ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯಲ್ಲಿ ಯುವ ರೆಡ್ ಕ್ರಾಸ್ ಘಟಕದ ಆಶ್ರಯದಲ್ಲಿ ‘ಜಿನೇವಾ ಒಪ್ಪಂದದ ಜಾಗೃತಿ ಮತ್ತು ಪ್ರಥಮ ಚಿಕಿತ್ಸಾ ತರಬೇತಿ’ ಕಾರ್ಯಕ್ರಮ ಇತ್ತೀಚಿಗೆ ಜರುಗಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾದ ಕುಂದಾಪುರ ಭಾರತೀಯ ರೆಡ್ ಕ್ರಾಸ್ ಘಟಕ ಇದರ ಮುಖ್ಯಸ್ಥರಾದ ಜಯಕರ್ ಶೆಟ್ಟಿ ದೀಪ ಬೆಳಗಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿ, ಜಿನೇವಾ ಒಪ್ಪಂದದ ಮಹತ್ವ, ರೆಡ್ ಕ್ರಾಸ್ ಸಂಸ್ಥೆಯ ಚರಿತ್ರೆ ಅದು ವಿಶ್ವದಾದ್ಯಂತ ವ್ಯಾಪಿಸಿಕೊಂಡು ವಿವಿಧ ಕ್ಷೇತ್ರಗಳಲ್ಲಿ ನಿರ್ವಹಿಸಿದ ಕಾರ್ಯಗಳು, ವ್ಯಾಪ್ತಿ ಮತ್ತು ಮಹತ್ವವನ್ನು ತಿಳಿಸಿದರು. ಅಲ್ಲದೆ ರೆಡ್ ಕ್ರಾಸ್ ಸಂಸ್ಥೆಯ ಮುಖ್ಯ ಧೋರಣೆ ಯನ್ನು ವಿವರಿಸುತ್ತ ಯುದ್ದ, ಪ್ರವಾಹ ಹಾಗೂ ಕಷ್ಟದ ಸಂದರ್ಭದಲ್ಲಿ ಸಂಕಷ್ಟಕ್ಕೀಡಾದ ಅಸಹಾಯಕರಿಗೆ ಸಹಾಯವನ್ನು ಮಾಡುವುದು. ಮಾನವೀಯತೆಯನ್ನು ತೋರಿ ಅವರಿಗೆ ಶುಶ್ರೂಷೆಯನ್ನು ಮಾಡುವುದು. ದೇಶ ಧರ್ಮವನ್ನು ಮೀರಿ ಮನುಷತ್ವಕ್ಕೆ ಹಾಗೂ ಮಾನವೀಯತೆಗೆ ಮೊದಲ ಆದ್ಯತೆಯನ್ನು ನೀಡುವುದು ಎಂದು ವಿವರಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಇಶಾನಿ ಮೆಡಿಕಲ್ ಸೆಂಟರ್ ಇದರ ವೈದ್ಯಾಧಿಕಾರಿಯಾದ ಡಾಕ್ಟರ್ ಸೋನಿ ಪ್ರಥಮ ಚಿಕಿತ್ಸೆಯ ತರಬೇತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು. ಆರೋಗ್ಯಕ್ಕೆ ಸಂಬಂಧಪಟ್ಟ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹೇಗೆ ಪ್ರಥಮ ಚಿಕಿತ್ಸೆಯನ್ನು ನೀಡಬಹುದು ಎನ್ನುವುದನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ವಿದ್ಯಾರ್ಥಿಗಳಿಗೆ ಸಾಮಾಜಿಕ ಜವಾಬ್ದಾರಿ ಮತ್ತು ಆರೋಗ್ಯಕ್ಕೆ ಸಂಬಂಧಪಟ್ಟ ಉಪಯುಕ್ತ ಮಾಹಿತಿಯನ್ನ ಹಂಚಿಕೊಂಡರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ. ಪಟೇಲ್ ಅಧ್ಯಕ್ಷತೆಯನ್ನು ವಹಿಸಿದ್ದರು.
ಭಾರತೀಯ ರೆಡ್ ಕ್ರಾಸ್ ಘಟಕ ಕುಂದಾಪುರ ಇದರ ಖಜಾಂಜಿಯಾದ ಶಿವರಾಮ್ ಶೆಟ್ಟಿ, ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಸಂಯೋಜಕರು, ಉಪ ಪ್ರಾಂಶುಪಾಲರಾದ ಜಯಶೀಲ್ ಕುಮಾರ್, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ತೃತೀಯ ಬಿಸಿಎ ವಿದ್ಯಾರ್ಥಿನಿ ಸಿಂಚನ ನಿರೂಪಿಸಿದರು.