರೀ ಉಪಸ್ಥಿತರಿದ್ದರು. ಉಪನ್ಯಾಸಕರಾದ ಗುರುಮೂರ್ತಿ ತಾಮ್ರಗೌರಿ ಸ್ವಾಗತಿಸಿ, ಜಯ ಪೂಜಾರಿ ವಂದಿಸಿದರು. ರಾಮನಾಥ ನಾಯ್ಕ್ ನಿರೂಪಿಸಿದರು.

[quote bgcolor=”#ffffff” arrow=”yes”]ವಿದ್ಯಾರ್ಥಿಗಳು ಕೇವಲ ಶಿಕ್ಷಣದಲ್ಲಿ ಪಾಸಾದರೆಷ್ಟೆ ಸಾಲದು, ಜೀವದಲ್ಲಿಯೂ ಕೂಡಾ ಪಾಸಾಗಬೇಕು. ಉತ್ತಮ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ತಮ್ಮ ಬದುಕನ್ನು ತಾವೇ ರೂಪಿಸಿಕೊಳ್ಳುವುದರ ಮೂಲಕ ದೇಶ ಹಾಗೂ ಸಮಾಜದ ಆಸ್ತಿಯಾಗಬೇಕು.- ಎಸ್. ರಾಜು ಪೂಜಾರಿ, ತಾಪಂ ಸದಸ್ಯರು.[/quote]

Exit mobile version