ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಮ್ಮ ದೇಶ ಹಲವು ಕಲೆ, ಸಾಹಿತ್ಯ, ಸಂಸ್ಕ್ರತಿಯನ್ನು ಹೊಂದಿದೆ. ಆಧುನಿಕತೆ ಬೆಳೆದಂತೆ ಯುವ ಸಮುದಾಯ ಸಂಸ್ಕ್ರತಿ, ಸಂಪ್ರದಾಯಗಳನ್ನು ಮರೆಯುತ್ತಿದೆ. ಇಂತಹ ಸ್ಥಿತಿಯಲ್ಲಿ ಕಲೆ, ಸಾಹಿತ್ಯ ಹಾಗೂ ಸಂಸ್ಕ್ರತಿಯನ್ನು ಉಳಿಸುವಲ್ಲಿ ಕರಾವಳಿ ಯುವಶಕ್ತಿ ಸದಸ್ಯರ ಸಾಧನೆ ಶ್ಲಾಘನೀಯವಾಗಿದೆ ಮತ್ತು ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘ ಯಡ್ತರೆ ಇದರ ಅಧ್ಯಕ್ಷ ಟಿ. ನಾರಾಯಣ ಹೆಗ್ಡೆ ತಗ್ಗರ್ಸೆ ಹೇಳಿದರು.
ಅವರು ಭಾನುವಾರ ಕರಾವಳಿ ಯುವಶಕ್ತಿ ಸಭಾ ವೇದಿಕೆಯಲ್ಲಿ ನಡೆದ ಯುವಶಕ್ತಿ ಕಲಾ ಮತ್ತು ಸಾಂಸ್ಕ್ರತಿಕ ಪ್ರತಿಷ್ಠಾನ ಇದರ ಯಕ್ಷಗಾನ ಹಾಗೂ ಭರತನಾಟ್ಯ ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಮಾತುಗಳನ್ನಾಡಿದರು.

ಬೈಂದೂರು ಶ್ರೀರಾಮ ಸೌಹಾರ್ಧ ಕ್ರೆಡಿಟ್ ಕೋ-ಅಪರೇಟಿವನ್ ಅಧ್ಯಕ್ಷ ಎಸ್. ರಾಜು ಪೂಜಾರಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಉತ್ತಮ ಚಿಂತನೆಗಳನ್ನು ಒಳಗೊಂಡು ಊರಿನ ಅಭಿವೃದ್ದಿಗೆ ಶ್ರಮಿಸುವ ಚಿಂತನೆ ಹೊಂದಿದೆ. ಇಂತಹ ಯುವ ಸಂಘಟನೆಯಿಂದ ಊರಿನ ಬೆಳವಣಿಗೆ ಚಟುವಟಿಕೆಗಳಿಂದ ಕೂಡಿರುತ್ತದೆ. ಇಂದಿನ ಯುವ ಪೀಳಿಗೆಗೆ ಯಕ್ಷಗಾನ,ಭರತನಾಟ್ಯ ತರಬೇತಿ ಆರಂಭಿಸಿರುವುದು ಅನೇಕ ಪ್ರತಿಭಾವಂತ ಮಕ್ಕಳಿಗೆ ವೇದಿಕೆ ದೊರಕಿಸಿಕೊಟ್ಟಂತಾಗುತ್ತದೆ ಎಂದರು.
ಯುವಶಕ್ತಿ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಯಶವಂತ ಬಿಲ್ಲವ ಅಧ್ಯಕ್ಷತೆ ವಹಿಸಿದ್ದರು.
ರಾಮ ಬಿಲ್ಲವ ಬೇಡುಮನೆ ಪ್ರಾರ್ಥಿಸಿದರು. ಮುಖ್ಯ ಅತಿಥಿಗಳಾಗಿ ಶಿರೂರು ಯಕ್ಷ ಸಂಪದ ಕಲಾ ಬಳಗದ ಅಧ್ಯಕ್ಷ ಚಿಕ್ಕು ಪೂಜಾರಿ, ಯುವಶಕ್ತಿ ಉತ್ಸವ ಸಮಿತಿ ಅಧ್ಯಕ್ಷ ಚಂದ್ರ ಮೊಗೇರ್, ಉದ್ಯಮಿ ರಘುರಾಮ ಕೆ. ಪೂಜಾರಿ, ಶಿರೂರು ರೈತ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ ಹೊಸ್ಮನೆ, ನಿವೃತ್ತ ಶಿಕ್ಷಕ ಗೋವಿಂದ ಬಿಲ್ಲವ, ಬೈಂದೂರು ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಕೃಷ್ಣ ಪೂಜಾರಿ, ಯುವಶಕ್ತಿ ಗೌರವಾಧ್ಯಕ್ಷ ನಾಗಪ್ಪ ಬಿಲ್ಲವ ಅಣ್ಣುಮನೆ, ಮಾಜಿ ಗೌರವಾಧ್ಯಕ್ಷ ವಾಸು ಬಿಲ್ಲವ ತೆಂಕಮನೆ, ಕಾರ್ಯದರ್ಶಿ ನಾಗರಾಜ ಚಂಬಿತ್ಲು, ಯಕ್ಷಗಾನ ತರಬೇತುದಾರ ಶ್ರೀಧರ ಬಿಜೂರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅತ್ಯುತ್ತಮ ರಾಜ್ಯ ಪ್ರಶಸ್ತಿ ಪುರಸ್ಕ್ರತರಾದ ಸಿ.ಎನ್. ಬಿಲ್ಲವ ಹಾಗೂ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರಾದ ರವೀಂದ್ರ ಶೆಟ್ಟಿ ಹೊಸ್ಮನೆ ಅವರನ್ನು ಗೌರವಿಸಲಾಯಿತು.
ಯುವಶಕ್ತಿ ಮಾಜಿ ಕಾರ್ಯದರ್ಶಿ ಮಹೇಶ ಮೊಗೇರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿವೃತ್ತ ಶಿಕ್ಷಕ ಮಾಧವ ಬಿಲ್ಲವ ಕಾಳನಮನೆ ಸ್ವಾಗತಿಸಿದರು. ಯುವಶಕ್ತಿ ಮಾಜಿ ಅಧ್ಯಕ್ಷ ಅರುಣ್ ಕುಮಾರ್ ಶಿರೂರು ಕಾರ್ಯಕ್ರಮ ನಿರ್ವಹಿಸಿದರು. ಉಪ ಕಾರ್ಯದರ್ಶಿ ಗಿರೀಶ್ ಕರಾವಳಿ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಗಣಪತಿ ಬಿಲ್ಲವ ಬೇಡುಮನೆ ಹಾಗೂ ಪಲ್ಲವಿ ಅವರಿಂದ ಯಕ್ಷಗಾನ ಗಾನವೈಭವ ನಡೆಯಿತು. ಬಳಿಕ ಕೃಷ್ಣಾರ್ಜುನ ಕಾಳಗ ತಾಳಮದ್ದಲೆ ನಡೆಯಿತು.
—