ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಇಲ್ಲಿನ ಸೌರ್ಪಣಿಕಾ ನದಿಯಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ಮಹಿಳೆ ವಸುಧಾ ಚಕ್ರವರ್ತಿ (46) ಅವರ ಮೃತದೇಹ ಮಾನಿನಕಾರು ಬಳಿ ಹೊಳೆಯಲ್ಲಿ ಪತ್ತೆಯಾಗಿದೆ.
ಬೆಂಗಳೂರು ತ್ಯಾಗರಾಜನಗರ ನಿವಾಸಿಯಾದ ವಸುಧಾ ಅವರು ಆಗಾಗ್ಗೆ ಕೊಲ್ಲೂರು ದೇವಳಕ್ಕೆ ಬರುತ್ತಿದ್ದು, ಆ.27ರಂದು ದೇವಸ್ಥಾನಕ್ಕೆ ಆಗಮಿಸಿದ್ದ ಸಂದರ್ಭ, ಅಕಸ್ಮಿಕವಾಗಿ ಸೌರ್ಪಣಿಕ ನದಿಯಲ್ಲಿ ಕಾಲು ಜಾರಿ ಬಿದ್ದು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದರು ಎನ್ನಲಾಗಿದೆ. ನಾಪತ್ತೆಯಾದ ಮಹಿಳೆಗಾಗಿ ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಹಾಗೂ ಅಗ್ನಿಶಾಮಕದಳ ಹುಡುಕಾಟ ನಡೆಸಿತ್ತು. ನೀರಿನ ರಭಸ ತೀವ್ರವಾಗಿರುವುದರಿಂದ ಹುಡುಕಾಟಕ್ಕೆ ಅಡ್ಡಿಯಾಗಿತ್ತು. ಆದರೂ, ಕಳೆದ ಎರಡು ದಿನಗಳಿಂದ ಈ ತಂಡ ಹುಡುಕಾಟ ನಡೆಸುತ್ತಿದ್ದು ಯಾವುದೇ ಸುಳಿವು ಲಭ್ಯವಾಗಿರಲಿಲ್ಲ.
ಅಂತಿಮವಾಗಿ ಇಂದು ಮಾವಿನಕಾರು ಬಳಿ ಮೃತದೇಹ ಪತ್ತೆಯಾಗಿದೆ. ಕೊಲ್ಲೂರು ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಗಳೊಂದಿಗೆ ಈಶ್ವರ ಮಲ್ಪೆ ಹಾಗೂ ಸ್ಥಳೀಯ ಪ್ರದೀಪ್ ಭಟ್ ಸಂಪ್ರೆ ಮೊದಲಾದವರು ಹುಡುಕಾಟದಲ್ಲಿ ತೊಡಗಿಕೊಂಡಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

