Site icon Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ಸರಸ್ವತಿ ವಿದ್ಯಾಲಯದಲ್ಲಿ ಭಾಷಾ ಸಾಮರಸ್ಯ ಕಾರ್ಯಕ್ರಮ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಗಂಗೊಳ್ಳಿ:
 ಹೆಚ್ಚು ಭಾಷೆಗಳನ್ನು ನಾವು ಕಲಿತಷ್ಟು ನಮ್ಮ ಜ್ಞಾನದ ಪರಿಧಿ ವಿಸ್ತಾರಗೊಳ್ಳುತ್ತಾ ಹೋಗುತ್ತದೆ. ಭಾಷಾ ಸಾಮರಸ್ಯದ ಮೂಲಕ ಸೌಹಾರ್ದಯುತ ಸಮಾಜ ನಿರ್ಮಾಣ ಸಾಧ್ಯ ಎಂದು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರಾಘವೇಂದ್ರ ಶೇರುಗಾರ್ ಅಭಿಪ್ರಾಯಪಟ್ಟರು. 

ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ, ಎಸ್.ವಿ ಕಾಮರ್ಸ್ ಕ್ಲಬ್ ಗಂಗೊಳ್ಳಿ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಹಾಗು ಶ್ರೀ ನಾರಾಯಣ ಗುರು ಜನ ಸೇವಾ ಬಳಗದ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ರೋಟರಿ ಸಭಾಂಗಣದಲ್ಲಿ  ಕನ್ನಡ ರಾಜ್ಯೋತ್ಸವದ ಪೂರ್ವಭಾವಿಯಾಗಿ ನಡೆದ ಭಾಷಾ ಸಾಮರಸ್ಯ ಕಾರ್ಯಕ್ರಮದಲ್ಲಿ  ಮಾತನಾಡಿದರು.

ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ನಾರಾಯಣ ಗುರು ಜನ ಸೇವಾ ಬಳಗದ ಕಾರ್ಯದರ್ಶಿ ಕಾರ್ತಿಕ್ ಬಿ. ಖಾರ್ವಿ ಶುಭ ಹಾರೈಸಿದರು.  ವಿದ್ಯಾರ್ಥಿ ಪ್ರತಿನಿಧಿ ಲಕ್ಷ್ಮಿನಿಮಿತ  ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ  ಅಮೂಲ್ಯ ಮತ್ತು ಮಾದರಿ ಕನ್ನಡ ಭಾಷೆಯ ಮಹತ್ವದ ಕುರಿತು ಮಾತನಾಡಿದರು.

 ದೀಪಾಲಿ, ಶ್ರಾವ್ಯ, ಸಾನಿಕ ಪ್ರಾರ್ಥಿಸಿದರು. ಎಸ್‌.ವಿ ಕಾಮರ್ಸ್ ಕ್ಲಬ್ ಸಂಯೋಜಕ ನರೇಂದ್ರ ಎಸ್. ಗಂಗೊಳ್ಳಿ  ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸನ್ಮಿತಾ  ಸ್ವಾಗತಿಸಿ, ಅಭಿಜ್ಞಾ ಖಾರ್ವಿ ನಿರೂಪಿಸಿ, ದ್ರುಪಿತಾ ವಂದಿಸಿದರು.

Exit mobile version