Kundapra.com ಕುಂದಾಪ್ರ ಡಾಟ್ ಕಾಂ

ರೈತರ ಅನಿರ್ದಿಷ್ಟಾವಧಿ ಧರಣಿ ನಿರತ ಸ್ಥಳಕ್ಕೆ ಸಚಿವ ಮಂಕಾಳ ವೈದ್ಯ ಭೇಟಿ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಇಲ್ಲಿನ ಪ.ಪಂ. ವ್ಯಾಪ್ತಿಯಿಂದ ಗ್ರಾಮೀಣ ಪ್ರದೇಶಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿ ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಅವರ ನೇತೃತ್ವದಲ್ಲಿ ಕಳೆದ 17 ದಿನಗಳಿಂದ ಇಲ್ಲಿನ ಆಡಳಿತಸೌಧದ ಎದುರು ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ನಿರತ ಸ್ಥಳಕ್ಕೆ ರಾಜ್ಯದ ಮೀನುಗಾರಿಕಾ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್. ಮಂಕಾಳ ವೈದ್ಯ ಭೇಟಿ ಮಾಡಿ ಚರ್ಚಿಸಿದರು.

ಅವರು ನಂತರ ಮಾತನಾಡಿ, ಈ ಭಾಗದ ರೈತರ ಹೋರಾಟ ನ್ಯಾಯ ಸಮ್ಮತವಾಗಿದೆ. ಜಿಲ್ಲಾಧಿಕಾರಿಗಳು ಕಳಿಸಿರುವ ವರದಿಯನ್ನು ಆಧರಿಸಿ ಸಂಬಂಧಪಟ್ಟ ಸಚಿವರ ಜೊತೆ ಮಾತನಾಡಿ ರಾಜ್ಯದ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ರಾಜ್ಯದ ಮುಖ್ಯಮಂತ್ರಿಗಳು ರೈತರ ಪರ ಇರುವುದರಿಂದ ಖಂಡಿತ ನ್ಯಾಯ ದೊರಕುತ್ತದೆ ಎಂದರು. ಹೀಗಾಗಿ ಧರಣಿಯನ್ನು ಕೈಬಿಡುವಂತೆ ಮನವಿ ಮಾಡಿದರು.ಇದಕ್ಕೆ ಪ್ರತಿಕ್ರಯಿಸಿದ ರೈತರು ನಮ್ಮ ಧರಣಿ ನ್ಯಾಯಪರ ಆಗ್ರಹ ಬಿಟ್ಟರೆ ಇತರ ಯಾವುದೇ ಉದ್ದೇಶಗಳಿಲ್ಲ.ಹೀಗಾಗಿ ಸಚಿವಾಲಯ, ಸರಕಾರ ಹಾಗೂ ಜಿಲ್ಲಾಡಳಿತದಿಂದ ಲಿಖಿತ ಉತ್ತರ ದೊರಕಿದರೆ ಧರಣಿ ಕೈಬಿಡಲು ಸಿದ್ದರಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಶಿರೂರು ರೈತ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ ಹೊಸ್ಮನೆ, ಹರೀಶ್ ತೋಳಾರ್, ರಘುರಾಮ ಕೆ.ಪೂಜಾರಿ, ಸುಭಾಷ್ ಗಂಗನಾಡು, ಮ್ಯಾಥ್ಯೂ ಕೆ.ಎಸ್., ರವೀಂದ್ರ ಶೆಟ್ಟಿ ಪಟೇಲ್, ಹೆರಿಯ ಪೂಜಾರಿ, ಚಿಕ್ಕು ಪೂಜಾರಿ, ಪದ್ಮಾಕ್ಷ ಗೋಳಿಬೇರು, ಕೃಷ್ಣ ದೇವಾಡಿಗ, ಸುರೇಶ ಪೂಜಾರಿ, ದೊಟ್ಟಯ್ಯ ಪೂಜಾರಿ, ವೆಂಕಟ ಪೂಜಾರಿ ಶಿರೂರು, ಅರುಣ್‌ಕುಮಾರ್ ಶಿರೂರ, .ವೀರಭದ್ರ ಗಾಣಿಗ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ರೈತರು ಉಪಸ್ಥಿತರಿದ್ದರು.

Exit mobile version