Kundapra.com ಕುಂದಾಪ್ರ ಡಾಟ್ ಕಾಂ

ಅಪರಾಧ ತಡೆ ಮಾಸಾಚರಣೆ ಹಾಗೂ ವಿದ್ಯಾರ್ಥಿಗಳಿಗೆ ಕಾನೂನು ಅರಿವು

ಬೈಂದೂರು: ಅಪ್ರಾಪ್ತರು ಅಪರಾಧ ಮಾಡಿದರೂ ಕೂಡಾ ಅವರಿಗೆ ಎಲ್ಲಾ ರೀತಿ ಕಾನೂನು ಅನ್ವಯಿಸುತ್ತದೆ. ಅಪಘಾತವಾಗುವುದು ಆಕಸ್ಮಿಕವಾದರೂ ಅದು ಕೂಡಾ ಅಪರಾಧದ ಒಂದು ಭಾಗವೇ ಆಗಿದೆ. ಮುಂಜಾಗೃತೆಯಿಂದ ಅಪರಾಧ ತಡೆಯುವ ಪ್ರಯತ್ನ ಮಾಡಬಹುದು. ವಿದ್ಯಾರ್ಥಿಗಳು ಮುಂದೆ ಹೆಜ್ಜೆಯಿಡುವ ಮೊದಲು ಸರಿಯಾಗಿ ಯೋಚಿಸಿ ನಿರ್ಧರಿಸಿ ಎಂದು ಬೈಂದೂರು ವೃತ್ತ ನಿರೀಕ್ಷಕ ಸುದರ್ಶನ್ ಮುದ್ರಾಡಿ ಹೇಳಿದರು.

ಬೈಂದೂರು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಬೈಂದೂರು ಆರಕ್ಷಕ ಠಾಣೆ ವತಿಯಿಂದ ನಡೆದ ಅಪರಾಧ ತಡೆ ಮಾಸಾಚರಣೆ ಹಾಗೂ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮೂಡಿಸುವ ಸಭೆಯಲ್ಲಿ ಮಾತನಾಡಿದರು.

ವಿಶ್ವದಲ್ಲಿ ಸಮಾನ ಮನಸ್ಕರಿದ್ದರೆ ಅಪರಾಧ ಪ್ರಕರಣಗಳು ನಡೆಯುತ್ತಿರಲಿಲ್ಲ. ಗೊತ್ತಿಲ್ಲದೇ ಮಾಡುವ ಅಪರಾಧವೂ ಕೂಡಾ ಶಿಕ್ಷರ್ಹವೆ. ವಿದ್ಯಾರ್ಥಿಗಳಿಗೆ ಕನಿಷ್ಟಪಕ್ಷ ಕಾನೂನಿನ ಬಗ್ಗೆ ಜ್ಞಾನವಿರಬೇಕು ಎಂದರು. ವೇಶ್ಯಾವಾಟಿಕೆ, ಮಾದಕವಸ್ತು ಮಾರಾಟಕ್ಕಾಗಿ ಬಳಸಿಕೊಳ್ಳಲು ದೊಡ್ಡ ನೌಕರಿ ಹೆಚ್ಚು ಸಂಬಳದ ಆಸೆ ತೋರಿಸಿ ಯುವಕ-ಯುವತಿಯರನ್ನು ಹೊರರಾಜ್ಯಕ್ಕೆ ಕಳುಹಿಸುವ ಮಾನವ ಕಳ್ಳ ಸಾಗಾಣಿಕೆ ಹೆಚ್ಚು ನಡೆಯುತ್ತಿದೆ. ಇದರಿಂದ ಕೆಲವರು ಮಾರಕ ರೋಗಗಳಿಗೆ ತುತ್ತಾಗಿ ಆತ್ಮಹತ್ಯೆ ಮಾಡಿಕೊಂಡರೆ ಇನ್ನು ಕೆಲವರು ವ್ಯಸನದ ದಾಸರಾಗಿ ಸಾಯುತ್ತಿದ್ದಾರೆ. ನಿಮ್ಮ ಪರಿಸರದಲ್ಲಿ ಈ ರೀತಿಯ ವ್ಯವಹಾರಗಳು ಕಂಡುಬಂದರೆ ಮಹಿಳಾ ಮತ್ತು ಶಿಶುಕಲ್ಯಾಣ ಇಲಾಖೆಗೆ ಮಾಹಿತಿ ನೀಡಿ ಜೊತೆಗೆ ಪೋಲೀಸರಿಗೂ ತಿಳಿಸಿ. ನಾವು ನೀವು ಸೇರಿ ಅಪರಾಧ ತಡೆಯುವ ಪ್ರಯತ್ನ ಮಾಡಿ ಅಪರಾಧಮುಕ್ತ ಸಮಾಜ ನಿರ್ಮಾಣ ಮಾಡೋಣ ಎಂದು ವಿದ್ಯಾರ್ಥಿಗಳಿಗೆ ತಿಳುವಳಿಕೆ ಜೊತೆಗೆ ಮನವಿ ಮಾಡಿದರು.

ಕಾಲೇಜು ಪ್ರಾಚಾರ್ಯ ಪಾಲಾಕ್ಷ ಟಿ ಅಧ್ಯಕ್ಷತೆವಹಿಸಿದ್ದರು. ಠಾಣಾಧಿಕಾರಿ ಸಂತೋಷ್ ಕಾಯ್ಕಿಣಿ ಉಪಸ್ಥಿತರಿದ್ದರು. ಬೈಂದೂರು ಪರಿಸರದಲ್ಲಿ ಸ್ಥಳೀಯ ಆರಕ್ಷಕ ಠಾಣೆಯ ವತಿಯಿಂದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮವು ಒಂದು ಆಂದೋಲನದಂತೆ ನಡೆಯುತ್ತಿದ್ದು, ಎಲ್ಲಾ ವರ್ಗದ ಧರ್ಮದ ಸಾರ್ವಜನಿಕರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ.

Exit mobile version