Kundapra.com ಕುಂದಾಪ್ರ ಡಾಟ್ ಕಾಂ

ಜಯಪ್ರಕಾಶ್ ಹೆಗ್ಡೆಯದ್ದು ಬಂಡಾಯವಲ್ಲ. ಅಧಿಕಾರ ದಾಹವಷ್ಟೇ: ಪ್ರತಾಪ್ಚಂದ್ರ ಶೆಟ್ಟಿ ಆರೋಪ

ಬೈಂದೂರು: ಇಲ್ಲಿನ ರೋಟರಿ ಸಭಾಭವದಲ್ಲಿ ಯಡ್ತರೆ, ಬೈಂದೂರು, ಪಡುವರಿ ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ಪ್ರತಿನಿಧಿಗಳು ಹಾಗೂ ಕಾರ್ಯಕರ್ತರ ಸಭೆ ಜರುಗಿತು. ವಿಧಾನ ಪರಿಷತ್ ಅಭ್ಯರ್ಥಿ ಪ್ರತಾಪ್‌ಚಂದ್ರ ಶೆಟ್ಟಿ ಮಾತನಾಡಿ ಬೇರೆಯವರಿಗೂ ಅವಕಾಶ ನೀಡಬೇಕೆಂಬ ಉದ್ದೇಶದಿಂದ ತಾನು ಸ್ವರ್ಧಿಸುವುದಿಲ್ಲ ಎಂದು ಹೇಳಿದ್ದೆ. ಆದರೆ ಈಗ ಪಕ್ಷದ ಕಾರ್ಯಕರ್ತರು, ವರಿಷ್ಠರು ಮತ್ತೆ ಸ್ವರ್ಧಿಸಬೇಕೆಂಬ ತೀರ್ಮಾನ ಕೈಗೊಂಡಿದ್ದಾರೆ. ಅವರ ನಿರ್ಧಾರಕ್ಕೆ ಬದ್ಧನಾಗಿದ್ದೇನೆ ಎಂದ ಅವರು ಜಯಪ್ರಕಾಶ್ ಹೆಗ್ಡೆಯವರಿಗೆ ಸಾಕಷ್ಟು ಅವಕಾಶ ಮಾಡಿಕೊಟ್ಟಿದೆ. ಎರಡು ಭಾರಿ ಸೋತವರಿಗೆ ಮತ್ತೆ ಅವಕಾಶ ಮಾಡಿಕೊಡಬಾರದೆಂಬ ನಿಯಮವನ್ನೂ ಮೀರಿ ಸ್ವರ್ಧಿಸಲು ಅನುವು ಮಾಡಿಕೊಟ್ಟಿತ್ತು. ಇನ್ನೂ ಅವರಿಗೇ ಮಾನ್ಯತೆ ನೀಡಬೇಕು ಎನ್ನುವುದಲ್ಲಿ ಅರ್ಥವಿಲ್ಲ. ಜಯಪ್ರಕಾಶ್ ಹೆಗ್ಡೆಯವರದ್ದು ಬಂಡಾಯವಲ್ಲ. ಅಧಿಕಾರ ದಾಹದ ನಡೆಯಷ್ಟೇ. ಇವರು ಯಾವ ಪಕ್ಷದಲ್ಲೂ ಶಾಶ್ವತವಾಗಿ ಇರಲಾರರು. ನಾವು ಜಯಪ್ರಕಾಶ್ ಹೆಗ್ಡೆಯವರನ್ನು ಟೀಕಿಸುತ್ತಿಲ್ಲ. ಬದಲಿಗೆ ಅವರ ನಡೆಯನ್ನು ಖಂಡಿಸುತ್ತಿದ್ದೇವೆ ಎಂದರು. (ಕುಂದಾಪ್ರ ಡಾಟ್ ಕಾಂ ಸುದ್ದಿ)

ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಶಾಸಕ ಗೋಪಾಲ ಪೂಜಾರಿ ಮಾತನಾಡಿ ಕಾಂಗ್ರೆಸ್ ಪ್ರತಾಪ್‌ಚಂದ್ರ ಶೆಟ್ಟಿ ಪಕ್ಷದ ಇತರ ನಾಯಕರಿಗೂ ಅವಕಾಶ ಸಿಗಬೇಕೆಂಬ ಕಾರಣಕ್ಕೆ ಚುನಾವಣೆಗೆ ಸ್ವರ್ಧಿಸುವುದಿಲ್ಲ ಎಂದು ಹೇಳಿದರೇ ವಿನಾಃ ರಾಜಕೀಯ ಸಂನ್ಯಾಸ ತೆಗೆದುಕೊಳ್ಳುವ ಉದ್ದೇಶ ಅವರಿಗಿರಲಿಲ್ಲ. ಈಗ ಪಕ್ಷದ ಕಾರ್ಯಕರ್ತರೇ ಒತ್ತಾಯಿಸಿರುವಾಗ ಅವರ ಮಾತಿಗೆ ಬೆಲೆ ನೀಡಬೇಕಾದ್ದು ನಾಯಕರ ಜವಾಬ್ದಾರಿ. ಅದರ ಮುಂದೆ ಯಾವುದೂ ಮುಖ್ಯವೆನಿಸುವುದಿಲ್ಲ ಎಂದರು.

ಕಾಂಗ್ರೆಸ್ ಮುಖಂಡ ಮಂಜುನಾಥ ಭಂಡಾರಿ ಮಾತನಾಡಿ ಗೆಲ್ಲುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷಕ್ಕೆ ಬರುವವರಿಗೆ ಮಣೆ ಹಾಕುವ ಬದಲಿಗೆ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಮಾನ್ಯತೆ ನೀಡುವುದು ಒಳ್ಳೆಯದು. ಪದೆ ಪದೆ ಪಕ್ಷ ಬದಲಿಸುವವರಿಂದ ಕಾರ್ಯಕರ್ತರಿಗೆ ಗೊಂದಲ ಉಂಟುಮಾಡುತ್ತಿದೆ. ಈ ಭಾರಿಯಾದವರೂ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದ ಹಿರಿಯ ಮುಖಂಡರನ್ನೇ ಗೆಲ್ಲಿಸಬೇಕಾಗಿದೆ ಎಂದು ಹೇಳಿದರು. (ಕುಂದಾಪ್ರ ಡಾಟ್ ಕಾಂ ಸುದ್ದಿ)

ಕಾಂಗ್ರೆಸ್ ಮುಂದಾಳುಗಳಾದ ಮಂಜುನಾಥ ಭಂಡಾರಿ, ಎಂ.ಎ. ಗಪೂರ್, ಕೆ.ಎಫ್‌ಡಿಸಿ ಅಧ್ಯಕ್ಷ ಹಿರಿಯಣ್ಣ, ಎಐಸಿಸಿ ಸದಸ್ಯ ರಘುರಾಮ ಶೆಟ್ಟಿ, ರಾಜು ಪೂಜಾರಿ, ರಾಮ ಶೇರುಗಾರ್, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಗಾಣಿಗ, ಕಾರ್ಯದರ್ಶಿ ನಾಗರಾಜ ಗಾಣಿಗ, ಕುಂದಾಪುರ ಬ್ಲಾಕ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಬೈಂದೂರು ಪಂಚಾಯತ್ ಅಧ್ಯಕ್ಷ ಯು. ಜನಾರ್ಧನ್, ಉಪಾಧ್ಯಕ್ಷೆ ಸುಶೀಲ, ಯಡ್ತರೆ ಗ್ರಾ.ಪಂ ಅಧ್ಯಕ್ಷ ನಾಗರಾಜ ಶೆಟ್ಟಿ, ಉಪಾಧ್ಯಕ್ಷೆ ಕಲಾವತಿ ನಾಗರಾಜ್, ಪುರಸಭೆ ಸದಸ್ಯೆ ದೇವಕಿ ಸಣ್ಣಯ್ಯ, ಪ್ರಕಾಶ್ಚಂದ್ರ ಶೆಟ್ಟಿ, ಸಂತೋಷ್‌ಕುಮಾರ್ ಶೆಟ್ಟಿ, ಸುಬ್ರಮಣ್ಯ ಪೂಜಾರಿ, ರಿಯಾಜ್ ಅಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು.

Exit mobile version