ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ರೇಬಿಸ್ ರೋಗವು ಪ್ರಾಣಕ್ಕೆ ಮಾರಕವಾಗಿರುವ ಕಾಯಿಲೆಯಾಗಿರುವುದರಿಂದ ಆ ಬಗೆಗೆ ಪ್ರತಿಯೊಬ್ಬರಲ್ಲೂ ಕೂಡ ಸಂಪೂರ್ಣ ಅರಿವು ಇರಬೇಕಾದದ್ದು ಅತಿ ಅವಶ್ಯಕ ಎಂದು ಗುಜ್ಜಾಡಿ ಪಶು ಚಿಕಿತ್ಸಾಲಯದ ಆರೋಗ್ಯ ಅಧಿಕಾರಿ ಡಾ. ಅರುಣ್ ಕೆಪಿ ಅಭಿಪ್ರಾಯ ಪಟ್ಟರು.
ಅವರು ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಪಂಚಾಯತ್ ಉಡುಪಿ, ಪಶು ಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಡುಪಿ, ಎಸ್ವಿ ಕಾಮರ್ಸ್ ಕ್ಲಬ್ ಗಂಗೊಳ್ಳಿ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸಂಯುಕ್ತ ಆಶ್ರಯದಲ್ಲಿ ವಿಶ್ವ ರೇಬಿಸ್ ದಿನಾಚರಣೆಯ ಅಂಗವಾಗಿ ನಡೆದ ಹುಚ್ಚು ನಾಯಿ ರೇಬಿಸ್ ರೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನೆಯಲ್ಲಿನ ಸಾಕುಪ್ರಾಣಿಗಳಿಗೂ ಕೂಡ ಸಮಯಕ್ಕೆ ಸರಿಯಾಗಿ ವ್ಯಾಕ್ಸಿನೇಷನ್ ಮಾಡಿಸಬೇಕು. ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ಅಜಾಗರುಕತೆಯಿಂದ ವರ್ತಿಸಬಾರದು ಎಂದರು.
ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂಸಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಪ್ರತಿನಿಧಿ ಮಾನ್ಯ ಖಾರ್ವಿ , ಎಸ್ವಿ ಕಾಮರ್ಸ್ ಕ್ಲಬ್ ಸಂಯೋಜಕ ನರೇಂದ್ರ ಎಸ್. ಗಂಗೊಳ್ಳಿ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಸುಗುಣ ಆರ್. ಕೆ. ಉಪಸ್ಥಿತರಿದ್ದರು.
ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಅಕ್ಷಯ ಖಾರ್ವಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಜನಾ ಮತ್ತು ಲೇಖಾ ಪ್ರಾರ್ಥಿಸಿದರು. ಮೇಘ ಖಾರ್ವಿ ಸ್ವಾಗತಿಸಿ, ಅಮೂಲ್ಯ ಖಾರ್ವಿ ನಿರೂಪಿಸಿ, ಭೂಮಿಕಾ ಖಾರ್ವಿ ವಂದಿಸಿದರು.

