Site icon Kundapra.com ಕುಂದಾಪ್ರ ಡಾಟ್ ಕಾಂ

ಹೇರಂಜಾಲು: 10ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ – ಪೌಷ್ಟಿಕ ಮಾಸಾಚರಣೆ ಕಾರ್ಯಕ್ರಮ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಆಯುರ್ವೇದದಲ್ಲಿ ತಿಳಿಸಿರುವ ದಿನಚರ್ಯೆ, ಋತುಚರ್ಯೆ, ಸದ್ವೃತ್ತ ಪಾಲನೆ ಮಾಡುವುದರಿಂದ ಆರೋಗ್ಯವಂತನು ರೋಗ ಬಾರದಂತೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಜೊತೆಯಲ್ಲಿ   ರೋಗಿಯ ರೋಗವನ್ನು ಕೂಡ ಗುಣಪಡಿಸಬಹುದು ಎಂದು  ಕಾಲ್ತೋಡು ಸ.ಆ.ಚಿ ವೈದ್ಯಾಧಿಕಾರಿ  ಡಾ. ವೀಣಾ ಕಾರಂತ್ ಹೇಳಿದರು.

ಅವರು ಎಂದು ಸರಕಾರಿ ಆಯುರ್ವೇದ ಚಿಕಿತ್ಸಾಲಯ ಕಾಲ್ತೋಡು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ – ಅಂಗನವಾಡಿ ಕೇಂದ್ರ ಹೇರಂಜಾಲು, ಆರೋಗ್ಯ ಇಲಾಖೆ – ಉಪಕೇಂದ್ರ ಹೇರಂಜಾಲು ಇವರ ಸಂಯುಕ್ತ ಆಶ್ರಯದಲ್ಲಿಅಂಗನವಾಡಿ ಕೇಂದ್ರ ಹೇರಂಜಾಲಿನಲ್ಲಿ ನಡೆದ 10ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ – ಪೌಷ್ಟಿಕ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ಮನೆಯಂಗಳದಲ್ಲಿ ಇರುವಂತಹ ಅನೇಕ ಸಸ್ಯಗಳನ್ನ ಆಹಾರವಾಗಿ ಉಪಯೋಗಿಸುವುದರಿಂದ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಜೊತೆಯಲ್ಲಿ ಅವುಗಳಿಂದಲೇ ಪೌಷ್ಟಿಕ ಆಹಾರವನ್ನು ಕೂಡ ನಾವು ಹೇಗೆ ತಯಾರಿಸಿ ಸೇವಿಸಬಹುದು. ಪೌಷ್ಟಿಕ ಆಹಾರ ಹೇಗಿರಬೇಕು ಎಂದು ತಿಳಿಸುತ್ತಾ ಅನೇಕ ಔಷಧೀಯ ಸಸ್ಯಗಳನ್ನು ಪರಿಚಯಿಸಿ, ಆಹಾರವಾಗಿ ಹಾಗೂ ಔಷಧವಾಗಿ ಹೇಗೆ ಬಳಸಬೇಕು, ಜೊತೆಯಲ್ಲಿ ನಮ್ಮ ಸಾಂಪ್ರದಾಯಿಕ ತಿನಿಸುಗಳ ಮಹತ್ವವನ್ನ ತಿಳಿಸಲಾಯಿತು.

ಹತ್ತನೇ ಆಯುರ್ವೇದ ದಿನಾಚರಣೆಯನ್ನು “ಜನರಿಗಾಗಿ ಮತ್ತು ಜಗತ್ತಿಗಾಗಿ ಆಯುರ್ವೇದ” ಎನ್ನುವ ಘೋಷ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಆಯುರ್ವೇದದ ಸಿದ್ಧಾಂತಗಳನ್ನ ಪಾಲಿಸಿರಿ, ಚಿಕಿತ್ಸಾಲಯದ ಪ್ರಯೋಜನವನ್ನು ಪಡೆದುಕೊಳ್ಳಿ ಎಂದು ತಿಳಿಸಿದರು. ಅಂಗನವಾಡಿ ಕೇಂದ್ರದ ಮಕ್ಕಳಿಗೆ ಚ್ಯವನ್ ಪ್ರಾಶ್ ವಿತರಿಸಲಾಯಿತು ಹಾಗೆ ಸಾರ್ವಜನಿಕರಿಗೆ ಆಯುಷ್ ಮಾಹಿತಿಯುಳ್ಳ ಕೈಪಿಡಿ, ಕರಪತ್ರಗಳನ್ನ ಹಂಚಲಾಯಿತು 

