Site icon Kundapra.com ಕುಂದಾಪ್ರ ಡಾಟ್ ಕಾಂ

ಶ್ರೀ ಶಂಕರರು ಮನುಕುಲದ ಶ್ರೇಷ್ಠ ದಾರ್ಶನಿಕರು

ಬೈಂದೂರು: ಆಚಾರ್ಯ ಶಂಕರ ಭಗವತ್ಪಾದರು ಪ್ಲೇಟೋ, ಐನ್‌ಸ್ಟೇನ್‌ರಂತೆ ವಿಶ್ವದ ಶ್ರೇಷ್ಠ ದಾರ್ಶನಿಕರು. ಇವರ ವಿಚಾರಧಾರೆಗಳು ದೇಶ, ಕಾಲ ಪರಿಧಿಯನ್ನು ಮೀರಿ ಪರಮ ಸತ್ಯದ ಅನ್ವೇಷಣೆ ಮತ್ತು ಅನುಭವಕ್ಕೆ ತಕ್ಕುದಾದುದು ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷ ಉಪ್ಪುಂದ ಚಂದ್ರಶೇಖರ ಹೊಳ್ಳ ಹೇಳಿದರು. ಉಪ್ಪುಂದ ಶಂಕರ ಕಲಾ ಮಂದಿರದಲ್ಲಿ ಶೃಂಗೇರಿಯ ಶಾಂಕರ ತತ್ತ್ವ ಪ್ರಸಾರ ಅಭಿಯಾನಂ ಶೃಂಗೇರಿ ಇವರು ಆಯೋಜಿಸಿದ ಶ್ರೀಶಂಕರ ಅಷ್ಟೋತ್ತರ ಶತಮಾನ ಜಪ ಯಜ್ಞವನ್ನು ತಾಲೂಕಿನಾದ್ಯಂತ ನಡೆಸುವ ಸಂಕಲ್ಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವಿಶ್ವಾದ್ಯಂತ ಭಾರತ ದೇಶವು ಹಿಂಜರಿಕೆ ಮತ್ತು ಕ್ಲ್ಯಷ್ಟಗಳಿಂದ ಮುಕ್ತವಾಗಿ ಮುನ್ನುಗುತ್ತಿರುವ ಈ ದಿನಗಳಲ್ಲಿ ಆಚಾರ್ಯರು ಪ್ರತಿಪಾದಿಸಿದ ಒಂದು ಸತ್ಯ ಒಂದು ರಾಷ್ಟ್ರ. ಆದರೆ ಅನೇಕ ರೂಪುಗಳು, ಭಾವಗಳು ಎಂಬುವುದರಿಂದ ಸ್ಪೂರ್ತಿ ಪಡೆಯಬಹುದು. ಯಾವುದೇ ವಿಚಾರ ನಿಂತ ನೀರಾಗದೆ ಕಾಲಗತಿಯಲ್ಲಿ ಪರಂಪರೆಯಿಂದ ಪುಷ್ಠಿ ಪಡೆಯುವುದು. ಇಲ್ಲಿ ವ್ಯಕ್ತಿ ಮುಖ್ಯವಾಗದೆ ತತ್ತ್ವವೂ ಪ್ರಸ್ತುತವಾಗುತ್ತದೆ ಎಂದರು.
ಸಮಿತಿ ಗೌರವಾಧ್ಯಕ್ಷ ಬಿ.ರಾಮಕೃಷ್ಣ ಶೇರೆಗಾರ್ ಅಧ್ಯಕ್ಷತೆವಹಿಸಿದ್ದರು. ಯು. ಅಭಯ ಮಯ್ಯ ಪ್ರಾರ್ಥಿಸಿದರು. ಉಪ್ಪುಂದ ವರಮಹಾಲಕ್ಷ್ಮೀ ಹೊಳ್ಳ ಪಠಣಕ್ಕೆ ಮಾರ್ಗದರ್ಶನ ನೀಡಿದರು. ವಿವಿಧ ಕೇಂದ್ರಗಳ ಮುಖ್ಯಸ್ಥರಾದ ಯು ಗಣೇಶ ಪ್ರಸನ್ನ ಮಯ್ಯ, ಯು ಸಂದೇಶ ಭಟ್, ಯು. ಮಹಾಬಲೇಶ್ವರ ಐತಾಳ, ಎಂ ತಿರುಮಲೇಶ್ವರ ಭಟ್, ಕೆ ಸದಾಶಿವ ಶಾನುಭಾಗ, ಎಂ ಸುರೇಶ ಅವಭೃತ, ಕೇಶವ ನಾಯ್ಕ, ವಿ.ಎಚ್ ನಾಯ್ಕ, ಯು ಮಂಜುನಾಥ ಭಟ್ ಸಂಕಲ್ಪ ಕೈಗೊಂಡು ಪುಸ್ತಕ ಸ್ವೀಕರಿಸಿದರು.

Exit mobile version