Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ಕೆನರಾ ಬ್ಯಾಂಕ್ ಶಾಖೆ ವತಿಯಿಂದ ಅರ್ಹ ಮೀನುಗಾರ ಫಲಾನುಭವಿಗಳಿಗೆ ಸಾಲ ವಿತರಣೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಗಂಗೊಳ್ಳಿ:
ಮೀನುಗಾರರಿಗೆ ಮೋಟಾರ್, ಬಲೆ, ಮತ್ತಿತರ ಸಲಕರಣೆಗಳನ್ನು ಖರೀದಿಸಲು ಸರಕಾರ ವಿವಿಧ ಯೋಜನೆಯಡಿ ಕೆನರಾ ಬ್ಯಾಂಕ್ ಮೂಲಕ ಸಾಲ ಸೌಲಭ್ಯ ವಿತರಿಸಲಾಗುತ್ತಿದೆ. ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಶೂನ್ಯ ಬಡ್ಡಿ ದರದಲ್ಲಿ 50 ಸಾವಿರದಿಂದ ಸಾಲ ಸೌಲಭ್ಯ ನೀಡಲಾಗುತ್ತದೆ. ಸ್ವಸಹಾಯ ಸಂಘಗಳ ಮೂಲಕ ಸ್ತ್ರೀಶಕ್ತಿ ಯೋಜನೆಯಡಿ ಸ್ವ ಉದ್ಯೋಗ ನಡೆಸಲು ಆರ್ಥಿಕ ಸಹಾಯವನ್ನು ಬ್ಯಾಂಕ್ ಮೂಲಕ ಒದಗಿಸಲಾಗುತ್ತದೆ ಎಂದು ಕೆನರಾ ಬ್ಯಾಂಕಿನ ಉಡುಪಿ ವೃತ್ತ ಕಚೇರಿಯ ಎಜಿಎಂ ಟಿ.ಎ.ಎಸ್. ಪೂರ್ಣಾನಂದ ಹೇಳಿದರು.

ಅವರು ಗಂಗೊಳ್ಳಿ ಕೆನರಾ ಬ್ಯಾಂಕ್ ಶಾಖೆ ವತಿಯಿಂದ ಗಂಗೊಳ್ಳಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಗುರುವಾರ ನಡೆದ ಮೀನುಗಾರರಿಗೆ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ಮತ್ತು ಅರ್ಹ ಮೀನುಗಾರ ಫಲಾನುಭವಿಗಳಿಗೆ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅರ್ಹ ಮೀನುಗಾರ ಫಲಾನುಭವಿಗಳಿಗೆ ಸಾಲ ವಿತರಿಸಿ ಮಾತನಾಡಿದ ಕೆನರಾ ಬ್ಯಾಂಕಿನ ಉಡುಪಿ ವೃತ್ತ ಕಚೇರಿಯ ಡಿಜಿಎಂ ಪಬಿತ್ರ ಕುಮಾರದಾಸ್ ಅವರು ಬ್ಯಾಂಕಿನಿಂದ ಮೀನುಗಾರರಿಗೆ ದೊರಕುವ ಸೌಲಭ್ಯಗಳ ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಪ್ರಗತಿ ಸಾಧಿಸುವಂತೆ ಕರೆ ನೀಡಿದರು.

ಗಂಗೊಳ್ಳಿ ಗ್ರಾಪಂ ಅಧ್ಯಕ್ಷೆ ಜಯಂತಿ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ತಬ್ರೇಜ್, ಪಿಡಿಒ ಶೋಭಾ, ಕೆನರಾ ಬ್ಯಾಂಕಿನ ಗಂಗೊಳ್ಳಿ ಶಾಖೆ ಹಿರಿಯ ಪ್ರಬಂಧಕ ವಾಸು ದೇವಾಡಿಗ, ಗುಜ್ಜಾಡಿ ಶಾಖೆಯ ಪ್ರಬಂಧಕಿ ಆರತಿ ಪಾಟೀಲ್, ಮರವಂತೆ ಶಾಖೆ ಪ್ರಬಂಧಕ ಅಂಬೇಡ್ಕರ್ ಚೈತನ್ಯ ಮತ್ತಿತರರು ಉಪಸ್ಥಿತರಿದ್ದರು.

ಗಂಗೊಳ್ಳಿ ಶಾಖೆಯ ಸಹಾಯಕ ಪ್ರಬಂಧಕ ಮಂಜುನಾಥ ಆರ್.ಆರ್. ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಸಂಜೀವ ಅರಕೇರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗ್ರಾಪಂ ಸಿಬ್ಬಂದಿ ನಾರಾಯಣ ಶ್ಯಾನುಭಾಗ್ ವಂದಿಸಿದರು.

Exit mobile version