Site icon Kundapra.com ಕುಂದಾಪ್ರ ಡಾಟ್ ಕಾಂ

ನ.15ರಂದು ʼಬ್ರಾಹ್ಮೀ ಭಕ್ತವೃಂದ ಬೆಂಗಳೂರುʼ ಸಂಯೋಜನೆಯ ಕಮಲಶಿಲೆ ಯಕ್ಷೋತ್ಸವ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಬೆಂಗಳೂರಿನ ಬ್ರಾಹ್ಮೀ ಭಕ್ತವೃಂದ ನವೆಂಬರ್ 15 ಶನಿವಾರ ರಾತ್ರಿ 9:30ಕ್ಕೆ  ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕೃಷ್ಣಾರ್ಜುನ ಕಾಳಗ, ಭಾರ್ಗವ ವಿಜಯ, ಮೈಂದ ದ್ವಿವಿದ ಮತ್ತು ರುಕ್ಮಾವತಿ ಕಲ್ಯಾಣ ಎಂಬ ಪೌರಾಣಿಕ ಪ್ರಸಂಗದ ಯಕ್ಷಗಾನ ಆಯೋಜಿಸಿದ್ದು, ಯಕ್ಷಾಭಿಮಾನಿಗಳ ಮನರಂಜಿಸಲು ಸಜ್ಜಾಗಿದೆ.

ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ಅಮ್ಮನವರ ಭಕ್ತಾದಿಗಳೆಲ್ಲಾ ಸೇರಿ ಮಹಾನಗರಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ವೇದಿಕೆಯಲ್ಲಿ  ಶ್ರೀ ಕ್ಷೇತ್ರ ಕಮಲಶಿಲೆ ಯಕ್ಷಗಾನ ಮೇಳದ ಮರದ ಹಲಗೆಗಳ ಸಾಂಪ್ರದಾಯಿಕ ರಂಗಸ್ಥಳ ವೈಭವದಲ್ಲಿ ಸಂಯೋಜಿಸುತ್ತಿರುವ ಯಕ್ಷಗಾನ ಬಯಲಾಟ ಯಶಸ್ವಿ 4 ಪ್ರದರ್ಶನ ಕಂಡು, 5ನೇ ವರ್ಷಕ್ಕೆ ಅಂಬೆಗಾಲಿಡುತ್ತಿದೆ.

ಕಮಲಶಿಲೆ ಅಮ್ಮನವರ ಬಹು ಬೇಡಿಕೆಯ ಸೇವೆಯಲ್ಲಿ ಒಂದಾದ ಪ್ರೀತಿಯ ಬೆಳಕಿನ ಸೇವೆ ಎಂದೇ ಪ್ರಸಿದ್ಧಿ ಪಡೆದ ಯಕ್ಷಗಾನ ಸೇವೆಯನ್ನು ಮಹಾ ನಗರಿಯಲ್ಲಿ ಪ್ರದರ್ಶಿಸುವ ಕನಸುಹೊತ್ತ, ಕ್ಷೇತ್ರದಿಂದ ಉದ್ಯೋಗದ ನಿಮಿತ್ತ ಬೆಂಗಳೂರಿನಲ್ಲಿ ಜೀವನ ಕಂಡು “ಒಗ್ಗಟ್ಟಿನಲ್ಲಿ ಬಲವಿದೆ, ಯಕ್ಷ ಸೌರಭದಲ್ಲಿ ನಲಿವಿದೆ, ಯಶಸ್ವಿಯಾಗಲು ತಾಯಿ ಬ್ರಾಹ್ಮೀ ದುರ್ಗೆಯ ಅಭಯವಿದೆ” ಎಂದು ನಂಬಿದ ತಾಯಿಯ ಭಕ್ತರರೆಲ್ಲರೂ ಕೂಡಿಕೊಂಡ ಸಹೃದಯೀ ಮನಸುಗಳ ಸಮೂಹವೇ ಬ್ರಾಹ್ಮೀ ಭಕ್ತವೃಂದ ಬೆಂಗಳೂರು.

ʼಹಳಬೇರು-ಹೊಸ ಚಿಗುರುʼ ಸಮಾಗಮಕ್ಕೆ ಹಿರಿಯ ಮತ್ತು ಕಿರಿಯ ಬಾಗವತರು ಮೆರುಗುತಂದು, ಪುಷ್ಪಾಲಂಕೃತ ಬೆಳ್ಳಿ ತೊಟ್ಟಿಲ ಸೊಬಗಿನಲ್ಲಿ, ಅದ್ಭುತ ನಾದಸ್ವರದ ಜೇಂಕಾರದಲ್ಲಿ,  ಪಂಜುಗಳ ಅಬ್ಬರದಲ್ಲಿ, ಸಾಂಪ್ರದಾಯಕ ಬಡಗು ತಿಟ್ಟಿನ ವೇಷಾಲಂಕಾರ ಮತ್ತು ಕಲಾವಿದರ ಮನೋಜ್ನ ಅಭಿನಯವು ಮಹಾನಗರಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನಗೊಂಡು ಯಶಸ್ವಿಯಾಗಿ ಮೇಳೈಸಿ, ಅಸಂಖ್ಯಾತ ಪ್ರೇಕ್ಷಕ ಮಹಾಪ್ರಭುಗಳ ಮನಗೆದ್ದ ಸಂಪೂರ್ಣ ಬಡಗುತ್ತಿಟ್ಟಿನ  ಶೈಲಿಯಲ್ಲಿನ ದೇವಿ ಮಹಾತ್ಮೆ ಕಳೆದ ವರುಷದ ಸಂಯೋಜನೆ.

AI ತಂತ್ರಜ್ನಾನದ ಮೂಲಕ ಮೊಟ್ಟಮೊದಲ ಬಾರಿಗೆ ಯಕ್ಷಗಾನದ ಪಾತ್ರಗಳನ್ನು ಕಾರ್ಟೂನ್ ಅವತರಣಿಕೆಯಲ್ಲಿ Posterನ ಬಿಂಬಿಸಿ ಪ್ರಚಾರಕ್ಕೆ ಮುನ್ನಡಿ ಬರೆದದ್ದು ನಮ್ಮ ಹೆಮ್ಮೆ. ಕಾರ್ಯಕ್ರಮದ ಪ್ರವೇಶ ಉಚಿತವಾಗಿರುತ್ತದೆ.

Exit mobile version