ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಇಂದಿನ ಶಿಕ್ಷಣದಲ್ಲಿ ವೈದ್ಯಕೀಯ ಅಥವಾ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಮಾತ್ರ ಅವಕಾಶಗಳಿವೆ ಎಂಬ ತಪ್ಪು ಕಲ್ಪನೆ ಬೆಳೆಯುತ್ತಿದೆ. ಆದರೆ ವಿದ್ಯಾರ್ಥಿಯೂ ತನ್ನ ಆಸಕ್ತಿ, ಸಾಮರ್ಥ್ಯ ಮತ್ತು ಕನಸುಗಳಿಗೆ ತಕ್ಕಂತೆ ವಿಭಿನ್ನ ವೃತ್ತಿ ಕ್ಷೇತ್ರಗಳನ್ನು ಆರಿಸಿಕೊಳ್ಳಬಹುದು ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಕೇಂದ್ರದ ಸಂಶೋಧನಾ ವಿದ್ಯಾರ್ಥಿ ಸಕ್ಷಮ್ ಜೈನ್ ನುಡಿದರು.
ಅವರು ಆಳ್ವಾಸ್ ಪದವಿಪೂರ್ವ ಕಾಲೇಜು ಆಯೋಜಿಸಿದ್ದ “ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮಾಹಿತಿ ಕಾರ್ಯಗಾರ” ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕಲೆ, ಸಾಹಿತ್ಯ, ಸಂಗೀತ, ನೃತ್ಯ, ನಾಟಕ, ಚಿತ್ರಕಲೆ ಮುಂತಾದ ಅನೇಕ ಸೃಜನಾತ್ಮಕ ಕ್ಷೇತ್ರಗಳು ವಿದ್ಯಾರ್ಥಿಗಳಿಗೆ ದೊಡ್ಡ ಯಶಸ್ಸನ್ನು ನೀಡಬಲ್ಲವು. ವಿಜ್ಞಾನ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳನ್ನು ಮಾಡುವುದು, ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು ವಿದ್ಯಾರ್ಥಿಗಳಿಗೆ ಲಭ್ಯವಿರುವ ಇನ್ನೊಂದು ದೊಡ್ಡ ಅವಕಾಶ. ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಆಸಕ್ತಿ ಮತ್ತು ಕನಸುಗಳಿಗೆ ತಕ್ಕಂತೆ ಶಿಕ್ಷಣದ ಅನೇಕ ದಾರಿಗಳಲ್ಲಿ ಒಂದನ್ನು ಆರಿಸಿಕೊಳ್ಳಬೇಕು ಎಂದರು.
ರಾಷ್ಟ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಾದ ಸಿಎಟಿ, ಬಿಐಟಿಎಸ್ಎಟಿ , ಯುಸಿಇಇಡಿ, ವಿಐಟಿಇಇಇ, ಎನ್ಐಎಫ್ಟಿ, ಐಸಿಎಆರ್, ಎನ್ಇಎಸ್ಟಿ , ಐಎಟಿ, ಐಎಮ್ಎಟಿ , ಸಿಒಎಮ್ಇಡಿಕೆ, ಎನ್ಎಫ್ಎಟಿ ಮಾಹಿತಿ ನೀಡಿದರು.
ಮತ್ತೋರ್ವ ಸಂಪನ್ಮೂಲ ವ್ಯಕ್ತಿ ಬೆಂಗಳೂರಿನ ಭಾರತೀಯ ವಿಜ್ಞಾನ ಕೇಂದ್ರದ ಸಂಶೋಧನಾ ವಿದ್ಯಾರ್ಥಿನಿ ಕಾವ್ಯಾ ಮಾತನಾಡಿ, ಸಮಯ ನಿರ್ವಹಣೆ ಜೀವನದಲ್ಲಿ ಅತೀ ಅಗತ್ಯ. ಸಮಯ ವ್ಯರ್ಥ ಮಾಡದೇ ಉಪಯುಕ್ತವಾಗಿ ಬಳಸುವುದು ತಯಾರಿ ಹಂತದಲ್ಲಿ ಬಹಳ ಅವಶ್ಯ. ಸಮಯವನ್ನು ಸರಿಯಾಗಿ ಬಳಸಿದರೆ, ಓದು ಹಾಗೂ ವಿಶ್ರಾಂತಿಯೊಂದಿಗೆ, ಸಮತೋಲಿತ ಜೀವನ ನಡೆಸಬಹುದು. ಜೊತೆಯಲ್ಲಿ ಯಾವ ಅಧ್ಯಾಯಕ್ಕೆ ಹೆಚ್ಚು ಗಮನ ಕೊಡಬೇಕು, ಯಾವ ರೀತಿಯ ಪ್ರಶ್ನೆಗಳು ಬರುವ ಸಾಧ್ಯತೆ ಇದೆ ಎಂಬುದರ ಕುರಿತಂತೆ ಒಂದು ಸ್ಪಷ್ಟ ಯೋಜನೆ ರೂಪಿಸಬೇಕು. ಯೋಜನೆ ಇಲ್ಲದಿದ್ದರೆ ಹೆಚ್ಚು ಶ್ರಮ ಪಟ್ಟರೂ ಫಲ ಪಡೆಯಲು ಸಾಧ್ಯವಿಲ್ಲ. ಯೋಗ, ವ್ಯಾಯಾಮ, ಧ್ಯಾನ, ಹವ್ಯಾಸಗಳ ಮೂಲಕ ಒತ್ತಡವನ್ನು ಕಡಿಮೆ ಮಾಡಬಹುದು. ಒತ್ತಡವನ್ನು ನಿಯಂತ್ರಣದಲ್ಲಿಟ್ಟಾಗ ಮಾತ್ರ ಮನಸ್ಸು ಶಾಂತವಾಗಿರುತ್ತದೆ ಮತ್ತು ಅಧ್ಯಯನ ಫಲಕಾರಿಯಾಗಬಲ್ಲದು ಎಂದರು.
ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲೆ ಜಾನ್ಸಿ ಪಿ. ಎನ್. ಮತ್ತು ಕಾರ್ಯಕ್ರಮ ಸಂಯೋಜಕಿ ರಮ್ಯಾ ರೈ ಇದ್ದರು. ಆಯನಾ ವಿ. ರಮಣ್ ನಿರೂಪಿಸಿ, ಸುಪ್ರೀತ್ ವಂದಿಸಿದರು.

