Kundapra.com ಕುಂದಾಪ್ರ ಡಾಟ್ ಕಾಂ

ತೆಕ್ಕಟ್ಟೆ ವಿಶ್ವ ವಿನಾಯಕ ಸಿ.ಬಿ.ಎಸ್.ಇ ಶಾಲೆಯ 20ನೇ ವಾರ್ಷಿಕೋತ್ಸವ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ತೆಕ್ಕಟ್ಟೆಯ ವಿಶ್ವ ವಿನಾಯಕ ಸಿ.ಬಿ.ಎಸ್.ಇ ಶಾಲೆಯ 20ನೇ ವಾರ್ಷಿಕೋತ್ಸವವನ್ನು ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಯಟ್ ಕಾಲೇಜು ಪ್ರಾಂಶುಪಾಲರಾದ ಡಾ. ಅಶೋಕ ಕಾಮತ್ ದೀಪ ಬೆಳಗುವುದರ ಮೂಲಕ  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳ ಚಿಕ್ಕ ಚಿಕ್ಕ ಸಾಧನೆಗಳನ್ನು ಪ್ರೋತ್ಸಾಹಿಸಿ. ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವ ಕೆಲಸ ಪೋಷಕರು ಹಾಗೂ ಶಾಲೆಯಿಂದ ಆಗಬೇಕು ಎಂದು ತಿಳಿಸಿದರು.  

ಕಾರ್ಯಕ್ರಮದ ಗೌರವ ಅತಿಥಿಗಳಾದ ಡಾ. ವಾದಿರಾಜ ಗೋಪಾಡಿ ಮಾತನಾಡಿ, ಶಿಕ್ಷಣ ಎಂದರೆ ಮಗುವಿನ ಒಳಗಿನ ಜ್ಞಾನ ಹಾಗೂ ಪ್ರಜ್ಞೆಯನ್ನು ಹೊರ ಜಗತ್ತಿಗೆ ತರುವುದಾಗಿದೆ. ಎಲ್ಲವೂ ಮಗುವಿನಲ್ಲಿ ಅಡಗಿರುತ್ತದೆ. ಅದರ ಜವಾಬ್ದಾರಿ ಪೋಷಕರು, ಸಮಾಜ ಹಾಗೂ ಶಾಲೆಯದ್ದಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ ಮ್ಯಾನೇಜಿಂಗ್ ಡೈರೆಕ್ಟರ್ ಎಮ್. ಪ್ರಭಾಕರ ಶೆಟ್ಟಿ ಅವರು ಮಾತನಾಡಿ, ಪೋಷಕರ ಸಹಕಾರಕ್ಕೆ ಧನ್ಯವಾದಗಳನ್ನು ತಿಳಿಸಿದರು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಗುಣಮಟ್ಟದ ಕಾಲೇಜು ಆರಂಭವಾಗುವುದಾಗಿ ತಿಳಿಸಿದರು.

ವೇದಿಕೆಯಲ್ಲಿ ಶಾಲಾ ಮ್ಯಾನೇಜಿಂಗ್ ಟ್ರಸ್ಟಿ ಸುಧಾಕರ ಶೆಟ್ಟಿ ಹಾಗೂ ಬಿ. ಸೀತಾರಾಮ ಶೆಟ್ಟಿ, ಕಾರ್ಯಕ್ರಮದಲ್ಲಿ ಶಾಲಾ ಮ್ಯಾನೇಜಿಂಗ್ ಟ್ರಸ್ಟಿಗಳಾದ ಕರುಣಾಕರ ಶೆಟ್ಟಿ, ದಿನಕರ್ ಶೆಟ್ಟಿ ಹೊಸ್ಮಠ ಹಾಗೂ ಡಾಕ್ಟರ್ ಕುಸುಮಾಕರ್ ಶೆಟ್ಟಿ, ಶಿಕ್ಷಕರು, ವಿದ್ಯಾರ್ಥಿಗಳು, ಶಾಲಾ ಸಿಬ್ಬಂದಿ ವರ್ಗ ಹಾಗೂ ಪೋಷಕರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಾದ ಯುಕ್ತಿ ಶೆಟ್ಟಿ, ಯುಗ ಶೆಟ್ಟಿ ಹಾಗೂ ಸುಮೇಧ ತುಂಗ ಅವರಿಗೆ ಫಲಪುಷ್ಪ ನೀಡಿ ಪ್ರತಿಭಾ ಪುರಸ್ಕಾರವನ್ನು ನೆರವೇರಿಸಲಾಯಿತು. ವಾರ್ಷಿಕೋತ್ಸವದ ಅಂಗವಾಗಿ ಶಾಲಾ ಮಕ್ಕಳಿಂದ ವಿವಿಧ ಮನೋರಂಜನಾ  ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಸಂಸ್ಥೆಯ ಪ್ರಾಂಶುಪಾಲ ನಿತಿನ್ ಡಿ’ ಆಲ್ಮೇಡಾ ಶಾಲಾ ವಾರ್ಷಿಕ ವರದಿ ವಾಚಿಸಿದರು. ವಿದ್ಯಾರ್ಥಿಗಳಾದ ಸನ್ನಿಧಿ ಸ್ವಾಗತಿಸಿ, ತಾರುಣ್ಯ ಪರಿಚಯಿಸಿ, ಅಮೂಲ್ಯ ಹಾಗೂ ಬಿಂದುಶ್ರೀ ನಿರೂಪಿಸಿ, ಪ್ರಾರ್ಥನಾ ಕಾಮತ್ ವಂದಿಸಿದರು. 

Exit mobile version