Kundapra.com ಕುಂದಾಪ್ರ ಡಾಟ್ ಕಾಂ

ಮೊಬೈಲ್ ರಿಪೇರಿ ಮತ್ತು ಸೇವೆ ತರಬೇತಿಯ ಸಮಾರೋಪ ಸಮಾರಂಭ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬ್ರಹ್ಮಾವರ:
 ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್ ಸೆಟ್) ಸಂಸ್ಥೆ ಬ್ರಹ್ಮಾವರ ಇವರ ಆಶ್ರಯದಲ್ಲಿ ಮೊಬೈಲ್ ರಿಪೇರಿ ಮತ್ತು ಸೇವೆ ತರಬೇತಿಯ ಸಮಾರೋಪ ಸಮಾರಂಭವು ಇತ್ತೀಚಿಗೆ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉಡುಪಿ ಜಿಲ್ಲಾ ಯೋಜನಾ ವ್ಯವಸ್ಥಾಪಕರಾಧ ಸಂಧ್ಯಾ ಅವರು ಮೊಬೈಲ್ ರಿಪೇರಿ ಮತ್ತು ಸೇವೆ ತರಬೇತಿಯ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಬಹಳ ಬೇಡಿಕೆ ಇರುವ ತರಬೇತಿಯನ್ನು  ಆಯ್ಕೆ ಮಾಡಿಕೊಂಡಿದ್ದೀರಿ. ಅದೇ ರೀತಿ ಸಂಸ್ಥೆ ಬಹಳ ಉನ್ನತ ಮಟ್ಟದ ಸಂಸ್ಥೆಯಾಗಿದೆ. ಮೊದಲನೇ ಹಂತ ತಳಮಟ್ಟ ತರಬೇತಿಯಲ್ಲಿ ತಮ್ಮನ್ನು ತಾವೂ ಯಶಸ್ವಿಗೊಳಿಸಿದ್ದೀರಿ. ರುಡ್ಸೆಟ್ ಸಂಸ್ಥೆಯು ತಮ್ಮನ್ನು ಸ್ವ ಉದ್ಯೋಗವನ್ನು ಕೈಗೊಳ್ಳಲು ಬೇಕಾಗುವ ಎಲ್ಲಾ ಮಾಹಿತಿಗಳನ್ನು ತರಬೇತಿಯ ಅವಧಿಯಲ್ಲಿ ಒದಗಿಸಿದೆ. 

ಮೊಬೈಲ್ ರಿಪೇರಿ ಮತ್ತು ಸೇವೆ ಉದ್ಯಮವು ದಿನದಿಂದ ದಿನಕ್ಕೆ ಬೇಡಿಕೆಯನ್ನು ಹಾಗೂ ಕುತೂಹಲವನ್ನು ಮೂಡಿಸುವ ಉದ್ಯಮವಾಗಿದೆ. ಹಾಗಾಗಿ ಉದ್ಯಮವನ್ನು ನಡೆಸಲು ಬೇಕಾಗುವ ಸಾಲಸೌಲಭ್ಯವನ್ನು ಸಂಸ್ಥೆಯ ಮುಖಾಂತರ ಒದಗಿಸುತ್ತೇವೆ. ಆದ್ದರಿಂದ ಆತ್ಮವಿಶ್ವಾಸದಿಂದ ಉದ್ಯಮವನ್ನು ಪ್ರಾರಂಭಿಸಿ, ಸಮಾಜದಲ್ಲಿ ಯಶಸ್ವಿ ಉದ್ಯಮಿಗಳಾಗಿ ಎಂದು ಹೇಳಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ರುಡ್ ನಿರ್ದೇಶಕರಾದ ಡಾ. ಬೊಮ್ಮಯ್ಯ ಎಂ. ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿಯನ್ನು ಪಡೆದುಕೊಂಡಿದ್ದೀರಿ. ಯಾವುದೇ ಅಂಜಿಕೆಯಿಲ್ಲದೆ ಸ್ವಉದ್ಯೋಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಆರ್ಥಿಕವಾಗಿ ಸಧೃಢರಾಗಿ ಎಂದು  ಹೇಳಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. 

ಈ ಸಂದರ್ಭದಲ್ಲಿ ಉಪನ್ಯಾಸಕಿ ಚೈತ್ರ ಕೆ. ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿದರು. ಹಿರಿಯ ಉಪನ್ಯಾಸಕರಾದ ಸಂತೋಷ್ ವಂದಿಸಿದರು.

Exit mobile version