ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ವರ್ಷಂಪ್ರತಿ ನಡೆಯುವಂತೆ ಈ ಬಾರಿಯೂ ಗಣೇಶ ಚತುರ್ಥಿ ಹಬ್ಬವನ್ನು ಅತ್ಯಂತ ಸಂತಸ-ಸಡಗರದಿಂದ ಆಚರಿಸಲಾಯಿತು.
ಪ್ರಾತಃಕಾಲದಲ್ಲೇ ಶಾಲೆಯ ಹಟ್ಟಿಯಂಗಡಿ ಶಾಂತಾರಾಮ ವೇದಿಕೆಯಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಸಕಲ ಧಾರ್ಮಿಕ ವಿಧಿ-ವಿಧಾನಗಳನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು.
ಶ್ರೀ ಗಣೇಶನಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಿ, ಗಣೇಶನ ಮಹಿಮೆಯನ್ನು ಸಾರುವ ಭಕ್ತಿಗೀತೆಗಳನ್ನು ಹಾಡಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಕೃತ ಶಿಕ್ಷಕರಾದ ರಾಮಕೃಷ್ಣ ಉಡುಪ ವಿದಾರ್ಥಿಗಳನ್ನುದ್ದೇಶಿಸಿ ಗಣೇಶನು ದೇವತಾ ಸಮೂಹಕ್ಕೇ ನಾಯಕನಾಗಿದ್ದು, ವಿಘ್ನಗಳನ್ನು ತರುವ, ದೂರಮಾಡುವ ದೇವನಾಗಿದ್ದಾನೆ. ಆದಿಪೂಜ್ಯನಾಗಿದ್ದು, ಎಲ್ಲಾ ವಿಘ್ನಗಳನ್ನು ನಿವಾರಿಸಿ ನಮ್ಮ ಕಾರ್ಯಗಳಲ್ಲಿ ಯಶಸ್ಸನ್ನು ತಂದು ಕೊಡುವನು. ಅವನಲ್ಲಿ ನಮ್ಮ ವಿದ್ಯಾರ್ಜನೆಯು ಸಾಂಗವಾಗಿ ನಡೆದು, ಜೀವನ ಫಲಪ್ರದವಾಗುವಂತೆ ಪ್ರಾರ್ಥಿಸೋಣ ಎಂದು ಪ್ರಾರ್ಥಿಸಿದರು.
ತದನಂತರ ವಿದ್ಯಾರ್ಥಿಗಳಿಗಾಗಿ ಮೆಹಂದಿ ಸ್ಪರ್ಧೆ, ರಂಗೋಲಿ ಸ್ಪರ್ಧೆ ಮತ್ತು ವಿವಿಧ ಮೋಜಿನ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ, ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ವಿತರಿಸಲಾಯಿತು.
ಧಾರ್ಮಿಕ ಕ್ರಿಯಾ ವಿಧಾನಗಳ ನಂತರ ಅಪರಾಹ್ನದ ಅವಧಿಯಲ್ಲಿ ಗಣೇಶ ಮೂರ್ತಿಯನ್ನು ಪುರ ಮೆರವಣಿಗೆ ನಡೆಸಿ, ಶಾಲಾ ಬಾವಿಯಲ್ಲಿ ವಿಸರ್ಜಿಸಲಾಯಿತು.
ಈ ಎಲ್ಲಾ ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಮತ್ತು ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ, ಶಾಲಾ ಆಡಳಿತಾಧಿಕಾರಿ ವೀಣಾ ರಶ್ಮಿ ಎಂ., ಉಪಪ್ರಾಂಶುಪಾಲರಾದ ರಾಮ ದೇವಾಡಿಗ ಮತ್ತು ಶಿಕ್ಷಕ-ಶಿಕ್ಷಕೇತರ ವೃಂದದವರು ಸಹಭಾಗಿಗಳಾಗಿದ್ದರು.

