ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ರಿ. ಕರ್ನಾಟಕ – ಕೇರಳ ಹಾಗೂ ಸಮಗ್ರ ಗ್ರಾಮೀಣ ಆಶ್ರಮ ಪೆರ್ನಾಲು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು ದ. ಕ ಜಿಲ್ಲೆ ಇವರ ಸಹಕಾರದೊಂದಿಗೆ ನಮ್ಮ ನ್ಯಾಯಕೂಟ ಉದ್ಘಾಟನಾ ಕಾರ್ಯಕ್ರಮವು ಯುಗಪುರುಷ ಸಭಾಭವನ ಕಿನ್ನಿಗೋಳಿಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನಮ್ಮ ನ್ಯಾಯಕೂಟದ ಅಧ್ಯಕ್ಷರಾಗಿರುವ ಬಾಲರಾಜ್ ಕೋಡಿಕಲ್ ಅವರು ಡೋಲು ಬಾರಿಸುವುದರ ಮೂಲಕ ಹಾಗೂ ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಮೂಡಬಿದ್ರೆ ತಹಶೀಲ್ದಾರ್ ಶ್ರೀಧರ ಎಸ್. ಮುಂದಲಮನಿ ಅವರು ಡಾ. ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆಯನ್ನು ಮಾಡುವುದರ ಮೂಲಕ ಉದ್ಘಾಟನೆಯನ್ನು ಮಾಡಿದರು.

ಉದ್ಘಾಟನಾ ಮಾತುಗಳನ್ನಾಡಿದ ತಹಶೀಲ್ದಾರ್ ಸಮುದಾಯದ ಜನರಿಗೆ ಸೌಲಭ್ಯಗಳು, ಯೋಜನೆಗಳು ತಲುಪುವಲ್ಲಿ ಅಧಿಕಾರಿಯ ಕರ್ತವ್ಯವನ್ನು ನಿರ್ವಹಿಸುತ್ತೇನೆ ಎಂಬುದಾಗಿ ಭರವಸೆಯ ನುಡಿಗಳನ್ನಾಡಿದರು.
ಬಾಲರಾಜ್ ಕೋಡಿಕಲ್ ಅವರು ನಮ್ಮ ನ್ಯಾಯಕೂಟ ವ್ಯವಸ್ಥೆಯು ಸಮುದಾಯದಲ್ಲಿ ಇರಬೇಕಾದ ಅಗತ್ಯತೆ ಹಾಗೂ ನಮ್ಮ ನ್ಯಾಯಕೂಟ ವ್ಯವಸ್ಥೆಯ ಇತಿಹಾಸವನ್ನು ಪರಿಚಯ ಮಾಡಿದರು. ಸಮುದಾಯದಲ್ಲಿನ ಕೌಟುಂಬಿಕ ಕಲಹಗಳು, ಭೂಮಿ ಸಮಸ್ಯೆಗಳನ್ನು ಇತ್ಯರ್ಥ ಮಾಡಿದ ಉದಾಹರಣೆಗಳನ್ನು ನೀಡುವ ಮೂಲಕ ನಮ್ಮ ನ್ಯಾಯಕೂಟದ ಕೆಲಸ ಕಾರ್ಯಗಳನ್ನು ಜ್ಞಾಪಿಸಿದರು.
ಇನ್ನೊರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಚಂದ್ರಹಾಸ್ ಶೆಟ್ಟಿ ಮಾತನಾಡಿ, ಸಮುದಾಯದ ಒಳ್ಳೆಯ ವಿಚಾರಗಳ ಬಗ್ಗೆ, ಕೀಳರಿಮೆ ಇಲ್ಲದೆ ಅವುಗಳನ್ನು ಬೆಳೆಸಿ ಇತರ ಸಮುದಾಯಕ್ಕೆ ಮಾದರಿಯಾಗಬೇಕು ಎಂಬುದನ್ನು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು, ಕಿನ್ನಿಗೋಳಿ ಕೊರಗ ಅಭಿವೃದ್ಧಿ ಸಂಘದ ಅಧ್ಯಕ್ಷ ಸುಂದರ ಗುತ್ತಕಾಡು ವಹಿಸಿದ್ದರು. ಪದ್ಮಾವತಿ ಎಸ್. ವೇಣೂರು ಸದಸ್ಯರು, ಸಮಗ್ರ ಗ್ರಾಮೀಣ ಆಶ್ರಮ ಪೆರ್ನಾಲು, ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಶೀಲ ಕೆಮ್ಮಡೆ ಕೊರಗ ಮಹಿಳಾ ವಿವಿದೋದ್ಧೇಶ ಸಹಕಾರಿ ಸಂಘದ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿರುವ ಶುಕರಾಜ್. ಎಸ್. ಕೊಟ್ಟಾರಿ, ಜಿಲ್ಲಾ ಕಾನೂನು ಸೇವೆಗಳ ಅಭಿರಕ್ಷಕರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ದ. ಕ ಜಿಲ್ಲೆ ಇವರು ಪೋಕ್ಸೋ ಹಾಗೂ ಪೋಕ್ಸೋ ಕಾಯಿದೆ ಮತ್ತು ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳ ಕುರಿತು ವಿವರಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಸಾಥಿ ಯೋಜನೆಯ ಕುರಿತು ಸಮುದಾಯ ಬಾಂಧವರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಪಡೆದುಕೊಂಡು ಸೌಲಭ್ಯಗಳನ್ನು ಪಡೆಯಬಹುದು ಎಂಬುದನ್ನು ತಿಳಿಸಿದರು. ಈ ಮೂಲಕ ಪ್ರಾಧಿಕಾರದಿಂದ ಕಾನೂನು ರೀತಿಯ ಸೇವೆಗಳನ್ನು ಮಾಡಲು ಸದಾ ಸಿದ್ಧರಾಗಿದ್ದೇವೆ ಎಂಬುದನ್ನು ಆಶ್ವಾಸನೆ ನೀಡಿದರು.
ಲೀಲಾವತಿ ಕಾರ್ಯಕ್ರಮ ನಿರೂಪಿಸಿ, ಸುಪ್ರಿಯಾ ಎಸ್. ಕಿನ್ನಿಗೋಳಿ ಅತಿಥಿಗಳನ್ನು ಸ್ವಾಗತಿಸಿ, ಧನ್ಯವಾದ ಸಮರ್ಪಿಸಿದರು.
ನಂತರ ‘ತಿಳಿವು’ ಕೊರಗ ಸಮುದಾಯದೊಳಗೊಂದು ನೋಟದ ಕಾರ್ಯಕ್ರಮದಲ್ಲಿ ನೀಲಿ ರಿಬ್ಬನ್ ಎಂಬ ಕಿರುನಾಟಕದ ಮೂಲಕ ಮಹಿಳೆಯರ ಮೇಲಾಗುವ ದೌರ್ಜನ್ಯಗಳ ಒಂದು ಕಿರುಚಿತ್ರ ಸಾದರಪಡಿಸುವುದರೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.