ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ದುಷ್ಟ ಶಕ್ತಿ ಸಂವಾರಕ್ಕಾಗಿ ನವದರ್ಗೆಯರು ಅವತರಿಸಿ, ಧರ್ಮ ರಕ್ಷಣೆಯ ಪ್ರತೀತಿ ಪಡೆದುಕೊಂಡಿದೆ. ಅದರ ಮೂಲಕ ಮಹತ್ವ ಪಡೆದ ಶರನ್ನವರಾತ್ರಿ ಉತ್ಸವ ಇಂದು ವ್ಯಾಪಕವಾಗಿ ಧಾರ್ಮಿಕ ಶ್ರದ್ಧಾ ಭಕ್ತಿಯಿಂದ ಗ್ರಾಮ ಗ್ರಾಮಗಳಲ್ಲಿ ಶಾರದೋತ್ಸವ ರೂಪದಲ್ಲಿ ಸಂಪನ್ನಗೊಳ್ಳುತ್ತಿದೆ ಎಂದು ಕೋಟದ ಅಮೃತೇಶ್ವರೀ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ. ಕುಂದರ್ ಹೇಳಿದರು.
ಅವರು ಪಾಂಡೇಶ್ವರ ಶಾಲಾ ವಠಾರದಲ್ಲಿ 32ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಆಶ್ರಯದಲ್ಲಿ ಶಾರದೋತ್ಸವ 2025 ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದ ಒಳಿತಿಗೆ ಧಾರ್ಮಿಕ ಆಚರಣೆಗಳು ವಿಶೇಷವಾಗಿ ಮನ್ನಣೆ ಪಡೆದುಕೊಂಡಿದೆ, ಗ್ರಾಮದ ಸ್ವಾಸ್ಥ್ಯ ಸಂರಕ್ಷಣೆಗೆ ಶಾರದೋತ್ಸವ ಕಾರ್ಯಕ್ರಮಗಳು ವಿಶೇಷತೆ ಪಡೆದುಕೊಂಡಿದೆ ಎಂದರಲ್ಲದೆ ಒಗ್ಗಟ್ಟಿನ ಮೂಲಕ ನಮ್ಮ ಸಂಪ್ರದಾಯ ಸಂಸ್ಕೃತಿಗಳ ಅನಾವರಣ ಈ ಪಾಂಡೇಶ್ವರ ಗ್ರಾಮದಲ್ಲಿ ಕಾಣಬಹುದಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆಯ ಅಧ್ಯಕ್ಷತೆಯನ್ನು ಶಾರದೋತ್ಸವ ಸಮಿತಿ ಅಧ್ಯಕ್ಷ ಚಂದ್ರಮೋಹನ್ ಪೂಜಾರಿ ವಹಿಸಿದ್ದರು.
ಈ ವೇಳೆ ಶಾರದೋತ್ಸವ ಸಮಿತಿಯ ಹಿರಿಯ ಸದಸ್ಯ ಪಿ.ವಿ ಸೀತಾರಾಮ ಆಚಾರ್ ಅವರನ್ನು ಸನ್ಮಾನಿಸಲಾಯಿತು. ಎಸ್ ಎಸ್ ಎಲ್ ಸಿ ಯಲ್ಲಿ ರಾಜ್ಯಕ್ಕೆ ಐದನೇ ಸ್ಥಾನ ಪಡೆದ ಕೃಷಿ ಕುಟುಂಬದ ಅನ್ವಿತಾ ಪಾಂಡೇಶ್ವರ ಅವರಿಗೆ ಪ್ರತಿಭಾ ಪುರಸ್ಕಾರಗೈಯಲಾಯಿತು. ಅಶಕ್ತರಿಗೆ ಅನಾರೋಗ್ಯ ಪೀಡಿತರಿಗೆ ನೆರವು, ಶಾರದೋತ್ಸವ ಕ್ರೀಡಾ ವಿಜೇತರಿಗೆ ಬಹುಮಾನವನ್ನು ವೇದಿಕೆಯಲ್ಲಿ ವಿತರಿಸಲಾಯಿತು.
ಮುಖ್ಯ ಅಭ್ಯಾಗತರಾಗಿ ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಕೆ.ಎಸ್ ಕಾರಂತ್, ಫಾರ್ಚುನ್ ಲೈಫ್ ಹೆಲ್ತ್ ಪ್ರೈವೇಟ್ ಲಿಮಿಟೆಡ್ ಮಾಲೀಕರಾದ ಜೋಸೆಫ್ ಎಲಿಯಾಸ್ ಮೇನೆಜಸ್, ಸಾಸ್ತಾನ ಸಂತ ಅಂತೋನಿ ಇಗರ್ಜಿಯ ಧರ್ಮ ಗುರುಗಳಾದ ಫಾದರ್ ಸುನಿಲ್ ಡಿಸಿಲ್ವಾ ಉಪಸ್ಥಿತರಿದ್ದರು.
ಶಾರದೋತ್ಸವ ಸಮಿತಿಯ ಗೌರವಾಧ್ಯಕ್ಷ ಪ್ರತಾಪ್ ಶೆಟ್ಟಿ ಸಾಸ್ತಾನ ಪ್ರಸ್ತಾವನೆ ಸಲ್ಲಿಸಿ ಸ್ವಾಗತಿಸಿದರು. ಸಮಿತಿಯ ಕಾರ್ಯದರ್ಶಿ ದಿನಕರ್ ವರದಿ ಮಂಡಿಸಿದರು. ಕಾರ್ಯಕ್ರಮವನ್ನು ಅಭಿಜಿತ್ ಪಾಂಡೇಶ್ವರ ನಿರೂಪಿಸಿದರು .
ಅಪರಾಹ್ನ ಮಹಾಪೂಜೆ ಬಾಲಾಜಿ ಭಜನಾ ಮಂಡಳಿ ಮೂಡಹಡು ಇವರಿಂದ ಭಜನಾ ಕಾರ್ಯಕ್ರಮ. ಸ್ಥಳೀಯ ಅಂಗನವಾಡಿ ಪುಟಾಣಿಗಳಿಂದ ನೃತ್ಯ ಕಾರ್ಯಕ್ರಮ. ಸಂಜೆ ಮಹಾಪೂಜೆ, ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಗಾನ ನೀನಾದ ಆರ್ಕೆಸ್ಟ್ರಾ ಇವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮಗಳು ಜರುಗಿತು.
ಗುರುವಾರ ಶಾರದೋತ್ಸವ ಸಂಪನ್ನ
ಶಾರದೋತ್ಸವ ಸಮಾರೋಪ ಕಾರ್ಯಕ್ರಮದ ಅಂಗವಾಗಿ ಚಂಡಿಕಾ ಯಾಗ ಮಹಾಪೂಜೆ ಪ್ರಸಾದ ವಿತರಣೆ ಸ್ಥಳೀಯ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಅಪರಾಹ್ನ ಮಹಾ ಅನ್ನಸಂತರ್ಪಣೆ, ಸಂಜೆ ಪುರ ಮೆರವಣಿಗೆಯೊಂದಿಗೆ ಶಾರದ ಮಾತೆಯ ಶೋಭಾ ಯಾತ್ರೆ ವಿಸರ್ಜನಾ ಕಾರ್ಯಕ್ರಮ ಜರುಗಿತು.