ಅಂಗನವಾಡಿ ಕೇಂದ್ರದಿಂದ  ಪೌಷ್ಟಿಕ ಖಾದ್ಯಗಳ ಪ್ರದರ್ಶನ, ಐಸಿಡಿಎಸ್  ರಂಗೋಲಿ ಪ್ರದರ್ಶನ, ಗರ್ಭಿಣಿ  ಮಹಿಳೆಯರಿಗೆ ಸೀಮಂತ ಕಾರ್ಯಕ್ರಮವನ್ನು ನೆರವೇರಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರ ಕಿರಿಮಂಜೇಶ್ವರ ಇಲ್ಲಿಯ ಸಿಎಚ್ಒ ಸುಭಾಷ್ ಹಾಗೂ ಪಿಎಚ್ ಸಿ ಓ ಶ್ರೀಮತಿಯವರು ಸಾರ್ವಜನಿಕರ ಮಧುಮೇಹ ಮತ್ತು ರಕ್ತದೊತ್ತಡ ಪರೀಕ್ಷೆ ನಡೆಸಿದರು.

ಕಾರ್ಯಕ್ರಮದ  ಅಧ್ಯಕ್ಷತೆಯನ್ನು ವಹಿಸಿರುವ ಗಣೇಶ ದೇವಾಡಿಗ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಕಂಬದಕೋಣೆ ಅವರು “ಆರೋಗ್ಯವೇ ಪರಮಧನ” ಆರೋಗ್ಯವನ್ನ ನಾವು ಕಾಪಾಡಿಕೊಂಡರೆ ಎಲ್ಲವನ್ನು  ಪಡೆಯಬಹುದು ಎಂದು ತಿಳಿಸುತ್ತಾ  ಸಣ್ಣಪುಟ್ಟ ತೊಂದರೆಗಳಿಗೆ ಮಾತ್ರೆಗಳ ಮೊರೆ ಹೋಗದೆ ಮನೆ ಮದ್ದಿನಿಂದಲೇ ಗುಣ ಮಾಡಿಕೊಳ್ಳಬಹುದು. ಇಂತಹ ಮಾಹಿತಿ ಕಾರ್ಯಕ್ರಮಗಳನ್ನ ಕೇಳಿ  ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು  ಎಂದು ಸಾರ್ವಜನಿಕರಿಗೆ ಕರೆ ನೀಡಿದರು.

ವೇದಿಕೆಯಲ್ಲಿ ಜಲಜಾಕ್ಷಿ ಗಾಣಿಗ ಗ್ರಾಮ ಪಂಚಾಯಿತಿ ಸದಸ್ಯರು, ರೇಖಾ ಅಂಗನವಾಡಿ ಮೇಲ್ವಿಚಾರಕರು, ನಾಗರತ್ನ ಯು ಬಾಲ ವಿಕಾಸ ಸಮಿತಿ ಅಧ್ಯಕ್ಷರು, ದಯಾನಂದ್ ಪುಟ್ಟಗಾರ್ ಶಾಲಾ ಮುಖ್ಯೋಪಾಧ್ಯಾಯರು, ಚಂದ್ರ ದೇವಾಡಿಗ ಶಿಕ್ಷಕರು,  ಸಿಎಚ್ಒ ಸುಭಾಷ್ ಪಿಎಚ್ ಸಿಓ ಶ್ರೀಮತಿ  ಉಪಸ್ಥಿತರಿದ್ದರು.

ಅಂಗನವಾಡಿ ಶಿಕ್ಷಕಿಯಾದ ಅನುಸೂಯ ಮಯ್ಯ ಕಾರ್ಯಕ್ರಮವನ್ನ ನಿರೂಪಿಸಿ, ಪ್ರಾ.ಆ.ಕೇ. ಕಿರುಮಂಜೇಶ್ವರ ಸ್ವಾಗತಿಸಿ, ಅಂಗನವಾಡಿ ಶಿಕ್ಷಕಿ  ಎಚ್. ಗೌರಿಯವರು ಧನ್ಯವಾದಗಳನ್ನು ಸಲ್ಲಿಸಿದರು.

Exit mobile version