Kundapra.com ಕುಂದಾಪ್ರ ಡಾಟ್ ಕಾಂ

ಮಕ್ಕಳಿಗೆ ಶಿಕ್ಷಣದ ಜೊತೆಗೆ ಕರ್ತವ್ಯ ಪ್ರಜ್ಞೆಯ ಅರಿವು ಮೂಡಿಸಬೇಕಿದೆ: ವೃತ್ತ ನಿರೀಕ್ಷಕ ಸುದರ್ಶನ್

ಬೈಂದೂರು: ಮಕ್ಕಳಿಗೆ ಶಾಲೆಯಲ್ಲಿ ಕೇವಲ ಶಿಕ್ಷಣ ಮಾತ್ರವಲ್ಲದೇ ಕರ್ತವ್ಯ ಪ್ರಜ್ಞೆ ಕಾನೂನುಗಳ ಅರಿವುಗಳಂತಹ ಸಾಮಾನ್ಯಜ್ಞಾನವನ್ನು ಎಳೆವೆಯಲ್ಲಿ ಕಲಿಸುವ ಮೂಲಕ ಅವರು ಸರಿದಾರಿಯಲ್ಲಿ ಸಾಗುವ ರೀತಿಯಲ್ಲಿ ಜಾಗೃತಿ ಮೂಡಿಸಬೇಕು. ಶಿಕ್ಷಣ ಪಡೆಯತ್ತಿರುವ ಮಕ್ಕಳು ಮೊದಲು ಮಾನಸಿಕವಾಗಿ ಬಲಿಷ್ಟರಾಗಬೇಕು ಎಂದು ಬೈಂದೂರು ವೃತ್ತ ನಿರೀಕ್ಷಕ ಸುದರ್ಶನ್ ಮುದ್ರಾಡಿ ಹೇಳಿದರು.

ನಾಗೂರು ಸಂದೀಪನ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಸ್ಥಾಪಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ ಮೂಲಕವೂ ಸಾಧನೆಗೆ ಅವಕಾಶಗಳನ್ನು ಕಲ್ಪಿಸಬೇಕು. ಸಮಾಜದ ಕುರಿತ ಕಳಕಳಿ, ಸಜ್ಜನರ, ಗುರು-ಹಿರಿಯರ ಸಲಹೆ, ಸೂಚನೆ ಮತ್ತು ಮಾರ್ಗದರ್ಶನದ ಮೂಲಕ ದೇಶದ ಅಭ್ಯುದಯಕ್ಕೆ ಇಂದಿನ ಮಕ್ಕಳು ಕಾರಣರಾಗಬೇಕು ಎಂದರು.

ಮಕ್ಕಳು ದೇಶದ ಆಸ್ತಿ. ಹೆತ್ತವರ ಅತೀಯಾದ ಪ್ರೀತಿ ಮಕ್ಕಳ ಭವಿಷ್ಯಕ್ಕೆ ಮಾರಕವಾಗಬಹುದು. ಎಂದು ಎಚ್ಚರಿಸಿದ ಅವರು ಕೇವಲ ಪದವಿಪತ್ರ (ಡಿಗ್ರಿ ಸರ್ಟಿಫಿಕೇಟ್) ಮಾತ್ರ ಮಾನದಂಡವಾಗಬಾರದು. ಪಾಲಕರು ಮಕ್ಕಳ ಆಸಕ್ತಿಯ ವಿಷಯಗಳನ್ನು ಸೂಕ್ಷವಾಗಿ ಗಮನಿಸಿ ಆರಂಭದಿಂದಲೇ ಅವರ ಪ್ರತಿಭೆಗೆ ತಕ್ಕಂತೆ ವೇದಿಕೆ ನಿರ್ಮಿಸಬೇಕು. ಎಲ್ಲಾ ಕ್ಷೇತ್ರದ ಬಗ್ಗೆಯೂ ಮಕ್ಕಳಿಗೆ ತಿಳುವಳಿಕೆ ನೀಡಿ ಹಂತ ಹಂತವಾಗಿ ಅವರನ್ನು ದೇಶದ ಸತ್ಪ್ರಜೆಯಾಗಿ ಬೆಳೆಸಬೆಕು ಎಂದು ಪೋಷಕರಿಗೆ ಸಲಹೆ ನೀಡಿದರು.

ಖಂಬದಕೋಣೆ ಆರ್. ಕೆ. ಸಂಜೀವ ರಾವ್ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಅಕಾಡೆಮಿಯ ಅಧ್ಯಕ್ಷ ಕೆ. ಎಸ್. ಪ್ರಕಾಶ್ ರಾವ್ ಅಧ್ಯಕ್ಷತೆವಹಿಸಿದ್ದರು. ಪಾಠ, ಪಾಠೇತರ ವಿಷಯಗಳ ಬಗ್ಗೆ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಕೆ. ಸಂಜೀತ್ ರಾವ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಬಿ. ವಿಶ್ವೇಶ್ವರ ಅಡಿಗ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಜೇಷ್ಟಾ ಪ್ರಭು ಮತ್ತು ಅನನ್ಯ ಕಾರ್ಯಕ್ರಮ ನಿರೂಪಿಸಿದರು. ಜ್ಯೋತಿ ಮಯ್ಯ ವಂದಿಸಿದರು.

Exit mobile version