Site icon Kundapra.com ಕುಂದಾಪ್ರ ಡಾಟ್ ಕಾಂ

ತ್ವರಿತ ಲಾಭದ ಕಡೆಗೆ ಹೆಚ್ಚಿನ ಒಲವು ಬೇಡ, ಹಂತ ಹಂತವಾಗಿ ಬೆಳೆಯಿರಿ: ಮಾಲಿನಿ ಸುವರ್ಣ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬ್ರಹ್ಮಾವರ:
ಗ್ರಾಮಾಭಿವೃದ್ಧಿ ಮತ್ತು ಸ್ವ – ಉದ್ಯೋಗ ತರಬೇತಿ (ರುಡ್ ಸೆಟ್) ಸಂಸ್ಥೆ ಬ್ರಹ್ಮಾವರ ಇವರ ಆಶ್ರಯದಲ್ಲಿ ಹಪ್ಪಳ, ಉಪ್ಪಿನಕಾಯಿ ಹಾಗೂ ವಿವಿಧ ರೀತಿಯ ಮಸಾಲ ಪೌಡರ್ ತಯಾರಿಕೆ ತರಬೇತಿಯ ಉದ್ಘಾಟನಾ ಸಮಾರಂಭವು ಇತ್ತೀಚಿಗೆ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಂಗಳೂರು ಸಹಾಯಕ ಮಹಾ ಪ್ರಭಂದಕರಾದ ಮಾಲಿನಿ ಸುವರ್ಣ ಅವರು  ಮಾತನಾಡಿ, ಬ್ಯಾಂಕಿನ ಹೆಚ್ಚಿನ ಯೋಜನೆಗಳು ಕಿರು ಉದ್ಯಮಗಳಿಗೆ ಸಾಲ ಸೌಲಭ್ಯಗಳನ್ನು ಒದಗಿಸುತ್ತದೆ ಅದನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳುವುದರ ಬಗೆಗೆ ಪ್ರಯತ್ನ ಮಾಡಿ, ಹಾಗೂ ಉತ್ಪನ್ನವನ್ನು ತಯಾರಿಸುವಾಗ ಗುಣಮಟ್ಟದೊಂದಿಗೆ  ಶುಚಿತ್ವದ ಕಡೆಗೆ ಗಮನ ನೀಡಿ ಎಂದರು. 

ನಂತರ ನಾವು ತಯಾರಿಸುವ ಉತ್ಪನ್ನಗಳಲ್ಲಿ ಹಿಂದಿನ ಕಾಲದ ಅಡುಗೆಯ ರುಚಿ ಹಾಗು ಉತ್ಪನ್ನದಲ್ಲಿ ವೈವಿಧ್ಯತೆಯ ಜೊತೆಗೆ ಶುಚಿತ್ವದ ಕಡೆಗೆ ಗಮನ ಕೊಟ್ಟರೆ, ಗ್ರಾಹಕರು ತಮ್ಮನ್ನು ಹುಡುಕಿಕೊಂಡು ಬರುವ ಮಟ್ಟಿಗೆ  ಬೆಳೆಯಲು ಸಾಧ್ಯವಾಗುತ್ತದೆ. ಜೊತೆಗೆ ಮುಖ್ಯವಾಗಿ  ಈಗಿನ ಉದ್ಯಮದಾರರು ತ್ವರಿತ ಯಶಸ್ಸಿಗೆ ಹಾಗೂ ಲಾಭಕ್ಕಾಗಿ ಹಾತೊರೆದು, ಉತ್ಪನ್ನದ ಗುಣಮಟ್ಟವನ್ನು ಕಳೆದುಕೊಳ್ಳುತ್ತಾರೆ. ಹಾಗಾಗಿ ಉದ್ಯಮದಲ್ಲಿ ಅವಸರ ಬೇಡ, ಹಂತ ಹಂತವಾಗಿ ಮುಂದುವರಿಯಿರಿ, ಮಾರುಕಟ್ಟೆಯ ಸ್ಥಿತಿಯನ್ನು ಅರ್ಥೈಸಿಕೊಳ್ಳಿ. ಗುಣಮಟ್ಟದ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಿ ಎಂದು ಹೇಳಿ ಶಿಬಿರಾರ್ಥಿಗಳಿಗೆ ಶುಭಹಾರೈಸಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ರುಡ್ ಸೆಟ್ ಸಂಸ್ಥೆಯ ಉಪನ್ಯಾಸಕರಾದ ಸಂತೋಷ್ ಶೆಟ್ಟಿ ಮಾತನಾಡಿ, ಸಂಸ್ಥೆಯು ನೀಡುವ ತರಬೇತಿಯನ್ನು ಶ್ರದ್ಧೆಯಿಂದ ಪಡೆಯಿರಿ. ಆಹಾರ ಉದ್ಯಮ ಎಲ್ಲ ಕಾಲದಲ್ಲೂ ಬೇಡಿಕೆಯನ್ನು ಸೃಷ್ಟಿಸುವ ಉದ್ಯಮವಾಗಿದೆ. ಹಾಗಾಗಿ ಗುಣಮಟ್ಟದೊಂದಿಗೆ ಉದ್ಯಮವನ್ನು ಪ್ರಾರಂಭಿಸಿ, ಯಶಸ್ಸು ಸಾಧಿಸುವುದು ಸುಲಭ ಸಾಧ್ಯವಾಗುತ್ತದೆ. ಗ್ರಾಹಕರ ಮನಸ್ಥಿತಿಯನ್ನು ಅರ್ಥೈಸಿಕೊಂಡು ಉತ್ತಮವಾದ ಮಾತುಕಥೆ, ಹಾಗು ಮಾನವೀಯ ಮೌಲ್ಯದೊಂದಿಗೆ ಉತ್ತಮವಾಗಿ ಉದ್ಯಮವನ್ನು ನಡೆಸಿದಲ್ಲಿ  ಹೆಚ್ಚು ಕಾಲ ಉದ್ಯಮದಲ್ಲಿ ನೆಲೆಯೂರಲು ಸಾಧ್ಯವಾಗುತ್ತದೆ ಎಂದು ಹೇಳಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ  ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.  ಉಪನ್ಯಾಸಕಿ ಚೈತ್ರ ಕೆ.ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿದರು, ಹಿರಿಯ ಕಛೇರಿ ಸಹಾಯಕರಾದರವಿ ಸಾಲ್ಯಾನ್ ವಂದಿಸಿದರು.

Exit mobile version