Site icon Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆಯ್ದ 21 ಶಾಲೆಗಳ ವಿದ್ಯಾರ್ಥಿಗಳಿಗೆ ಸ್ಕೂಲ್ ಕಿಟ್ ವಿತರಣೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಸರಕಾರದ ಅನುದಾನವನ್ನು ಕಾಯದೇ ಸರಕಾರೇತರ ಸಂಸ್ಥೆಗಳ ಸಹಯೋಗ ಪಡೆದು ಸರಕಾರಿ ಶಾಲೆಗಳಿಗೆ ಬೇಕಾದ ಮೂಲ ಸೌಲಭ್ಯ ನಿರಂತರ ಒದಗಿಸಿದ್ದಲ್ಲಿ ಸರ್ಕಾರಿ ಶಾಲೆಗಳು ಉಳಿಯಲು ಸಾಧ್ಯ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.

ಅವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜಡ್ಕಲ್ ಅಲ್ಲಿ ನಡೆದ ಸಮೃದ್ಧ ಬೈಂದೂರು ಪರಿಕಲ್ಪನೆಯ “300 ಟ್ರೀಸ್” ಯೋಜನೆಯಲ್ಲಿ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ಯೂಥ್ ಫಾರ್ ಸೇವಾ ಬೆಂಗಳೂರು ಹಾಗೂ ಸ್ವಯಂ ಸ್ಫೂರ್ತಿ ಫೌಂಡೇಶನ್ ಬೆಂಗಳೂರು ಇವರ ಸಹಯೋಗದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆಯ್ದ 21 ಶಾಲೆಗಳ ವಿದ್ಯಾರ್ಥಿಗಳಿಗೆ ಸ್ಕೂಲ್ ಕಿಟ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್, ಯೂಥ್ ಫಾರ್ ಸೇವಾ ಹಾಗೂ ಸ್ವಯಂ ಸ್ಫೂರ್ತಿ ಫೌಂಡೇಶನ್ ಇವರ ಸರಕಾರಿ ಶಾಲೆ ಉಳಿಯುವ ನಿಟ್ಟಿನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ಬಹಳ ಮಹತ್ತರವಾದದ್ದು ಎಂದು ಅಭಿಪ್ರಾಯಪಟ್ಟರು.

ಶಾಲಾ ಬ್ಯಾಗ್, ನೋಟ್ ಪುಸ್ತಕ ಹಾಗೂ ಶಾಲಾ ಪರಿಕರಗಳನ್ನು ಒಳಗೊಂಡ  ಸುಮಾರು 400ಕ್ಕೂ ಹೆಚ್ಚು ಸ್ಕೂಲ್ ಕಿಟ್ ಗಳನ್ನು  ವಿತರಿಸಲಾಯಿತು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜಡ್ಕಲ್ ಇದರ ಎಸ್ ಡಿ ಎಂ ಸಿ ಅಧ್ಯಕ್ಷರಾದ ಗಣೇಶ್ ನಾಯ್ಕ್ ವಹಿಸಿದ್ದರು.

ಜಡ್ಕಲ್ ಪಂಚಾಯತಿಯ ಅಧ್ಯಕ್ಷರಾದ ಪಾರ್ವತಿ ಬೆಳಾರಿ, ಪಂಚಾಯತ್ ಸದಸ್ಯರಾದ ವಿ.ಜೆ. ದೇವದಾಸ್, ಲಕ್ಷ್ಮಿ ಚಂದನ್, ನಾರಾಯಣ ಶೆಟ್ಟಿ, ಲಕ್ಷ್ಮಣ್ ಶೆಟ್ಟಿ, ಸೂಲ್ಯಾ ಭೋವಿ, ಯೂತ್ ಫೋರ್ ಸೇವಾ ಬೆಂಗಳೂರು ಇವರ ವತಿಯಿಂದ ಹರೀಶ್ ಭಟ್, ಸ್ವಯಂ ಸ್ಪೂರ್ತಿ ಫೌಂಡೇಶನ್ ಬೆಂಗಳೂರು ಇದರ ಸ್ಥಾಪಕರಾದ ನಾಗರಾಜ ಶೆಟ್ಟಿ, ಶಿಕ್ಷಣ ಇಲಾಖೆಯ ಸಿ.ಆರ್.ಪಿ ಶೈಲಜಾ, ರಾಘವೇಂದ್ರ, ಜಡ್ಕಲ್ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮಂಜುನಾಥ ನಾಯ್ಕ್ ಉಪಸ್ಥಿತರಿದ್ದರು.

ಶಾಲೆಯ ಮುಖ್ಯೋಪಾಧ್ಯಾಯರಾದ  ರೋಸಮ್ಮ ಸೇಬಸ್ಟನ್ ಸ್ವಾಗತಿಸಿ, ಶಿಕ್ಷಕರಾದ ಸುಮಲತಾ ಮತ್ತು ಗೀತ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕರಾದ ವಿನುತಾ ಹಾಗೂ ಅಭಿಲಾಷ್ ವಂದಿಸಿದರು.

Exit mobile version