Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ಬಿಲ್ಲವರ ಸಮಾಜ ಸೇವಾ ಸಂಘದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಗಂಗೊಳ್ಳಿ:
 ಅಸ್ಪೃಶ್ಯತೆ ಹಾಗೂ ಅಸಮಾನತೆಯ ವಿರುದ್ಧ ವಿದ್ಯೆ ಎನ್ನುವ ಅಸ್ತ್ರ ಮಾತ್ರವೇ ಸೆಟೆದು ನಿಲ್ಲಲು ಸಾಧ್ಯ ಎನ್ನುವ ಸಂದೇಶ ನೀಡಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳು ಒಂದೇ ಜಾತಿ, ಒಂದೇ ಮತ ಎನ್ನುವ ಅಚಲವಾದ ತತ್ವವನ್ನು ಪ್ರತಿಪಾದಿಸಿದ್ದರು. ಅಂದು ಸಮಾಜದಲ್ಲಿ ಬೇರೂರಿದ್ದ ಅಸಮಾನತೆಯ ವಿರುದ್ಧ ಶಾಂತಿ ಮಾರ್ಗದಲ್ಲಿ ಸಾಮಾಜಿಕ ಕ್ರಾಂತಿಯನ್ನು ಮಾಡಿದ್ದರು. ಅವರ ಚಿಂತನೆಗಳು ಶೋಷಿತ ವರ್ಗಕ್ಕೆ ಭವ್ಯ ಬೆಳಕಾಗಿ ಸಾವಿರಾರು ವರ್ಷಗಳ ಕಾಲ ಧಮನಿತ ವರ್ಗದ ರಕ್ಷಾ ಕವಚವಾಗಿರುತ್ತದೆ ಎಂದು ರತನ್ ರಮೇಶ ಪೂಜಾರಿ ಹೇಳಿದರು.

ಅವರು ಗಂಗೊಳ್ಳಿ ಬಿಲ್ಲವರ ಸಮಾಜ ಸೇವಾ ಸಂಘ ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಪ್ರಯುಕ್ತ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ ಗುರು ಸಂದೇಶದ ಕಾಲ್ನಡಿಗೆ ಜಾಥಾದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಿಲ್ಲವರ ಸಮಾಜ ಸೇವಾ ಸಂಘ ಗಂಗೊಳ್ಳಿ ಇದರ ಅಧ್ಯಕ್ಷ ಗೋಪಾಲ ಬಿಲ್ಲವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮತ್ತು ಬೆಂಗಳೂರಿನ ಉದ್ಯಮಿ ಶಿವ ಆರ್. ಪೂಜಾರಿ ಶುಭಾ ಶಂಸನೆಗೈದರು. ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

ತೇಜಸ್ ಪೂಜಾರಿ ಗುರುಸಂದೇಶದ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಯೋಗಾಸನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಸಂದೀಪ ಪೂಜಾರಿ ತ್ರಾಸಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಶಿವರಾಜ್ ಪೂಜಾರಿ, ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಕೃಷ್ಣ ಪೂಜಾರಿ, ಬಿಲ್ಲವರ ಯುವಕ ಸಂಘ ಗಂಗೊಳ್ಳಿ ಇದರ ಅಧ್ಯಕ್ಷ ಸುಬ್ರಹ್ಮಣ್ಯ ಪೂಜಾರಿ, ಬಿಲ್ಲವರ ಮಹಿಳಾ ಘಟಕ ಗಂಗೊಳ್ಳಿ ಇದರ ಅಧ್ಯಕ್ಷೆ ಇಂದಿರಾ ಪೂಜಾರಿ, ಮತ್ತಿತರರು ಮೊದಲಾದವರು ಉಪಸ್ಥಿತರಿದ್ದರು.

ಗಂಗೊಳ್ಳಿಯ ಶ್ರೀ ರಾಮ ಮಂದಿರದ ಬಳಿಯಿಂದ ಹೊರಟ ಗುರು ಸಂದೇಶದ ಕಾಲ್ನಡಿಗೆ ಜಾಥಾ ಮುಖ್ಯ ರಸ್ತೆ ಮೂಲಕ ಗಂಗೊಳ್ಳಿ ಬಂದರು ಬಸ್ ನಿಲ್ದಾಣದವರೆಗೆ ಸಾಗಿ ಎಲಿಮೆಂಟರಿ ಶಾಲೆಯಲ್ಲಿ ಸಮಾಪನಗೊಂಡಿತು.

ಜಯಶ್ರೀ ಪೂಜಾರಿ ಸ್ವಾಗತಿಸಿದರು. ನಿಶಾ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ನಾರಾಯಣ ಪೂಜಾರಿ ವಂದಿಸಿದರು.

Exit mobile version